ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರುಗಣರಾಜ್ಯೋತ್ಸವ ದಿನಾಚರಣೆ ಸಂವಿಧಾನಾತ್ಮಕ ಚಿಂತನೆ- ಜಾಗೃತಿಗೆ ಮೆರುಗು ನೀಡುವ ಕಾರ್ಯಕ್ರಮ. ಇದೊಂದು ಗುಣಮಟ್ಟದ ಕಾರ್ಯಕ್ರಮವಾಗಬೇಕು. ಜನತೆಯ ಕಾರ್ಯಕ್ರಮವಾಗಿ ರೂಪುಗೊಳ್ಳಬೇಕು. ಸಾರ್ವಜನಿಕರು ಹೆಚ್ಚಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ವಹಿಸಬೇಕು ಎಂದು ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ತಿಳಿಸಿದರು.
ಅವರು ಬುಧವಾರ ಪುತ್ತೂರು ಆಡಳಿತ ಸೌಧದ ತಹಸೀಲ್ದಾರ್ ನ್ಯಾಯಾಲಯದ ಸಭಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಯಕ್ರಮದ ಬಗ್ಗೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಅವರು ಮಾಹಿತಿ ನೀಡಿ ಪುತ್ತೂರು ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಮೊದಲ ಬಾರಿಗೆ ಸ್ತಬ್ಧಚಿತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಭಿನ್ನವಾಗಿ ಆಚರಣೆ ನಡೆಸಲಾಗುವುದು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದಾರೆ. ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಧ್ವಜಾರೋಹಣ ಮತ್ತು ವಂದನೆ ಸ್ವೀಕರಿಸಲಿದ್ದಾರೆ. 13 ಸ್ತಬ್ಧಚಿತ್ರಗಳು ಇಲ್ಲಿ ಭಾಗವಹಿಸಲಿದ್ದು, ಕಿಲ್ಲೆ ಮೈದಾನದಿಂದ ಕೊಂಬೆಟ್ಟು ತನಕ ಈ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದೆ. ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಧ್ವಜಾರೋಹಣ, ಪಥಸಂಚಲನ, ಸಭಾಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾ ಸಾಧಕರಿಗೆ ಸನ್ಮಾನ, ಹಾಗೂ ತಾಲೂಕುಮಟ್ಟದ ಭಾಷಣ, ಚಿತ್ರಕಲೆ, ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಂಸದ ನಳಿನ್ ಕುಮಾರ್ ಕಟೀಲ್, ಎಂಎಲ್ಸಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಕೆ. ಹರೀಶ್ ಕುಮಾರ್, ಎಸ್.ಎಲ್.ಭೋಜೇಗೌಡ, ಪ್ರತಾಪಸಿಂಹ ನಾಯಕ್, ಮಂಜುನಾಥ ಭಂಡಾರಿ, ಪುತ್ತೂರು ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇ ಗೌಡ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಜೆ. ಶಿವಶಂಕರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್., ನಗರಸಭಾ ಪೌರಾಯುಕ್ತ ಮಧು ಎಸ್. ಮನೋಹರ್, ಕಸಾಪ ಪುತ್ತೂರು ಘಟಕದ ಅಧ್ಯಕ್ಷ ಉಮೇಶ್ ನಾಯಕ್, ಮೆಸ್ಕಾಂ ಅಧಿಕಾರಿ ರಾಮಚಂದ್ರ, ಕಂದಾಯ ನಿರೀಕ್ಷಕ ಚಂದ್ರ ನಾಯ್ಕ್, ತೋಟಗಾರಿಕಾ ಇಲಾಖಾ ಹಿರಿಯ ನಿರ್ದೇಶಕಿ ರೇಖಾ, ಕೃಷಿ ಇಲಾಖೆಯ ಯಶಸ್ ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ರೆಡೆಕ್ರಾಸ್ ಸಂಸ್ಥೆಯ ಆಸ್ಕರ್ ಆನಂದ್, ಸಂತೋಷ್ ರೈ ಇಳಂತಾಜೆ, ನಗರ ಠಾಣೆಯ ಎಸೈ ಆಂಜನೇಯ ರೆಡ್ಡಿ, ರೋವರ್ ರೇಂಜರ್ಸ್ ಶಿಕ್ಷಕಿ ಸುನೀತಾ, ಸಂಘ ಸಂಸ್ಥೆಗಳ ಪ್ರಮುಖರಾದ ಶಶಿಧರ್, ರಝಾಕ್, ಗಂಗಾಧರ್, ಇಸ್ಮಾಯಿಲ್ ಮತ್ತಿತರರು ಭಾಗವಹಿಸಿದ್ದರು.