ಸಾರಾಂಶ
ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ರಾಹುಲ್ ರತ್ನಂ ಪಾಂಡೆಯ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ನಡೆಸುವ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಕೆಟಿಪಿಪಿ ನಿಯಮಗಳನ್ನು ಅನುಸರಿಸಿ ಖರೀದಿಸಲು ಮಾದರಿ ಟೆಂಡರ್ ಡಾಕ್ಯೂಮೆಂಟ್ ತರಬೇತಿಯ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲೆಯ ಎಲ್ಲ ಪಂಚಾಯಿತಿಗಳ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ತಿಳಿಸಿದರು.ಜಿಲ್ಲಾ ಪಂಚಾಯಿತಿಯ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾಮಗಾರಿ ಅನುಷ್ಠಾನದಲ್ಲಿ ಕೆಟಿಪಿಪಿ ಮತ್ತು ಕೆಪಿಪಿಪಿ ನಿಯಮಗಳ ಪಾಲನೆ ಮತ್ತು ಕಾರ್ಯವಿಧಾನದಲ್ಲಿ ಕಾನೂನಿನ ಒಂಬತ್ತು ಅಂಶಗಳಿವೆ ಎಂಬ ವಿಷಯದ ಮೇಲಿನ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಯಾವುದೇ ಯೋಜನೆಗಳು ಪರಿಣಾಮಕಾರಿ ಮತ್ತು ಪಾರದರ್ಶಕವಾಗಿ ಅನುಷ್ಠಾನವಾಗಬೇಕಿದ್ದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಯಾದ ನಾವು ಯೋಜನೆಗಳ ಕಾಯ್ದೆಗಳ ಕುರಿತು, ಮಾರ್ಗಸೂಚಿಗಳ ಕುರಿತು ಸರಿಯಾಗಿ ಅರ್ಥೈಸಿಕೊಂಡರೆ ಯೋಜನೆಗಳನ್ನು ಅನುಷ್ಠಾನ ಮಾಡಲು ಸಾಧ್ಯ. ಅದರಂತೆ ಈ ವಿಷಯಗಳನ್ನು ಸಾರ್ವಜನಿಕರಿಗೆ ಸರಿಯಾಗಿ ತಿಳುವಳಿಕೆ ನೀಡಿದಲ್ಲಿ ಮಾತ್ರ ಪಾರದರ್ಶಕ ಆಡಳಿತ ನೀಡಲು ಸಾಧ್ಯ. ಕಾರ್ಯವಿಧಾನವು ಕಾನೂನಿನ ಒಂಬತ್ತು ಅಂಶಗಳನ್ನು ಒಳಗೊಂಡಿರುತ್ತದೆ ಎಂಬ ವಿಷಯಗಳ ಕುರಿತು ಕಚೇರಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಮತ್ತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಕೃಷ್ಣಮೂರ್ತಿ ದೇಸಾಯಿ ಮತ್ತು ತಜ್ಞ ಸಂಪನ್ಮೂಲ ವ್ಯಕ್ತಿಗಳಾದ ಜಿಲ್ಲಾ ಪಂಚಾಯಿತಿಯ ಬಳ್ಳಾರಿ ಲೋಕಲ್ ಆಡಿಟ್ ಸರ್ಕಲ್ನ ಆಡಿಟ್ ಅಧಿಕಾರಿ ನಿಸಾರ್ ಅಹ್ಮದ್ ಮಹಾತ್ಮಾ ಗಾಂಧಿ ನರೇಗಾ ಯೋಜನೆಯ ಅನುಷ್ಠಾನಕ್ಕಾಗಿ ₹5 ಲಕ್ಷ ಮೀರಿದ ಸರಕು ಸಾಮಗ್ರಿಗಳನ್ನು ಖರೀದಿಸಲು ಕೆಟಿಪಿಪಿ ಮತ್ತು ಕೆಪಿಪಿಪಿ ನಿಯಮದಂತೆ ಕ್ರಮವಹಿಸುವುದು ಕಡ್ಡಾಯವಾಗಿರುವುದರಿಂದ ಟೆಂಡರ್ ಅನ್ನು ಆಹ್ವಾನಿಸಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವ ಕುರಿತು ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳಿಗೆ ಗ್ರಾಪಂಗಳಿಂದ ಆಹ್ವಾನಿಸಲಾಗುವ ಟೆಂಡರುಗಳಿಗೆ ಆಯಾ ಪ್ರಾಧಿಕಾರಗಳ ಆರ್ಥಿಕ ಮಿತಿಗಳ ಆಧಾರದಲ್ಲಿ ಆಹ್ವಾನಿಸುವ ಪ್ರಾಧಿಕಾರ, ಪರಿಶೀಲನಾ ಪ್ರಾಧಿಕಾರ, ಅನುಮೋದಿಸುವ ಪ್ರಾಧಿಕಾರ ಹಾಗೂ ಮೇಲ್ಮನವಿ ಪ್ರಾಧಿಕಾರಗಳನ್ನು ನೇಮಿಸುವಂತೆ ಮಾರ್ಗಸೂಚಿಗಳ ಕುರಿತು ತರಬೇತಿ ನೀಡಿದರು.
ತರಬೇತಿಯಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ಎಡಿಪಿಸಿ, ಡಿಎಂಐಎಸ್, ಡಿಐಇಸಿ, ಜಿಲ್ಲಾ ಐಇಸಿ ಸಂಯೋಜಕರು, ತಾಲೂಕು ಎಂಐಎಸ್ ಸಂಯೋಜಕರು ಇದ್ದರು.