ಮಂಗಳೂರು: ಯಕ್ಷಗಾನದ ಮೇರು ಕಲಾವಿದ ಕೆ.ಗೋವಿಂದ ಭಟ್ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಗರದ ಕೊಡಿಯಾಲ್ ಬೈಲ್‌ನ ಶಾರದಾ ವಿದ್ಯಾಲಯ ಸಭಾಂಗಣದಲ್ಲಿ ಸೋಮವಾರ ನಡೆಯಿತು.ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕೋಡಂಗಿ ವೇಷದಿಂದ ರಾಜವೇಷದವರೆಗೆ ಯಕ್ಷಗಾನದ ಎಲ್ಲ ಆಯಾಮಗಳನ್ನು ಆಳವಾಗಿ ಅರಿತುಕೊಂಡಿದ್ದ ದಶಾವತಾರಿ ಗೋವಿಂದ ಭಟ್ ಅವರು ಯಕ್ಷಗಾನ ಕಲೆಯನ್ನು ಬೆಳೆಸಿದ ಮಹಾನ್ ಚೇತನ. ರಂಗಸ್ಥಳಕ್ಕೆ ಯಾವುದೇ ಚ್ಯುತಿ ಬರದಂತೆ ಶಿಸ್ತು ಕಾಪಾಡುವಲ್ಲಿ ಅವರ ಪಾತ್ರ ಅಪಾರ ಎಂದು ಹೇಳಿದರು.

ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸಮಾಜದಲ್ಲಿ ಕುಗ್ಗುತ್ತಿರುವ ಧಾರ್ಮಿಕ ಪ್ರಜ್ಞೆಯನ್ನು ಯಕ್ಷಗಾನದ ಮೂಲಕ ಜಾಗೃತಗೊಳಿಸಿದವರು ಗೋವಿಂದ ಭಟ್ ಅವರು ಎಂದರು.

ಪ್ರೊ.ಜಿ.ಕೆ. ಭಟ್ ಮಾತನಾಡಿ, ಗೋವಿಂದ ಭಟ್‌ ಅವರ ಪ್ರತಿ ಹೆಜ್ಜೆಯಲ್ಲೂ ಲಯವಿತ್ತು. ಯಾವುದೇ ಪಾತ್ರವನ್ನು ಜೀವಂತಗೊಳಿಸುವ ಅಪೂರ್ವ ಸಾಮರ್ಥ್ಯ ಅವರಲ್ಲಿತ್ತು ಎಂದು ಸ್ಮರಿಸಿದರು.ಎಲ್ಲೂರು ರಾಮಚಂದ್ರ ಭಟ್, ಮಾಜಿ ಎಂಎಲ್ಸಿ ಕ್ಯಾ. ಗಣೇಶ್ ಕಾರ್ಣಿಕ್, ಹಿರಿಯ ಕಲಾವಿದ ಸಂಜಯ್ ಕುಮಾರ್ ಗೋಣಿಬೀಡು, ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಶಾರದಾ ಕಾಲೇಜು ಪ್ರಾಂಶಪಾಲ ದಯಾನಂದ ಕಟೀಲ್, ಯುಗಪುರುಷ ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಸನತ್ ಕುಮಾರ್ ಜೈನ್, ಯಕ್ಷಗಾನ ಕಲಾವಿದ ಶ್ರೀಕರ್ ಭಟ್, ಶಾರದ ಹೆಗಡೆ, ಶ್ರೀಕೃಷ್ಣ ಭಟ್ ಸುಣ್ಣಂಗುಳ, ಹರಿಪ್ರಸಾದ್ ರೈ ಮುಂಬೈ, ಡಾ. ಮಾಧವ ಎಂ.ಕೆ., ಯಕ್ಷಲಹರಿಯ ವಿನಯ್ ಆಚಾರ್ಯ ಸುರತ್ಕಲ್, ಹಿರಿಯ ಪ್ರಸಂಗಕರ್ತ ನಿತ್ಯಾನಂದ ಕಾರಂತ್ ಪೊಳಲಿ, ತಮ್ಮ ಲಕ್ಷ್ಮಣ, ಶಂಕರ್ ಶೆಟ್ಟಿ ಪೊಳಲಿ ಇದ್ದರು. ಸುಧಾಕರ ರಾವ್ ಪೇಜಾವರ ಹಾಗೂ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.