ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರನಗರದಲ್ಲಿ ನೀರಿನ ಕೊರತೆ ಇಲ್ಲ. ನೀರಿನ ಸಮಸ್ಯೆ ಇರುವ ವಾರ್ಡುಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದಕ್ಕಾಗಿ ೧೫ನೇ ಹಣಕಾಸು ಯೋಜನೆಯಡಿ ೧೧ ಲಕ್ಷ ರುಗಳ ವೆಚ್ಚದಲ್ಲಿ ೫ ಹೊಸ ಟ್ಯಾಂಕರ್ಗಳನ್ನು ಖರೀದಿಸಿದೆ ಎಂದು ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ತಿಳಿಸಿದರು. ನಗರಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಇಲ್ಲ, ಯರಗೋಳ್ ಡ್ಯಾಂ ನೀರು ಬಹುತೇಕ ವಾರ್ಡ್ಗಳಿಗೆ ಪೂರೈಕೆ ಮಾಡುತ್ತಿದೆ. ಜೊತೆಗೆ ಈಗಾಗಲೇ ಶುದ್ದ ಕುಡಿಯುವ ನೀರು ಪೂರೈಕೆ ಘಟಕಗಳಿಂದ ಕುಡಿಯುವ ನೀರು ಪೂರೈಸಲಾಗುತ್ತಿರುವುದರಿಂದ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದರು.ವಸತಿ ರಹಿತರಿಗೆ ನಿವೇಶನ
ಹಲವಾರು ವರ್ಷದಿಂದ ಬಡವರಿಗೆ ನಿವೇಶನ ಹಂಚಿಕೆ ಮಾಡಿರಲಿಲ್ಲ, ಈಗ ನಗರಕ್ಕೆ ಹೊಂದಿಕೊಂಡಿರುವ ಬೆಟ್ಟದ ತಪ್ಪಲಿನ ಸಮೀಪದ ಖಾದ್ರಿಪುರ ವಾರ್ಡಿನ ವ್ಯಾಪ್ತಿಯಲ್ಲಿ ೬ ಎಕರೆ ೧೧ ಗುಂಟೆ ಜಮೀನು ನಗರಸಭೆ ಸೇರಿರುವುದು ಪತ್ತೆಯಾಗಿದೆ. ಇನ್ನು ಸ್ವಲ್ಪ ಭಾಗ ನ್ಯಾಯಾಲಯದ ವಿಚಾರಣೆ ಹಂತದಲ್ಲಿದೆ. ಸುಮಾರು ೩೯.೫ ಗುಂಟೆ ಜಮೀನು ಪೋಡಿ ಮಾಡಬೇಕಾಗಿರುವುದು ಬಾಕಿ ಉಳಿದಿದೆ. ಈ ನಿವೇಶಗಳನ್ನು ಶಾಸಕರ ಅಧ್ಯಕ್ಷತೆಯಲ್ಲಿ ಆಶ್ರಯ ಸಮಿತಿ ಮೂಲಕ ವಸತಿ ರಹಿತ ಬಡವರಿಗೆ ನಿವೇಶ ಹಂಚಿಕೆ ಮಾಡುವ ಚಿಂತನೆ ನಡೆಸಲಾಗಿದೆ ಎಂದರು. ನಿವೇಶನ ಕೋರಿ ಈಗಾಗಲೇ ಸುಮಾರು ೩ ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. ಅವುಗಳನ್ನೆಲ್ಲಾ ಪರಿಶೀಲಿಸಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಕೆಲಸ ಮಾಡಲಾಗುವುದು. ಮೂರಂಡಹಳ್ಳಿ ಬಳಿ ಇರುವ ಜಮೀನು ಪೌರಕಾರ್ಮಿಕರಿಗೆ ಈ ಹಿಂದೆ ನಿಗದಿಪಡಿಸಿದ್ದು ಕೆಲವರಿಗೆ ಹಂಚಿಕೆ ಮಾಡಲಾಗಿದೆ ಎಂದರು. ಮಳೆ ನೀರು ನಿಲ್ಲದಂತೆ ಕ್ರಮಪ್ರಸ್ತುತ ಮುಂಗಾರು ಮಳೆಯಲ್ಲಿ ಈ ಹಿಂದೆ ನಗರದ ಕೀಲುಕೋಟೆ ರೈಲ್ವೆ ಬ್ರಿಡ್ಜ್, ಖಾದ್ರಿಪುರ, ಕ್ಲಾಕ್ ಟವರ್ ಬಳಿಯ ಮಠದ ಸಮೀಪ ಇರುವ ರೈಲ್ವೆ ಬ್ರಿಡ್ಜ್, ಚಿಕ್ಕಬಳ್ಳಾಪುರ ಮಾರ್ಗ ಅಂಡರ್ ಪಾಸ್ ಬ್ರಿಡ್ಜ್ಗಳಲ್ಲಿ ಮಳೆ ಬಂದಾಗ ನೀರು ಹರಿಯದೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈಗಾಗಲೇ ಕೀಲುಕೋಟೆ ಬಳಿ ರೈಲ್ವೆ ಬ್ರಿಡ್ಜ್ ತಗ್ಗು ಪ್ರದೇಶದ ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ, ರೈಲ್ವೆ ಇಲಾಖೆಯು ಸೇರಿದಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯಿತಿಯು ಕ್ರಮಕ್ಕೆ ಮುಂದಾದರೆ ನಗರಸಭೆಯೂ ಕೈ ಜೋಡಿಸಲಿದೆ ಎಂದರು. ನಗರದಲ್ಲಿ ರಸ್ತೆಗಳು ಕೆಲವಡೆ ಹೊಸದಾಗಿ ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಅನುದಾನದಲ್ಲಿ ಮಾಡಲಾಗಿದೆ. ನಗರದಲ್ಲಿ ಇನ್ನು ಅರ್ಧ ಭಾಗ ರಸ್ತೆಗಳ ಕಾಮಗಾರಿ ಮಾಡಬೇಕಾಗಿದೆ. ಗುತ್ತಿಗೆದಾರ ಕೆಲಸವನ್ನು ಸ್ಥಗಿತಗೊಳಿಸಿದ್ದಾನೆ, ಈತನನ್ನು ಕಪ್ಪುಪಟ್ಟಿಗೆ ಸೇರ್ಪಡೆ ಮಾಡಲು ಶಿಫಾರಸ್ಸು ಮಾಡಲಾಗಿದೆ ಎಂದು ವಿವರಿಸಿದರು.ಮಲಬಾರ್ ಟ್ರಸ್ಟ್ ಅನುದಾನ
ಮಲಬಾರ್ ಡೈಮಂಡ್ ಚಾರಿಟಬಲ್ ಟ್ರಸ್ಟ್ನಿಂದ ಸಿ.ಎಸ್.ಆರ್. ಅನುದಾನದಲ್ಲಿ ಪ್ರತಿದಿನ ೨೦೦ ಮಂದಿಗೆ ಊಟ ತಿಂಡಿ ಕೊಡುತ್ತಿದ್ದು ಇದನ್ನು ಪೌರಕಾರ್ಮಿಕರಿಗೆ ವಿತರಿಸಲು ಮನವಿ ಮಾಡಿದೆ. ಅವರೇನಾದರರೂ ಸಮ್ಮತಿ ನೀಡಿದರೆ ಇದಕ್ಕೆ ಮಾಡುತ್ತಿದ್ದ ವೆಚ್ಚವನ್ನು ಪೌರಕಾರ್ಮಿಕರ ಇತರೆಗಳಿಗೆ ಬಳಕೆ ಮಾಡುವ ಚಿಂತನೆ ಮಾಡಿದೆ ಎಂದರು.ನಗರಸಭೆಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಿಬ್ಬಂದಿ ಇಲ್ಲ. ಪೌರಕಾರ್ಮಿಕರು ಇಲ್ಲದ ಕಾರಣದಿಂದಾಗಿ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವುದು ಗಮನಕ್ಕೆ ಬಂದಿದೆ. ಸಿಬ್ಬಂದಿ ಕೊರತೆ ತೀವ್ರವಾಗಿದೆ ಎಂದರು.ಪೌರಕಾರ್ಮಿಕರ ಕೊರತೆ
ಸಚಿವರು ಈಗಾಗಲೇ ಸಿಬ್ಬಂದಿಯನ್ನು ನಿಯೋಜಿಸಿದ್ದರೂ ಸಹ ಬಂದ ಒಂದೆರಡು ದಿನದಲ್ಲಿ ಒತ್ತಡ ಹೇರಿ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಹಾಗಾಗಿ ಕೆಲಸದ ಒತ್ತಡದಿಂದಾಗಿ ವಿಳಂಬವಾಗಿದೆ. ಪೌರಕಾರ್ಮಿಕ ಕೊರತೆಯಿಂದ ಸ್ವಚ್ಛತೆಯಲ್ಲೂ ಸಮಸ್ಯೆಗಳು ಗಮನಕ್ಕೆ ಬಂದಿದೆ. ಆದರೂ ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು.