ಸಾರಾಂಶ
ಶಿವರಾತ್ರಿಯಂದು ಭಕ್ತರು ಪಾದಯಾತ್ರೆ ಮಾಡಿ ಪಂಚಾಕ್ಷರಿ ಜಪ ಮಾಡಿದರೆ ಒಳ್ಳೆಯದಾಗುತ್ತದೆ.
ಭಟ್ಕಳ: ಮಾರುಕೇರಿಯ ಹೂತ್ಕಳದ ಧನ್ವಂತರಿ ಮಹಾವಿಷ್ಣು ಗಣಪತಿ ದೇವಸ್ಥಾನದಿಂದ ಕಿತ್ರೆಯ ದೇವಿಮನೆಯ ಶಿವಶಾಂತಿಕಾ (ದುರ್ಗಾ) ಪರಮೇಶ್ವರಿ ದೇವಸ್ಥಾನಕ್ಕೆ ಮಹಾಶಿವರಾತ್ರಿ ಅಂಗವಾಗಿ ಸ್ಥಳೀಯರು ಲೋಕಕಲ್ಯಾಣಾರ್ಥವಾಗಿ 6ನೇ ವರ್ಷದ ಪಾದಯಾತ್ರೆ ನಡೆಸಿ, ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಮತ್ತು ದೇವಸ್ಥಾನದಲ್ಲಿ ಪಂಚಾಕ್ಷರಿ ಜಪ ಮಾಡಲಾಯಿತು. ದೇವಿಮನೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ದೇವಿಮನೆ ಪ್ರಧಾನ ಅರ್ಚಕ ಬಾಲಚಂದ್ರ ಭಟ್ಟ, ಶಿವರಾತ್ರಿಯಂದು ಭಕ್ತರು ಪಾದಯಾತ್ರೆ ಮಾಡಿ ಪಂಚಾಕ್ಷರಿ ಜಪ ಮಾಡಿದರೆ ಒಳ್ಳೆಯದಾಗುತ್ತದೆ. ಶಿವನ ಸ್ಮರಣೆಯಿಂದ ನಮ್ಮಲ್ಲಿರುವ ಪಾಪತ್ವ, ಕೊಳೆ, ಕಲ್ಮಶ ಹೋಗಿ ಮನಸ್ಸು ಶುದ್ಧೀಕರಣ ಆಗಲು ಸಹಕಾರಿ ಆಗುತ್ತದೆ. ಇಂತಹ ಪುಣ್ಯ ಕಾರ್ಯಗಳು ಹೆಚ್ಚಾಗಬೇಕು. ಪಾದಯಾತ್ರೆಯಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು. ಆ ಮೂಲಕ ಶಿವರಾತ್ರಿ ಯಶಸ್ವಿಗೊಳಿಸಬೇಕು ಎಂದರು.ಧನ್ವಂತರಿ ವಿಷ್ಣುಮೂರ್ತಿ ಗಣಪತಿ ದೇವಸ್ಥಾನದಲ್ಲಿ ಅರ್ಚಕ ಶಂಕರ ಭಟ್ಟ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು.
ಪಾದಯಾತ್ರೆ ಸಮಿತಿ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಪ್ರಾಸ್ತಾವಿಕ ಮಾತನಾಡಿದರು. ಮಾರುಕೇರಿ ಗ್ರಾಪಂ ಅಧ್ಯಕ್ಷೆ ನಾಗವೇಣಿ ಗೊಂಡ, ಉಪಾಧ್ಯಕ್ಷ ಎಂ.ಡಿ. ನಾಯ್ಕ, ಸದಸ್ಯ ನಾರಾಯಣ ಗೊಂಡ, ಪಾದಯಾತ್ರೆ ಸಮಿತಿ ಪ್ರಮುಖರಾದ ಕೃಷ್ಣಮೂರ್ತಿ ಹೆಗಡೆ, ಮಾರುಕೇರಿ ಎಸ್ಪಿ ಹೈಸ್ಕೂಲ್ ಮುಖ್ಯಶಿಕ್ಷಕ ಪಿ.ಟಿ. ಚವ್ಹಾಣ, ಸೋಮಶೇಖರ ನಾಯ್ಕ, ರವಿ ನಾಯ್ಕ, ನಾಗೇಶ ದೇವಡಿಗ, ಮಂಜುನಾಥ ಗೊಂಡ, ಚಂದ್ರಕಲಾ ನಾಯ್ಕ, ಗುರುದತ್ತ ದೇವಡಿಗ, ಗಣೇಶ ಗೊಂಡ, ಮಹೇಶ ಶೆಟ್ಟಿ ಮುಂತಾದವರಿದ್ದರು.ಪಾದಯಾತ್ರೆಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 120ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಕೋಕ್ತಿಯ ನಾಗರಾಜ ಭಟ್ಟ ಅವರ ತಂಡದ ಚಂಡೆ ವಾದನ ಪಾದಯಾತ್ರೆಗೆ ಮೆರುಗು ನೀಡಿತು. ದೇವಸ್ಥಾನದ ಆಡಳಿತ ಮಂಡಳಿಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡ ಭಕ್ತರಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಶಿವರಾತ್ರಿ ಅಂಗವಾಗಿ ಭಟ್ಕಳದ ಮಾರುಕೇರಿ ಧನ್ವಂತರಿ ದೇವಸ್ಥಾನದಿಂದ ಕಿತ್ರೆಯ ದೇವಿಮನೆಗೆ ಭಕ್ತರು ಪಾದಯಾತ್ರೆ ನಡೆಸಿದರು.