ಸಾರಾಂಶ
ನಗರದ ಕೇಂದ್ರ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸಾರ್ವಜನಿಕರಲ್ಲಿ ಓದಿನ ಬಗ್ಗೆ ಆಸಕ್ತಿ ಮೂಡಿಸಲು ಗ್ರಂಥಾಲಯ ಸಪ್ತಾಹ ಹಮ್ಮಿಕೊಳ್ಳಲಾಗಿದ್ದು, ಪ್ರತಿಯೊಬ್ಬರು ಇದರ ಸದುಪಯೋಗ ಪಡೆಯಬೇಕು ಎಂದು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹೇಳಿದರು.ನಗರದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಗ್ರಂಥಾಲಯ ಸಪ್ತಾಹವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪುಸ್ತಕಗಳು ಓದುವುದರಿಂದ ಇತಿಹಾಸದ ಜೊತೆಗೆ ಪ್ರಾಪಂಚಿಕ ಜ್ಞಾನ ತಿಳಿಯಲು ಸಹಕಾರಿಯಾಗುತ್ತವೆ. ಜೀವನದ ಅನೇಕ ಪ್ರಶ್ನೆಗಳಿಗೆ ಪುಸ್ತಕಗಳ ಮೂಲಕ ಉತ್ತರ ಕಂಡು ಕೊಳ್ಳಬಹುದು. ಇತ್ತೀಚಿನ ದಿನ ಗಳಲ್ಲಿ ಮಕ್ಕಳಲ್ಲಿ ಓದಿನ ಅಭಿರುಚಿ ಕಡಿಮೆಯಾಗಿದ್ದು, ಅವರಲ್ಲಿ ಓದಿನ ಆಸಕ್ತಿ ಹೆಚ್ಚಿಸಲು ಗ್ರಂಥಾಲಯ ಸಪ್ತಾಹ ಉಪಯುಕ್ತವಾಗಲಿದೆ ಎಂದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಅನೇಕ ಬಡ ವಿದ್ಯಾರ್ಥಿಗಳು ನಗರ ಗ್ರಂಥಾಲಯದಲ್ಲಿ ದೊರಕುವ ಪುಸ್ತಕ ಗಳನ್ನು ಅಭ್ಯಸಿಸುವುದರಿಂದ ಉತ್ತಮ ತಯಾರಿ ನಡೆಸಬಹುದಾಗಿದೆ. ಇಂದಿನ ಮಕ್ಕಳೇ ದೇಶದ ಭವಿಷ್ಯ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಮೂಲಕ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳುವುದರೊಂದಿಗೆ ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್ ಮಾತನಾಡಿ, ಗ್ರಂಥಾಲಯ ಸಪ್ತಾಹದ ಮೂಲಕ ವಿವಿಧ ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಪುಸ್ತಕದ ಮಹತ್ವ ಕುರಿತು ಮಾಹಿತಿ ನೀಡಿ ಅವರಲ್ಲಿ ಓದಿನ ಆಸಕ್ತಿ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಪ್ರತಿಯೊಬ್ಬರೂ ಪುಸ್ತಕ ಓದುವ ಮೂಲಕ ತಮ್ಮ ಶೈಕ್ಷಣಿಕ ಜೀವನವನ್ನು ಇನ್ನಷ್ಟು ಬಲಪಡಿಸಿ ಕೊಂಡು ಸಪ್ತಾಹದ ಸದುಪಯೋಗ ಪಡೆದುಕೊಂಡು ಜ್ಞಾನವಂತರಾಗಿಬೇಕು ಎಂದರು.ಕಾರ್ಯಕ್ರಮದಲ್ಲಿ ಗ್ರಂಥಪಾಲಕಿ ಬಿ.ಕೆ. ಲತಾ, ಕೆ.ಬಿ. ವೀಣಾ, ಸಿ.ಟಿ. ರಾಘವೇಂದ್ರ, ಜೆ. ಸೌಮ್ಯ, ಬಿ.ಎಂ. ಸಿದ್ದಪ್ಪ ಉಪಸ್ಥಿತರಿದ್ದರು.14 ಕೆಸಿಕೆಎಂ 3ಚಿಕ್ಕಮಗಳೂರು ನಗರದ ಕೇಂದ್ರ ಗ್ರಂಥಾಲಯದಲ್ಲಿ ಗುರುವಾರ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಹಾಗೂ ಗ್ರಂಥಾಲಯ ಸಪ್ತಾಹವನ್ನು ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಉದ್ಘಾಟಿಸಿದರು. ಮುಖ್ಯ ಗ್ರಂಥಾಲಯಾಧಿಕಾರಿ ಉಮೇಶ್, ವೀಣಾ, ಸಿದ್ದಪ್ಪ ಇದ್ದರು.