ಸೂರೆಗೊಂಡಿತು ಕೃಷ್ಣ ಮಠದ ಅಡುಗೆ ಮನೆ...

| Published : Jan 18 2024, 02:01 AM IST

ಸಾರಾಂಶ

ಆಳೆತ್ತರದ ಭಾರೀ ಹಂಡೆಯಲ್ಲಿರುವ ಬಿಸಿಬಿಸಿ ಸಾಂಬಾರು, ಪಾಯಸವನ್ನು ಜನರು ಹಂಡೆಯ ಸುತ್ತ ನಿಂತು ಬಾಲ್ದಿಗೆ ಹಗ್ಗ ಕಟ್ಟಿ ಹಂಡೆಗೆ ಇಳಿಸಿ ಮೇಲೆಳೆಯುವುದನ್ನು ನೋಡುವುದೇ ಒಂದು ಹಬ್ಬ.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ಪರ್ಯಾಯೋತ್ಸವದಂದು ನಡೆಯುವ ಒಂದು ಸಾಂಪ್ರದಾಯಿಕ ಶಾಸ್ತ್ರ ‘ಅಡುಗಮನೆಯ ಸೂರೆ’.

ಪರ್ಯಾಯ ಮಠವು ನಿತ್ಯ ಸಾವಿರಾರು ಮಂದಿಗೆ ಅನ್ನದಾನ ನಡೆಸುತ್ತದೆ. 2 ವರ್ಷಗಳ ಪರ್ಯಾಯ ಕೊನೆ ದಿನ ಮಧ್ಯಾಹ್ನ ಅನ್ನಪ್ರಸಾದ ವಿತರಣೆಯ ನಂತರ, ಸುಮಾರು 3 ಗಂಟೆಗೆ ಉಳಿದ ಎಲ್ಲಾ ಅಡುಗೆಯನ್ನು ಭಾರಿ ಗಾತ್ರದ ಪಾತ್ರೆಗಳಲ್ಲಿ ಅಡುಗೆ ಮನೆಯಲ್ಲಿ ಬಿಟ್ಟು ಬಿಡಲಾಗುತ್ತದೆ.

ಇದನ್ನು ಸ್ಥಳೀಯರು ತಂತಮ್ಮ ಮನೆಯಿಂದ ಪಾತ್ರೆ, ಹಂಡೆಗಳನ್ನು ತಂದು ಬೇಕಾದಷ್ಟು ತುಂಬಿಸಿಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಅನ್ನ, ಸಾರು, ಸಾಂಬಾರು, ಪಾಯಸ ಇತ್ಯಾದಿ ಗಳನ್ನು ತುಂಬಿಕೊಳ್ಳಲು ಸ್ಪರ್ಧೆಯೇ ನಡೆಯುತ್ತದೆ.

ಆಳೆತ್ತರದ ಭಾರೀ ಹಂಡೆಯಲ್ಲಿರುವ ಬಿಸಿಬಿಸಿ ಸಾಂಬಾರು, ಪಾಯಸವನ್ನು ಜನರು ಹಂಡೆಯ ಸುತ್ತ ನಿಂತು ಬಾಲ್ದಿಗೆ ಹಗ್ಗ ಕಟ್ಟಿ ಹಂಡೆಗೆ ಇಳಿಸಿ ಮೇಲೆಳೆಯುವುದನ್ನು ನೋಡುವುದೇ ಒಂದು ಹಬ್ಬ.

ಹಗಲಾಗುವಾಗ ಎಲ್ಲವೂ ಹೊಸತು...: ಕೃಷ್ಣಮಠದಲ್ಲಿ ಪರ್ಯಾಯ ಅಧಿಕಾರ ಸ್ವೀಕಾರ ಎಂದರೆ ಜ.17ರ ರಾತ್ರಿ 18ರ ಹಗಲಾವುದರೊಳಗೆ ಪೂರ್ಣ ಹೊಸ ವ್ಯವಸ್ಥೆ ಜಾರಿಯಾಗುತ್ತದೆ.

ನಿರ್ಗಮನ ಮಠದವರು ಪಾತ್ರೆ, ಪರಡಿ, ಚಾಪೆ ಸಹಿತ ಎಲ್ಲವನ್ನೂ ತೆಗೆದುಕೊಂಡು ಹೋಗುತ್ತಾರೆ. ಆಗಮನ ಮಠಾಧೀಶರು ಮರುದಿನದ ಅನ್ನದಾನಕ್ಕೆ ಬೇಕಾದ ಅಕ್ಕಿ, ಬೇಳೆ, ತರಕಾರಿ, ಪಾತ್ರೆ ಇತ್ಯಾದಿಗಳೆಲ್ಲವನ್ನೂ ಹೊಸತಾಗಿ ಜೋಡಿಸಿಕೊಳ್ಳಬೇಕಾಗುತ್ತದೆ. ಕೃಷ್ಣನ ಪೂಜೆಗೆ ಹೊಸ ಮಠಾಧಿಪತಿಗಳ ಜೊತೆಗೆ ಮಠದ ಅಧಿಕಾರಿಗಳು, ಸಿಬ್ಬಂದಿ ಕೂಡ ಹೊಸಬರೇ ನೇಮಕ ಆಗಿರುತ್ತಾರೆ.

ಎರಡು ದರ್ಬಾರ್, 16 ಮಂದಿಗೆ ಸನ್ಮಾನ: ಪುತ್ತಿಗೆ ಮಠದ ಪರ್ಯಾಯವು ಹಲವು ವೈಶಿಷ್ಟ್ಯತೆಗಳಿಂದ ಕೂಡಿರಲಿದ್ದು, ಅದರಂತೆ ಇಂದು 2 ದರ್ಬಾರ್‌ಗಳನ್ನು ನಡೆಸಲಾಗುತ್ತದೆ.ಬೆಳಗ್ಗೆ ಸಂಪ್ರದಾಯದಂತೆ ಸುಪ್ರಬಾತ ದರ್ಬಾರ್ ನಡೆಯಲಿದ್ದು, ಈ ಧಾರ್ಮಿಕ ದರ್ಬಾರ್‌ನಲ್ಲಿ ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯ, ಕೇಶವ ರಾವ್ ತಾಡಪತ್ರಿ, ಡಾ.ಎನ್. ವೆಂಕಟೇಶಾಚಾರ್ಯ, ಜ್ಯೋತಿಷಿ ಬೇಳ ಪದ್ಮನಾಭ ಶರ್ಮ, ನವದೆಹಲಿಯ ಸಂಸ್ಕೃತ ವಿವಿ ಕುವಪತಿ ಡಾ. ಶ್ರೀನಿವಾಸ ವರಖೇಡಿ, ಹಿರಿಯ ಸಂಶೋಧಕ ರಾಮನಾಥ ಆಚಾರ್ಯ, ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧುಪಂಡಿತ ದಾಸ್, ಇಸ್ಕಾನ್ ಅಂತಾರಾಷ್ಟ್ರೀಯ ಅಧ್ಯಕ್ಷೆ ರೇವತಿ ರಮಣದಾಸ್, ಮಾಹೆಯ ಅಧ್ಯಕ್ಷ ಡಾ. ರಂಜನ್ ಪೈ, ಹಿರಿಯ ವಕೀಲ ಹಾರ್ನಹಳ್ಳಿ ಅಶೋಕ್, ಮೈಸೂರಿನ ಕೋಕಿಲ ವೇಮುರಿ, ಮಹಾಂತೇಶ್ ಸಣ್ಣಣ್ಣನವರ್ ಅವರಿಗೆ ದರ್ಬಾರ್ ಸನ್ಮಾನ ನಡೆಯಲಿದೆ.ಸಂಜೆ ನಡೆಯುವ ಸಂಧ್ಯಾ ದರ್ಬಾರ್‌ನಲ್ಲಿ ಉದ್ಯಮಿಗಳಾದ ಶ್ರೀನಿವಾಸ ವಿವಿ ಕುಲಾಧಿಪತಿ ಡಾ.ಸಿ.ಎ. ರಾಘವೇಂದ್ರ ರಾವ್, ವಿದ್ವಾನ್ ಪಂಜ ಭಾಸ್ಕರ ರಾವ್, ಮಧ್ವರಮಣ ಆಚಾರ್ಯ, ಮಧ್ವೇಶ್ ಭಟ್ ಅವರಿಗೆ ಸನ್ಮಾನ ನಡೆಯಲಿದೆ.