ಸಾರಾಂಶ
ಹನೂರು: ತಲ ತಲಾಂತರದಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಪದ್ಧತಿಯಂತೆ ಸಾಲೂರು ಮಠದ ವತಿಯಿಂದ ಮಲೆ ಮಾದೇಶ್ವರನ ಸ್ವಾಮಿಗೆ ಮಹಾಶಿವರಾತ್ರಿ ಜಾತ್ರೆ ಮುಗಿದ ನಂತರ ಮೊದಲ ಪೂಜೆ ಮಹಾರುದ್ರಾಭಿಷೇಕ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿತು. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ ಮಠದ ಪೀಠಾಧಿಪತಿಗಳಾದ ಶಾಂತ ಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಮಹಾಶಿವರಾತ್ರಿ ಮುಗಿದ ನಂತರ ಮಲೆ ಮಾದೇಶ್ವರನಿಗೆ ಮೊದಲ ಮಹಾರುದ್ರಭಿಷೇಕ ಸಾಲೂರು ಬೃಹನ್ ಮಠ ವತಿಯಿಂದ ಪ್ರತಿವರ್ಷ ಹಮ್ಮಿಕೊಳ್ಳಲಾಗುತ್ತದೆ. ಅದರಂತೆ ಇಂದು ದೇವಾಲಯದಲ್ಲಿ ಸ್ವಾಮಿಗೆ ವಿಶೇಷವಾಗಿ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮಗಳು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಗುರುವಾರ ದೇವಾಲಯದಲ್ಲಿ ತಳಿರು ತೋರಣಗಳಿಂದ ಸಿಂಗರಿಸಿ ಸ್ವಾಮಿಗೆ ಮಹಾರುದ್ರಾಭಿಷೇಕ ಪೂಜಾ ಕಾರ್ಯಕ್ರಮ ನಡೆಯಿತು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಪೂಜಾ ಕಾರ್ಯಕ್ರಮದಲ್ಲಿ ಗುಡ್ಡೆಗಾಲ ಶ್ರೀಮಠದ ಮಲ್ಲಿಕಾರ್ಜುನ ಸ್ವಾಮಿ ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಹಾಗೂ ನೀಲಕಂಠ ಮಠದ ನೀಲಕಂಠ ಸ್ವಾಮೀಜಿ ಮತ್ತು ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಸಿಬ್ಬಂದಿ ವರ್ಗದವರು ಇದ್ದರು. ಹನೂರು ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಮಠದ ವತಿಯಿಂದ ಮಹಾಶಿವರಾತ್ರಿ ಜಾತ್ರೆ ಮುಗಿದ ನಂತರ ಮೊದಲ ಮಹಾರುದ್ರಾಭಿಷೇಕ ಪೂಜೆ ಮಠದ ಶಾಂತಮಲ್ಲಿಕಾರ್ಜುನ ಸ್ವಾಮಿ ನೇತೃತ್ವದಲ್ಲಿ ಜರುಗಿತು.