ಡಿಜಿಟಲ್ ಯುಗದಲ್ಲೂ ಸಹ ಗ್ರಂಥಾಲಯಗಳ ಮಹತ್ವ ಕುಗ್ಗುವುದಿಲ್ಲ, ಪುಸ್ತಕಗಳ ಮೂಲಕ ಜ್ಞಾನಾರ್ಜನೆಗೆ ಪ್ರೇರಣೆ ನೀಡುವ ಗ್ರಂಥಪಾಲಕರ ಸೇವೆ ಸ್ಮರಿಸುವ ದಿನ ಇದಾಗಿದ್ದು ಡಾ. ಎಸ್‌.ಆರ್. ರಂಗನಾಥನ್ ಅವರು ದೇಶದ ಗ್ರಂಥಾಲಯ ಚಳವಳಿಗೆ ನೀಡಿದ ಕೊಡುಗೆ ಅನನ್ಯವಾದದ್ದು.

ಅಳ್ನಾವರ:

ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಕಡಿಮೆ ಮಾಡಿ ಗ್ರಂಥಾಲಯಗಳಿಗೆ ಭೇಟಿ ನೀಡುವ ಮೂಲಕ ಓದಿನ ಅಭ್ಯಾಸ ಬೆಳೆಸಿಕೊಳ್ಳಬೇಕೆಂದು ಪ್ರಾಂಶುಪಾಲರಾದ ಡಾ. ಎಂ.ಡಿ. ಒಕ್ಕುಂದ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪುಸ್ತಕಗಳು ನಮ್ಮ ನಿಜವಾದ ಮಾರ್ಗದರ್ಶಿಗಳು. ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗಿದ್ದು ಪ್ರತಿಯೊಬ್ಬರು ಅವುಗಳ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಡಿಜಿಟಲ್ ಯುಗದಲ್ಲೂ ಸಹ ಗ್ರಂಥಾಲಯಗಳ ಮಹತ್ವ ಕುಗ್ಗುವುದಿಲ್ಲ, ಪುಸ್ತಕಗಳ ಮೂಲಕ ಜ್ಞಾನಾರ್ಜನೆಗೆ ಪ್ರೇರಣೆ ನೀಡುವ ಗ್ರಂಥಪಾಲಕರ ಸೇವೆ ಸ್ಮರಿಸುವ ದಿನ ಇದಾಗಿದ್ದು ಡಾ. ಎಸ್‌.ಆರ್. ರಂಗನಾಥನ್ ಅವರು ದೇಶದ ಗ್ರಂಥಾಲಯ ಚಳವಳಿಗೆ ನೀಡಿದ ಕೊಡುಗೆ ಅನನ್ಯವಾದದ್ದು. ಗ್ರಂಥಗಳು ಜಗತ್ತಿನ ಮಹಾ ವ್ಯಕ್ತಿತ್ವಗಳ ನಿರ್ಮಾತೃಗಳಾಗಿವೆ. ಮಹಾನ್ ವ್ಯಕ್ತಿಗಳು ಶ್ರೇಷ್ಠ ಕೃತಿಗಳನ್ನು ಓದುವ ಮೂಲಕ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ವಿದ್ಯಾರ್ಥಿ ಹಾಗೂ ಯುವಜನರು ಬದುಕಿನ ಒಳಿತು-ಕೆಡುಕುಗಳನ್ನು ಅರಿತುಕೊಂಡು ಜ್ಞಾನಮುಖಿ ವ್ಯಕ್ತಿತ್ವ ರೂಪಿಸಿಕೊಳ್ಳಲು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರೊ. ಭೀಮನಗೌಡ ಪಾಟೀಲ ಅವರು ಸ್ಪರ್ಧಾತ್ಮಕ ಪರೀಕ್ಷಾ ತಯಾರಿಯಲ್ಲಿ ಗ್ರಂಥಾಲಯದ ಪಾತ್ರ ವಿಷಯ ಕುರಿತು ಉಪನ್ಯಾಸ ನೀಡಿದರು. ಗ್ರಂಥಪಾಲಕ ಮಂಜುಳಾ ಹಾರೋಬಿಡಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಚಾಲಕಿ ಡಾ. ಉಮಾ ಪೂಜಾರ, ಡಾ. ಸುರೇಶ ದೊಡ್ಡಮನಿ, ಡಾ. ಪರವೀನ ಶೇಖ, ಪ್ರೊ. ದೇವೇಂದ್ರ ತಳವಾರ, ಡಾ. ಆರ್.ಬಿ. ಸೋನೆಖಾನ, ಪರಶುರಾಮ ಮಿಸಾಲೆ ಇದ್ದರು. ದೀಪಾ ಕುಕಡೊಳ್ಳಿ ಪ್ರಾರ್ಥಿಸಿದರು. ರಂಜನಾ ಗೇನಪ್ಪನವರ ನಿರೂಪಿಸಿದರು. ಸುಕೀನಾ ಹಂಚಿನಮನಿ ವಂದಿಸಿದರು.