ಅಂಶಿ ಪ್ರಸನ್ನಕುಮಾರ್‌

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಅರಮನೆ ಎದುರಿನ ಸಾರ್ವಜನಿಕ ಕಟ್ಟಡ ಪಾರಂಪರಿಕವಾದುದು. ಇದು ''''''''ಕಾಡಾ'''' (ಕಾವೇರಿ ಅಚ್ಚುಕಟ್ಟು ಪ್ರಾಧಿಕಾರ) ಕಚೇರಿ ಎಂದೇ ಪ್ರಸಿದ್ಧಿ. ಇಲ್ಲಿ ಕೃಷಿ ಇಲಾಖೆಯೂ ಕಾರ್ಯನಿರ್ವಹಿಸುತ್ತಿದೆ. ಕೃಷಿ ಇಲಾಖೆಯ ಕಾರಿಡಾರಿನಲ್ಲಿ ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಡೆಯುತ್ತಿರುವ ರೈತ ಸಂತೆಗೆ ಈಗ ದಶಮಾನೋತ್ಸವ ಸಂಭ್ರಮ!

ಅವಿಭಜಿತ ಮೈಸೂರು ಜಿಲ್ಲೆಯ ಪ್ರಮುಖ ರೈತ ಮುಖಂಡರಲ್ಲಿ ಒಬ್ಬರಾದ ರೈತ ಸಂಘ ಸಂಸ್ಥಾಪಕ ಪ್ರೊ.ಎಂ.ಡಿ. ನಂಜುಂಡಸ್ವಾಮಿ ಅವರ ಆದರ್ಶ ಪಾಲಿಸುತ್ತಿರುವ ಆಲೂರು ಮೂರ್ತಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂತೆ ಆರಂಭಕ್ಕೆ ಮಹದೇವಪ್ರಸಾದ್‌, ಶಾಂತಿಪ್ರಸಾದ್‌, ಆನಂದ್‌, ಎಂ.ಎನ್‌. ಕೃಷ್ಣಪ್ರಸಾದ್‌, ನಾರಿ ಟ್ರಸ್ಟ್‌ನ ಮುರಳೀಧರ್‌ ಕೈಜೋಡಿಸಿದ್ದಾರೆ.

ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಿಂದ ಸ್ವತಃ ರೈತರೇ ಬಂದು ತಾವು ರಾಸಾಯನಿಕ ಮುಕ್ತ ಬೆಳೆದ ಬೆಳೆಗಳು ಹಾಗೂ ಸಂಸ್ಕರಿಸಿದ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇಲ್ಲಿ ಏನಿಲ್ಲ, ಏನುಂಟು ಎಂಬುವಂತಿಲ್ಲ!. ತಾಜಾ ಸಾವಯವ ಹಣ್ಣು- ಸೊಪ್ಪು- ತರಕಾರಿ- ದವಸಧಾನ್ಯಗಳು, ಸಿರಿಧಾನ್ಯಗಳು, ಗಾಣದ ಎಣ್ಣೆ, ಅಕ್ಕಿ, ಹಲ್ಲುಪುಡಿ, ಸೋಪುಗಳು, ಹಪ್ಪಳ, ಸಂಡಿಗೆ, ಆರ್ಕ ಇಡ್ಲಿ ಮಿಶ್ರಣ, ಹುರಳಿ ಪಾಯಸಸ ಮಿಶ್ರಣ,ನವಣೆ ಖಾರ ಪೊಂಗಲ್‌, ನವಣೆ, ಹುರುಳಿ ಬಿಸಿಬೇಳೆ ಬಾತ್‌, ಬಾಳೆಕಾಯಿ ಹುಡಿ ಶ್ಯಾವಿಗೆ, ಊದಲು ಶ್ಯಾವಿಗೆ, ಅರ್ಕ ಶ್ಯಾವಿಗೆ,ಹಲಸಿನ ಬೀಜದ ಹುಡಿ, ಹುರುಳಿ ಹಿಟ್ಟು, ಬಾರ್ಲಿ ಶ್ಯಾವಿಗೆ,ಸಾಮೆ ಶ್ಯಾವಿಗೆ, ಕೂರಲೆ ಹಿಟ್ಟು ಅಗಸೆಬೀಜ, ತೇಜಲ್‌ ಮೊರಿಂಗ್‌ ಪುಡಿ, ಚಿಕ್ಕಿ, ನಿಂಬೆಹುಲ್ಲು ಚಹಾ ಸೇರಿದಂತೆ ಎಲ್ಲಾ ವಸ್ತುಗಳು ಇಲ್ಲಿ ಲಭ್ಯ,


ರೈತರ ಸ್ವಾವಲಂಬನೆ, ಗ್ರಾಹಕರ ಆರೋಗ್ಯಕರ ಜೀವನಶೈಲಿಗೆ ಪೂರಕವಾದ ಇಲ್ಲಿ ಕಪ್ಪು ಅಕ್ಕಿ, ಕರಿ ಉದ್ದು, ಬಿದರಕ್ಕಿ, ಸಾಂಬಾರ್‌ಪುಡಿ, ಕಡಲೆಬೇಳೆ, ಕಡಲೆಬೀಜ, ಗಿಡಮೂಲಿಕೆಯ ಅಂಬಲಿ, ಕಷಾಯ. ನುಗ್ಗೆ ಸೊಪ್ಪು, ಚಹಾ ಪುಡಿ, ಹರ್ಬಲ್‌ ಟೀ, ಬಿಸ್ಕತ್ತುಗಳು, ಸಿರಿಧಾನ್ಯಗಳು, ರವೆ, ಅವಲಕ್ಕಿ ಇಲ್ಲಿ ಸಿಗುತ್ತವೆ.

ರೈತರಾದ ಕೊಳ್ಳೇಗಾಲದ ಮಹದೇವಪ್ರಸಾದ್‌, ಇಂದ್ರಮ್ಮ, ಹುಣಸೂರಿನ ಚಂದ್ರೇಗೌಡ, ಗಿಡಮೂಲಿಕೆ ತಜ್ಞ ಕೃಷ್ಣಮೂರ್ತಿ ಸೇರಿದಂತೆ 15-20 ರೈತರು ಇಲ್ಲಿ ಭಾಗವಹಿಸುತ್ತಿದ್ದಾರೆ. ಗ್ರಾಹಕರಿಂದಲೂ ಸ್ಪಂದನೆ ಚೆನ್ನಾಗಿದೆ. ಕೃಷಿ ಇಲಾಖೆಯ ಸಾಥ್‌

ಕೃಷಿ ಇಲಾಖೆಯ ಕಾರಿಡಾರ್‌ನಲ್ಲಿ ಪ್ರತಿ ಭಾನುವಾರ ನಡೆಯುವ ಈ ಸಂತೆಗೆ ಇಲಾಖೆ ಸಾಥ್‌ ನೀಡಿದೆ. ಜಾಗ ಒದಗಿಸಿರುವುದಲ್ಲದೇ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ನಗರಪಾಲಿಕೆ, ಜಿಲ್ಲಾಡಳಿತ ಹಾಗೂ ಸರ್ಕಾರ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಿಕೊಟ್ಟರೆ ಈ ಸಂತೆ ಮತ್ತಷ್ಟು ಪ್ರಸಿದ್ಧಿಯಾಗುತ್ತದೆ. ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನುಕೂಲವಾಗುತ್ತದೆ.

- ಆಲೂರು ಮೂರ್ತಿ, ರೈತ ಸಂತೆಯ ನೇತಾರರು