ಪುನೀತ್‌ ರಾಜ್‌ಕುಮಾರ್‌ ಶ್ರೇಷ್ಠ ಮಾನವತಾವಾದಿ: ಬಸವರಾಜ್‌ ಬೊಮ್ಮಾಯಿ

| Published : Sep 25 2025, 01:00 AM IST

ಸಾರಾಂಶ

ಚಿಕ್ಕಮಗಳೂರು, ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಶ್ರೇಷ್ಠ ಮಾನವತಾವಾದಿ. ಅವರ ಸಾವು ಅನಿರೀಕ್ಷಿತ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವರು ಸಾಧಕರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಪಾದಿಸಿದರು.

- ಚಿಕ್ಕಮಗಳೂರಿನಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್ ಅವರಿಂದ ಪುನೀತ್‌ ರಾಜ್‌ಕುಮಾರ್‌ ಪುತ್ಥಳಿ ಅನಾವರಣ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಶ್ರೇಷ್ಠ ಮಾನವತಾವಾದಿ. ಅವರ ಸಾವು ಅನಿರೀಕ್ಷಿತ. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವರು ಸಾಧಕರು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಪ್ರತಿಪಾದಿಸಿದರು.ನಗರದ ಆಜಾದ್ ಪಾರ್ಕ್‌ ವೃತ್ತದಲ್ಲಿ ಬುಧವಾರ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘ ಪ್ರತಿಷ್ಟಾಪನೆ ಮಾಡಿರುವ ಡಾ. ಪುನೀತ್ ರಾಜ್ ಕುಮಾರ್ ಪುತ್ಥಳಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುನೀತ್ ಅವರಲ್ಲಿ ಭಾಷೆ ಗಡಿ ಇರಲಿಲ್ಲ, ಭಾವನೆ ಇತ್ತು. ಹಾಗಾಗಿ ನಮ್ಮಗಳ ನಡುವೆ ಚಿರಸ್ಥಾಯಿಯಾಗಿ ಉಳಿದುಕೊಂಡಿದ್ದಾರೆ.

ಡಾ. ರಾಜ್‌ಕುಮಾರ್ ಅವರಿಗೂ ಈ ಚಿಕ್ಕಮಗಳೂರಿಗೂ ಅನನ್ಯವಾದ ಸಂಬಂಧ ಇದೆ ಎಂದರು.ಪ್ರೀತಿ, ವಿಶ್ವಾಸ ನನ್ನನ್ನು ಸೆಳೆದು ಇಲ್ಲಿಗೆ ತಂದಿದೆ. ಒಬ್ಬ ವ್ಯಕ್ತಿ ಅತ್ಯಂತ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಜನರ ಮನದಲ್ಲಿ ಚಿರಸ್ಥಾಯಿ ಉಳಿಯುತ್ತಾರೆಂದರೆ ಅವರೇ ಪುನೀತ್ ರಾಜ್‌ಕುಮಾರ್. ಅವರ ಆಕರ್ಷಕ ವ್ಯಕ್ತಿತ್ವ, ಅವರ ನಗು ಎಂತಹ ಅಪರಿಚಿತರನ್ನು ಸೆಳೆಯುವಂತೆ ಮಾಡುತ್ತಿತ್ತು.

ಶುಭ್ರವಾದ ಮನಸ್ಸು, ಜೀವನ ಉದ್ದಕ್ಕೂ ಕಾಯ್ದುಕೊಂಡು ಬರುವುದು ಕಷ್ಟ. ಮುಗ್ಧ ಮನಸ್ಸನ್ನು ಪುನೀತ್ ಅವರು ಕಾಪಾಡಿಕೊಂಡು ಬಂದಿದ್ದರು ಎಂದು ಹೇಳಿದರು.

ಪುನೀತ್ ಅವರನ್ನು ಚಿಕ್ಕ ವಯಸ್ಸಿನಲ್ಲಿಯೇ ನೋಡಿಕೊಂಡು ಬಂದಿದ್ದೆ. ಅವರು ಬದುಕಿದ್ದರೆ, ಇಡೀ ಭಾರತ ದೇಶದಲ್ಲಿ ಪ್ರಸಿದ್ಧ ನಟರಾಗುತ್ತಿದ್ದರು. ದೈವದತ್ತವಾಗಿ ಅವರಿಗೆ ಕಲೆ ಆಶೀರ್ವಾದ ಇತ್ತು ಎಂದರು.

ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಡಾ. ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿ ನಮನ ಸಲ್ಲಿಸಿ, ರಾಜ್ಯದ ಮೇರು ನಟರಾಗಿ ಕರ್ನಾಟಕ ಕೀರ್ತಿಯನ್ನು ಜಗತ್ತಿಗೆ ವಿಸ್ತರಿಸಿದವರು ಡಾ. ರಾಜ್‌ಕುಮಾರ್ ಹಾಗೂ ಅವರ ಪುತ್ರ ಪುನೀತ್ ರಾಜ್‌ಕುಮಾರ್. ಅವರು ನಟಿಸಿದ ಪಾತ್ರಗಳು ಇನ್ನು ಜೀವಂತವಾಗಿವೆ ಎಂದು ಹೇಳಿದರು.ಪುನೀತ್ ರಾಜ್ ಕುಮಾರ್ ತಂದೆಯಂತೆ ಕೀರ್ತಿಯನ್ನು ವಿಸ್ತರಿಸಿ ನಮ್ಮನ್ನು ಆಗಲಿದ್ದಾರೆ. ಪುನಿತ್ ನಮ್ಮೂರಿನ ಅಳಿಯ, ಅವರಿಗೆ ಸಾವು ಬರುವ ವಯಸ್ಸು ಆಗಿರಲಿಲ್ಲ. ಜನರ ಹೃದಯದಲ್ಲಿ ಅಜರಾಮವಾಗಿದ್ದಾರೆ. ಗೋಕಾಕ್ ಚಳುವಳಿಗೆ ಸರ್ಕಾರ ತರುವ ಬೀಳಿಸುವ ತಾಕತ್ತು ಇತ್ತು. ರಾಜ್ಯದ ಜನರನ್ನು ಒಗ್ಗೂಡಿಸುವ ಕೆಲಸವಾಗಿತ್ತು. ಆದರೆ, ಇಂದು ಕನ್ನಡಿಗರು ನಿದ್ರಿಸುತ್ತಿದ್ದಾರೆ. ಇಂಗ್ಲಿಷ್ ಅಪ್ಪಿಕೊಳ್ಳುತ್ತಿದ್ದೇವೆ. ಒಂದು ಭಾಷೆ ಕಲಿಯುವುದು ತಪ್ಪಲ್ಲ, ಭಾಷೆ, ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು, ಹಾಗಾಗಿ ಭಾಷೆ ಮೂಲಕ ನಮ್ಮನ್ನು ಜೋಡಿಸಿಕೊಳ್ಳಬೇಕು ಎಂದರು.

ಶಾಸಕ ಎಚ್‌.ಡಿ. ತಮ್ಮಯ್ಯ, ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಚಿತ್ರಕಲಾ ಪರಿಷತ್‌ ಅಧ್ಯಕ್ಷ ಡಾ.ಬಿ.ಎಲ್‌. ಶಂಕರ್‌ ಮಾತನಾಡಿದರು.

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರು ಪುನೀತ್‌ ರಾಜ್‌ಕುಮಾರ್‌ ಅವರ ಪುತ್ಥಳಿ ಅನಾವರಣಗೊಳಿಸಿದರು. ಡಾ. ರಾಜ್‌ ಕುಮಾರ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಐ.ಕೆ. ಓಂಕಾರೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ. ರಾಜೇಗೌಡ, ಹುಲ್ಲಹಳ್ಳಿ ಸುರೇಶ್‌, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್‌. ಹರೀಶ್‌, ವಿದ್ಯಾಭಾರತಿ ವಿದ್ಯಸಂಸ್ಥೆಯ ಸಂಸ್ಥಾಪಕ ಡಾ. ಅಪ್ಸರ್‌ ಹಿಂದೂಸ್ಥಾನಿ,ಡಾ. ಜೆ.ಪಿ. ಕೃಷ್ಣೇಗೌಡ, ಉಮಾ ಐ.ಬಿ. ಶಂಕರ್‌, ಎಂ.ಎಲ್‌. ಮೂರ್ತಿ ಉಪಸ್ಥಿತರಿದ್ದರು.

24 ಕೆಸಿಕೆಎಂ 3ಚಿಕ್ಕಮಗಳೂರಿನ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಡಾ. ರಾಜ್‌ಕುಮಾರ್ ಅಭಿಮಾನಿಗಳ ಸಂಘ ಪ್ರತಿಷ್ಟಾಪನೆ ಮಾಡಿರುವ ಡಾ. ಪುನೀತ್‌ ರಾಜ್‌ಕುಮಾರ್ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಬುಧವಾರ ಉದ್ಘಾಟಿಸಿದರು.