ಮುಂಡರಗಿ: ಈಚಗೆ ಮುಂಡರಗಿ ತಾಲೂಕಿನಲ್ಲಿ ಕಳ್ಳತನವಾಗಿದ್ದ ನಿರೆತ್ತುವ ಮೋಟ‌ರ್ ಪಂಪ್‌ಸೆಟ್ ಹಾಗೂ ಆರೋಪಿತರ ಪತ್ತೆ ಕಾರ್ಯವನ್ನು ಮುಂಡರಗಿ ಪೊಲೀಸರು ಕೈಕೊಂಡಿದ್ದು, 9 ಮೋಟ‌ರ್ ಪಂಪ್‌ಸೆಟ್ ಹಾಗೂ ಒಂದು ಮೋಟರ್ ಸೈಕಲ್ ವಶಪಡಿಸಿಕೊಂಡಿದ್ದಾರೆ.

2026ರ ಮಾ. 25ರಂದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ನಿರೆತ್ತುವ ಮೋಟ‌ರ್ ಪಂಪ್‌ಸೆಟ್ ಕಳ್ಳತನದ ಪ್ರಕರಣ ದಾಖಲಾಗಿತ್ತು. ಕಳ್ಳತನ ಪ್ರಕರಣದ ಪತ್ತೆ ಕಾರ್ಯಕ್ಕಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಒಂದು ವಿಶೇಷ ತಂಡ ರಚನೆ ಮಾಡಿದ್ದು. ನರಗುಂದ ಉಪ-ವಿಭಾಗ ಡಿ.ಎಸ್.ಪಿ. ಪ್ರಭುಗೌಡ ಕಿರೇದಳ್ಳಿ ಅವರ ಮಾರ್ಗದರ್ಶನದಲ್ಲಿ ಮುಂಡರಗಿ ಪೊಲಿಸ್ ಠಾಣೆಯ ಸಬ್-ಇನ್ಸ್‌ಪೆಕ್ಟರ್‌ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಹಾಗೂ ನುರಿತ ಸಿಬ್ಬಂದಿಯೊಂದಿಗೆ 2026ರ ಮಾ. 26ರಂದು ಆರೋಪಿತರಾದ ಮಂಜುನಾಥ ಹನಮಪ್ಪ ಹ್ಯಾಡ್ಲ (38), ನವೀನ ಲಕ್ಷ್ಮಪ್ಪ ಮುದ್ಲಾಪೂರ (31), ಪ್ರದೀಪಕುಮಾರ ಪರಶುರಾಮ ಲಕ್ಕುಂಡಿ (20) ಜನರನ್ನು ದಸ್ತಗೀರ ಮಾಡಲಾಗಿದೆ.

ಆರೋಪಿತರು ವಿಚಾರಣೆ ಕಾಲಕ್ಕೆ ತಾವು ಮುಂಡರಗಿ ತಾಲೂಕಿನ ವಿವಿಧ ಗ್ರಾಮಗಳ ಹದ್ದಿಯಲ್ಲಿ ಒಟ್ಟು 9 ನಿರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಅವರಿಂದ ಪ್ರಕರಣದಲ್ಲಿ ಸುಮಾರು ₹2.75 ಲಕ್ಷ ಕಿಮ್ಮತ್ತಿನ ಒಟ್ಟು 9 ನಿರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ಲನ್ನು ಪತ್ತೆ ಮಾಡಿ ವಶಪಡಿಸಿಕೊಂಡು ತನಿಖಾ ಕಾರ್ಯ ಮುಂದುವರಿಸಿದ್ದಾರೆ.ಕಳ್ಳತನವಾದ ನಿರೆತ್ತುವ ಮೋಟರ್ ಪಂಪ್‌ಸೆಟ್‌ಗಳನ್ನು ಪತ್ತೆ ಮಾಡಲು ಶ್ರಮಿಸಿದ ಮುಂಡರಗಿ ಪೊಲೀಸ್ ಠಾಣೆಯ ಸಬ್-ಇನ್ಸಪೆಕ್ಟರ್ ಗಳಾದ ಚನ್ನಯ್ಯ ದೇವೂರ, ಬಿ.ಎನ್. ಯಳವತ್ತಿ ಮತ್ತು ಸಿಬ್ಬಂದಿ ಜೆ.ಐ. ಬಚ್ಚೇರಿ, ಅಶೋಕ ಬೂದಿಹಾಳ, ಮಂಜುನಾಥ ಅಗಸಿಮನಿ, ಮಹೇಶ ಗೋಳಗೊಳಕಿ, ಶರಣಪ್ಪ ಓಜನಹಳ್ಳಿ, ಎಲ್.ಬಿ. ಸಣ್ಣಯರಾಸಿ, ರವಿಕುಮಾರ ರುದ್ರಾಕ್ಷಿ. ಮಲ್ಲಿಕಾರ್ಜುನ ಪಾಟೀಲ ಅವರಿಗೆ ಗದಗ ಜಿಲ್ಲಾ ಪೊಲೀಸ್ ಅಧೀಕ್ಷಕ ರೋಹನ್ ಜಗದೀಶ ಪ್ರಶಂಸೆ ವ್ಯಕ್ತ ಪಡಿಸಿ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.