ಸಾರಾಂಶ
ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಮಾಡಿದ ಎಲ್ಲ ಆರೋಪಿಗಳನ್ನು ಹಾಗೂ ಹತ್ಯೆಗೆ ಪ್ರಚೋದನೆ ನೀಡಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಕೆಎಸ್ಎಸ್ಎಫ್) ಸರ್ಕಾರವನ್ನು ಒತ್ತಾಯಿಸಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಮಾಡಿದ ಎಲ್ಲ ಆರೋಪಿಗಳನ್ನು ಹಾಗೂ ಹತ್ಯೆಗೆ ಪ್ರಚೋದನೆ ನೀಡಿದವರನ್ನು ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ (ಎಸ್ಕೆಎಸ್ಎಸ್ಎಫ್) ಸರ್ಕಾರವನ್ನು ಒತ್ತಾಯಿಸಿದೆ.ಮಂಗಳೂರಿನ ಕ್ಲಾಕ್ ಟವರ್ ಎದುರು ಶನಿವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಸ್ಕೆಎಸ್ಎಸ್ಎಫ್ ಮುಖಂಡ ಅನೀಸ್ ಕೌಸರಿ, ಅಬ್ದುಲ್ ರಹೀಂ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬಹುದು, ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆ ಆದಾಗಲೇ ಆ ಕುಟುಂಬಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ. ಈಗಾಗಲೇ ಕಾಂಗ್ರೆಸ್ನ ಎಲ್ಲ ಮುಖಂಡರು ಹುದ್ದೆಗೆ ರಾಜಿನಾಮೆ ನೀಡಿದ್ದಾರೆ. ಪಕ್ಷದ ಹೈಕಮಾಂಡ್ ಇದನ್ನು ಅರಿತುಕೊಳ್ಳಲಿ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಎಷ್ಟೋ ಮುಸ್ಲಿಂ ಮುಖಂಡರು ಇದ್ದಾರೆ. ಕೊಲೆ ಆರೋಪಿಗಳು ಮತ್ತು ಕೊಲೆ ಪ್ರಚೋದಕರಿಗೆ ಶಿಕ್ಷೆಯಾಗಬೇಕು. ನ್ಯಾಯ ಸಿಗುವ ತನಕ ನಾವು ಸುಮ್ಮನಿರುವುದಿಲ್ಲ ಎಂದರು.
ಎಸ್ಕೆಎಸ್ಎಸ್ಎಫ್ ಮುಖಂಡರಾದ ಉವೈಸ್ ಮದನಿ ತೋಕೆ, ರಿಯಾಜ್ ರಹಮಾನಿ ಮಾತನಾಡಿ, ರಾಜಕೀಯ ಮುಖಂಡರು ಪರಿಹಾರ ಘೋಷಿಸಿ ಹೋಗುತ್ತಾರೆ, ನಂತರ ಅವರ ಕುಟುಂಬದ ಕಷ್ಟ, ಕಾರ್ಪಣ್ಯಗಳಿಗೆ ಸ್ಪಂದಿಸುವುದಿಲ್ಲ ಎಂದರು.ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಮಾತ್ರವಲ್ಲ, ಶೇ. 90ರಷ್ಟು ಕೆಳಹಂತದ ಪೊಲೀಸರನ್ನು ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಮೃತ ಅಬ್ದುಲ್ ರಹಿಮಾನ್ ಕುಟುಂಬಕ್ಕೆ 1 ಕೋಟಿ ರು. ಪರಿಹಾರ ನೀಡಬೇಕು. ಹಲ್ಲೆಗೊಳಗಾದ ಶಾಫಿ ಖಲಂದರ್ ಆಸ್ಪತ್ರೆ ವೆಚ್ಚ ಭರಿಸುವ ಜೊತೆಗೆ, ಅವರ ಕುಟುಂಬಕ್ಕೆ 25 ಲಕ್ಷ ರು. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.