ಶನಿವಾರ ಹೋಬಳಿ ಮಟ್ಟದ ಪ್ರಜಾ ಸೇವೆ ಜನಾಂದೋಲನ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪ

ಹೋಬಳಿ‌ ಮಟ್ಟದ ಮೊದಲ‌ ಪ್ರಜಾಸೇವೆ ಇಲಾಖೆ ಅಹವಾಲು ಸ್ವೀಕಾರ ಸಮಾರಂಭ ಸ್ವಪಕ್ಷದ ಸದಸ್ಯರ ಆಕ್ರೋಶದಿಂದ ಮೊಟಕುಗೊಂಡ ಘಟನೆ ನಡೆದಿದೆ.

ಕೊಪ್ಪ ಪುರಭವನದಲ್ಲಿ ಶನಿವಾರ ಹೋಬಳಿ ಮಟ್ಟದ ಪ್ರಜಾ ಸೇವೆ ಜನಾಂದೋಲನ ಸಭೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಅವರು‌ ಮಾಜಿ ಸೈನಿಕ ವಿಜಯ್ ಕುಮಾರ್ ಎಂಬುವರ ಜಾತಿ ಪ್ರಮಾಣ‌ಪತ್ರ ತಿರಸ್ಕಾರಕ್ಕೆ ಸಂಬಂಧಿಸಿದಂತೆ ಗ್ರಾಮ ಲೆಕ್ಕಾಧಿಕಾರಿ ನೇಸರ ಕ್ರಮದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಜಾತಿಪ್ರಮಾಣ ಪತ್ರ ತಿರಸ್ಕರಿಸಿದ್ದಕ್ಕೆ ಸೂಕ್ತ ಕಾರಣ ಸಭೆಗೆ ನೀಡಬೇಕೆಂದು ಪಟ್ಟು ಹಿಡಿದರು. ಆಗ ಉತ್ತರಿಸಿದ ಅಧಿಕಾರಿ ಜಾತಿ ಪ್ರಮಾಣ ಪತ್ರ ನೀಡುವುದಕ್ಕೆ ಸೂಕ್ತ ದಾಖಲೆ ಇಲ್ಲ. ನೀಡಿರುವ ದಾಖಲೆಯಲ್ಲಿ ಸ್ಪಷ್ಟ ಮಾಹಿತಿ‌ ಇಲ್ಲ. ಹಾಗಾಗಿ, ತಿರಸ್ಕರಿಸಲಾಗಿದೆ ಎಂದು ಉತ್ತರಿಸಿದರು.

ಅದಕ್ಕೆ ಸಮಾಧಾನಗೊಳ್ಳದ ಸುದೀರ್ ಕುಮಾರ್ ಮುರೊಳ್ಳಿ, ಅಧಿಕಾರಿಯನ್ನು ಸ್ಥಳದಲ್ಲಿಯೇ ಅಮಾನತು ಗೊಳಿಸ ಬೇಕೆಂದು ಪಟ್ಟುಹಿಡಿದರು. ಆಗ ಅಧಿಕಾರಿ ಅಮಾನತುಗೊಳಿಸಿ ಎಂದು ಸಭೆಯಿಂದ ಹೊರನಡೆದ ಘಟನೆ ನಡೆಯಿತು.

ಈ ವೇಳೆ ತಹಸೀಲ್ದಾರ್ ಲಿಖಿತಾ ಮೋಹನ್ ಸಹ ಸ್ಪಷ್ಟಿಕರಣ ನೀಡುವುದಕ್ಕೆ ಪ್ರಯತ್ನಿಸಿದರೂ ಸುಧೀರ್ ಕುಮಾರ್ ಮುರೊಳ್ಳಿ ತಮ್ಮ ಅರೋಪದ ಪಟ್ಟು ಬಿಡದೇ, ಜಾತಿ ಪ್ರಮಾಣ‌ಪತ್ರ ನೀಡುವುದಕ್ಕೆ ಎಷ್ಟು ಹಣ ನೀಡಬೇಕು ಎಂಬುದು ಶಾಸಕರ ಎದುರೇ ನಿರ್ಧಾರವಾಗಿ ಬಿಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಿಂದ ಹೊರ ಹೋದ ಅಧಿಕಾರಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಕಾಡ ಅಧ್ಯಕ್ಷ ಅಂಶುಮಂತ್, ಕೊಪ್ಪ ತಹಸೀಲ್ದಾರ್ ಲಿಖಿತಾ ಮೋಹನ್, ಕೊಪ್ಪ ಬ್ಲಾಕ್ ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ,ತಾಲ್ಲೂಕು ಪಂಚಾಯಿತಿ ಇ.ಓ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಹಾಜರಿದ್ದರು.