ಸಾರಾಂಶ
ರೋಣ: ಶಿಸ್ತು, ಸಂಯಮ, ಸದ್ಗುಣಗಳೊಂದಿಗೆ ಕರ್ತವ್ಯದಲ್ಲಿ ಸಮಯ ಪಾಲನೆ ಅತೀ ಮುಖ್ಯವಾಗಿದ್ದು,ಇದರಿಂದ ಇತರರಿಗೆ ಮಾದರಿಯಾಗುವುದರ ಜತೆಗೆ ಜೀವನ ಸಾರ್ಥಕವಾಗುವುದು ಎಂದು ನಿವೃತ್ತಿ ಪಂಚಾಯತ್ ರಾಜ್ಯ ಎಂಜಿನೀಯರಿಂಗ ಉಪ ವಿಭಾಗದ ಎಇಇ ಎಸ್.ಎಸ್. ಹಿಕ್ಕಲಗುತ್ತಿ ಹೇಳಿದರು.
ಅವರು ಮಂಗಳವಾರ ಪಟ್ಟಣದ ತಾಪಂ ಸಭಾ ಭವನದಲ್ಲಿ ಜರುಗಿದ ಸೇವಾ ನಿವೃತ್ತ ಬೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.ಅನುಭವವು ದೀರ್ಘ ಕಾಲದ ಯಶಸ್ಸಿಗೆ ಕಾರಣವಾಗಿದೆ. ಸಿಬ್ಬಂದಿಗಳ ಸಹಾಯ ಸಹಕಾರದಿಂದ ಉತ್ತಮ ಸೇವೆ ನೀಡಲು ನನಗೆ ಸಾಧ್ಯವಾಗಿದೆ. ಸಮಯಕ್ಕೆ ನಾವು ಮಹತ್ವ ನೀಡಬೇಕು. ಅಂದಾಗ ಸಮಯ ನಮ್ಮನ್ನು ಕಾಪಾಡುತ್ತದೆ. ಸಿಬ್ಬಂದಿ ಹಾಗೂ ಸಹ ಸಿಬ್ಬಂದಿಗಳ ಸಹಾಯ,ಸಹಕಾರ ಬಹಳ ಮುಖ್ಯವಾಗಿದೆ. ಅವರ ಸಹಕಾರದಿಂದಲೇ ನಾವು ಜನರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ. ಸರ್ಕಾರಿ ಸೇವೆಯಲ್ಲಿ ನಿಷ್ಠೆ, ಪ್ರಾಮಾಣಿಕತೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಗುಣ ನಮ್ಮಲ್ಲಿರಬೇಕು. ಸಾರ್ವಜನಿಕರೊಂದಿಗ ಬದುಕು ಅತ್ಯಂತ ಸಂತಸಕರವಾಗಿರುತ್ತದೆ ಎಂದರು.
ನಿವೃತ್ತ ಜಿಪಂ ಎಇಇ ಎಂ.ಡಿ. ತೂಗುಣಸಿ ಮಾತನಾಡಿ, ಸೇವೆಯ ಸಮಯದಲ್ಲಿ ಅನೇಕ ಅಡತಡೆ ಹಾಗೂ ಅನೇಕ ಸಮಸ್ಯೆ ಬರುತ್ತವೆ. ಅವುಗಳನ್ನು ನಾವು ಪ್ರಾಮಾಣಿಕವಾಗಿ ಹಾಗೂ ಪಾರದರ್ಶಕವಾಗಿ ಬಗೆಹರಿಸಬೇಕು. ಅನೇಕ ಜನಪ್ರತಿನಿಧಿಗಳ ಒತ್ತಡಗಳು ಬಂದರು ನಮ್ಮ ಚೌಕಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ದೇಶ ನಮಗಾಗಿ ಏನು ಕೊಟ್ಟಿದೆ ಎಂಬುದಕ್ಕಿಂತ ದೇಶಕ್ಕಾಗಿ ನಾವೇನು ಕೊಡುಗೆ ನೀಡಿದ್ದೇವೆ ಎಂಬುದನ್ನು ನಾವು ಅರಿಯಬೇಕು. ದೇಶಕ್ಕಾಗಿ ಉತ್ತಮ ಸೇವೆ ನಾವು ನೀಡಿ ಉತ್ತಮ ದೇಶ ಕಟ್ಟುವಲ್ಲಿ ಮುಂದಾಗಬೇಕು. ನಮಗೆ ವಹಿಸಿದ ಕರ್ತವ್ಯ ಶ್ರದ್ಧೆ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು ಎಂದರು.ಈ ಸಂದರ್ಭದಲ್ಲಿ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಎ.ಈ. ಚಂದ್ರಕಾಂತ ನೆರಲೇಕರ, ತಾಪಂ ಯೋಜನಾಧಿಕಾರಿ ಸಿ.ಎಸ್. ನೀಲಗುಂದ, ಮುಂಡರಗಿ ಲೋಕೋಪಯೋಗಿ ಎಇಇ ಎಂ.ಎಸ್. ಪಾಟೀಲ ಜಿಪಂ ಎಂಜಿನೀಯರ್ ವಿಜಯಕುಮಾರ ಗೌಡರ, ಶಂಕರಗೌಡ ಪಾಟೀಲ, ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಅಭಿಯಂತರ ಅಧಿಕಾರಿ ಎಚ್.ಸಿ. ಮಹದೇವಪ್ಪ ಸೇರಿದಂತೆ ಜಿಪಂ ಮತ್ತು ತಾಪಂ ಹಾಗೂ ವಿವಿದ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಭು ಸೋಮನಕಟ್ಟಿ ನಿರೂಪಿಸಿ ವಂದಿಸಿದರು.