ಕನ್ನಡಪ್ರಭವಾರ್ತೆ, ಬೀರೂರು
ಸಮಾಜದಲ್ಲಿ ಅಪರಾಧ ಕೃತ್ಯಗಳ ನಿಯಂತ್ರಣ ಹಾಗೂ ಕಾನೂನು ಸುವ್ಯವಸ್ಥೆ ಪಾಲನೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಶ್ಚಿಮ ವಲಯ ಐಜಿಪಿ ಅಮಿತ್ಸಿಂಗ್ ತಿಳಿಸಿದರು.ಬೀರೂರು ಪಟ್ಟಣದ ಪೊಲೀಸ್ ಠಾಣೆಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಡೂರು, ಬೀರೂರು ವಲಯದಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವುದು, ತ್ರಿಬಲ್ ರೈಡ್ ಅಪಘಾತಕ್ಕೆ ಪ್ರಮುಖ ಕಾರಣ. ಈ ಕುರಿತು ಜಾಗೃತಿ ಮೂಡಬೇಕಿದೆ ಎಂದರು.ಕಡೂರು-ಬೀರೂರು ಪಟ್ಟಣಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದುಹೋಗಿದ್ದು, ವಾಹನಗಳ ದಟ್ಟಣೆ ಹೆಚ್ಚಾಗಿದೆ. ಇಲ್ಲಿ ಸಂಚಾರ ಪೊಲೀಸ್ ಠಾಣೆ ಸ್ಥಾಪಿಸಿಲ್ಲ ಏಕೆ ಎಂಬ ಪ್ರಶ್ನೆಗೆ, “ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು. ತಾಲೂಕಿನಲ್ಲಿ ಡ್ರಗ್ ಪೆಡ್ಲರ್ಗಳ ಹಾವಳಿ ಹಾಗೂ ಮಾದಕ ವಸ್ತು ಪೂರೈಕೆ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಅವರು,ಪೆಡ್ಲರ್ಗಳ ಮಾಹಿತಿ ಕಲೆ ಹಾಕಿ, ಅವರ ವಿರುದ್ಧ ಕಾನೂನು ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಾದಕ ದ್ರವ್ಯ ವ್ಯಸನಿಗಳನ್ನು ''''''''''''''''ಸನ್ಮತ್ರ'''''''''''''''' ಯೋಜನೆಯಡಿ ಕೌನ್ಸೆಲಿಂಗ್ ಒಳಪಡಿಸಿ ಅವರನ್ನು ವ್ಯಸನ ಮುಕ್ತಗೊಳಿಸಲು ಶ್ರಮಿಸುತ್ತಿದ್ದೇವೆ ಎಂದರು. ಈ ಕುರಿತು ಕ್ರಮ ವಹಿಸುವಂತೆ ತರೀಕೆರೆ ಡಿವೈಎಸ್ಪಿ ಪರಶುರಾಮಪ್ಪ ಅವರಿಗೆ ಸೂಚಿಸಿದರು.
ಸಿಬ್ಬಂದಿ ಕೊರತೆ ಕುರಿತ ಪ್ರಶ್ನೆಗೆ, ಬೀರೂರು ಠಾಣೆಯಲ್ಲಿ ಕೇವಲ ಒಂದು ಹುದ್ದೆ ಖಾಲಿ ಇದೆ. ಇರುವ ಸಿಬ್ಬಂದಿಯನ್ನು ಸಮರ್ಥವಾಗಿ ಬಳಸಿಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುತ್ತೇವೆ. ಸಿಬ್ಬಂದಿಗೆ ವಾರದ ರಜೆ ಲಭ್ಯ ಇದೆ. ಬೀರೂರು ವೃತ್ತ 50 ಸಾವಿರ ಜನಸಂಖ್ಯೆಹಾಗೂ 35ಕ್ಕೂ ಹೆಚ್ಚು ಗ್ರಾಮಗಳನ್ನು ಒಳಗೊಂಡಿದೆ. ಸಂಚಾರ ಠಾಣೆ ಸ್ಥಾಪನೆ ಸೇರಿ ಈ ವಿಷಯವಾಗಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಜನಗಣತಿ ಬಳಿಕ ಠಾಣೆಗಳಲ್ಲಿ ಸಿಬ್ಬಂದಿ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರಿಸಿದರು.ಕಡೂರು-ಬೀರೂರು ಪಟ್ಟಣಗಳಲ್ಲಿ ಪೊಲೀಸ್ ವಸತಿ ಗೃಹಗಳು 21 ವರ್ಷ ಹಳೆಯವು. ನೂತನ ವಸತಿಗೃಹಗಳ ನಿರ್ಮಾಣ ಯೋಜನೆಯು ಅನುಷ್ಠಾನಗೊಳ್ಳುತ್ತಿದೆ ಎಂದು ಅಮಿತ್ಸಿಂಗ್ ತಿಳಿಸಿದರು. ಠಾಣೆ ಕೊಠಡಿಗಳು, ಕಚೇರಿಗಳು, ಕಡತಗಳನ್ನು ಪರಿಶೀಲಿಸಿದರು. ಉತ್ತಮ ನಿರ್ವಹಣೆ ಹಾಗೂ ಸ್ವಚ್ಛತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ತರೀಕೆರೆ ಡಿವೈಎಸ್ಪಿ ಪರಶುರಾಮಪ್ಪ, ಬೀರೂರು ವೃತ್ತ ನಿರೀಕ್ಷಕ ಎನ್.ಎ ಹಾಲಪ್ಪ, ಪಿಎಸ್ಐ ಡಿ.ಎಚ್. ಧನಂಜಯ್, ಅಪರಾಧ ವಿಭಾಗದ ಪಿಎಸ್ಐ ಗಣಪತಿ ಶೇರುಗಾರ್ ಹಾಗೂ ಸಿಬ್ಬಂದಿ ಇದ್ದರು.
19 ಬೀರೂರು 1
ಬೀರೂರು ಪೊಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಭೇಟಿ ನೀಡಿ ಸಿಬ್ಬಂದಿಯೊಂದಿಗೆ ಚರ್ಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮತ್ತಿತರಿದ್ದರು.