ಸಾರಾಂಶ
ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಯನ್ನು ಏ.೧ರಿಂದ ಪ್ರಾರಂಭಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿದ್ದುನ್ಯಾಮನಗೌಡ ತಿಳಿಸಿದ್ದಾರೆ.
ತಿಪಟೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಯನ್ನು ಏ.೧ರಿಂದ ಪ್ರಾರಂಭಿಸಲಾಗುವುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸಿದ್ದುನ್ಯಾಮನಗೌಡ ತಿಳಿಸಿದ್ದಾರೆ.
ತಿಪಟೂರು ಎಪಿಎಂಸಿ ಪ್ರಾಂಗಣ, ಕರಡಾಳು, ಕೊನೇಹಳ್ಳಿ ಮತ್ತು ಕೆ.ಬಿ.ಕ್ರಾಸ್ ಉಪ ಪ್ರಾಂಗಣಗಳಲ್ಲಿ ಕೊಬ್ಬರಿ ಖರೀದಿ ಮಾಡಲಾಗುವುದು. ರೈತ ಬಾಂದವರು ನೋಂದಣಿಯ ಜೇಷ್ಠತೆಯನ್ನು ಎಪಿಎಂಸಿ ಕಚೇರಿಯ ಸೂಚನಾ ಫಲಕ ಮತ್ತು ನೋಂದಣಿ ಮಾಡಿದ ಕೇಂದ್ರಗಳ ಮುಂದೆ ಒಂದು ವಾರಕ್ಕಿಂತ ಮುಂಚೆಯೇ ಪ್ರತಿದಿನ ಪ್ರಕಟಿಸಲಾಗುವುದು. ಸದರಿ ಜೇಷ್ಠತೆ ಆಧರಿಸಿ ತಮಗೆ ನಿಗದಿಪಡಿಸಿದ ದಿನಾಂಕದಂದು ನಿಗದಿಪಡಿಸಿರುವ ಗುಣಮಟ್ಟದ ಕೊಬ್ಬರಿ ತರತಕ್ಕದ್ದು. ಜೇಷ್ಠತೆ ಇರುವ ರೈತರು ಕೊಬ್ಬರಿ ತರಲು ನಿಗದಿತ ದಿನಾಂಕ ತಪ್ಪಿದ್ದಲ್ಲಿ ಅಂತವರು ಮರುದಿನ ಕೊಬ್ಬರಿಯನ್ನು ತರತಕ್ಕದ್ದಲ್ಲ. ಹಾಗೆ ಬಂದರೆ ಆ ಕೊಬ್ಬರಿಯನ್ನು ಖರೀದಿಸಲಾಗುವುದಿಲ್ಲ. ಹೀಗೆ ಕೊಬ್ಬರಿ ತರಲು ತಪ್ಪಿದ ರೈತರಿಗೆ ಮತ್ತೊಂದು ದಿನಾಂಕ ಪ್ರಕಟಿಸಲಾಗು ವುದು. ಜೇಷ್ಠತೆ ಇಲ್ಲದೆ ತರುವ ಕೊಬ್ಬರಿಯನ್ನು ಪ್ರಾಂಗಣದ ಒಳಗಡೆ ಬಿಡಲಾಗುವುದಿಲ್ಲ. ಜೇಷ್ಠತೆ ಹೊಂದಿರುವ ರೈತರು ತಮಗೆ ನಿಗದಿಪಡಿಸಿದ ದಿನದಂದು ಮಾತ್ರ ಬೆಳಗ್ಗೆ 7ರಿಂದ ಮಧ್ಯಾಹ್ನ 3ಗಂಟೆಯೊಳಗೆ ತಮ್ಮ ಕೊಬ್ಬರಿ ತುಂಬಿದ ವಾಹನ ದೊಂದಿಗೆ ಪ್ರವೇಶ ದ್ವಾರದಲ್ಲಿ ಟೋಕನ್ ತೆಗೆದುಕೊಂಡು ಖರೀದಿ ಸಮಯದಲ್ಲಿ ಸದರಿ ಕೇಂದ್ರದ ಖರೀದಿ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ರೈತ ಬಾಂಧವರು ತಾವು ನೋಂದಣಿ ಮಾಡಿದ ಖರೀದಿ ಕೇಂದ್ರದಲ್ಲಿಯೇ ತಮ್ಮ ಕೊಬ್ಬರಿ ಮಾರಾಟ ಮಾಡ ಬೇಕು. ಕರಡಾಳು, ಕೊನೇಹಳ್ಳಿ, ಕೆ.ಬಿ. ಕ್ರಾಸ್ಗಳಲ್ಲಿ ನೋಂದಣಿ ಮಾಡಿದ ರೈತರು ಅಲ್ಲಿಯೇ ತಮ್ಮ ಕೊಬ್ಬರಿಯನ್ನು ಮಾರಾಟ ಮಾಡಬೇಕು. ಕೊಬ್ಬರಿಯನ್ನು ಮಾರಾಟ ಮಾಡಲು ಬರುವಾಗ ತಾವು ಪಡೆದ ನೋಂದಣಿ ಪ್ರತಿಯನ್ನು ತರತಕ್ಕ ದ್ದು. ಕಡ್ಡಾಯವಾಗಿ ಎಫ್ಎಕ್ಯೂ ಗುಣಮಟ್ಟದ ಕೊಬ್ಬರಿಯನ್ನು ಮಾರಾಟಕ್ಕೆ ತರಬೇಕೆಂದು ತಿಳಿಸಿದ್ದಾರೆ.