ಯುವ ಮುಖಂಡ ಸಹಜ್ ರೈ ಬಳಜ್ಜ ಅವರ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ವತಿಯಿಂದ ಪುತ್ತೂರು ನಗರದ ಹೊರವಲಯದ ಬಪ್ಪಳಿಗೆ ಸಮೀಪದ ಬಡ ಕುಟುಂಬಕ್ಕೆ ನೂತನವಾಗಿ ಮನೆಯನ್ನು ನಿರ್ಮಿಸಿ ಭಾನುವಾರ ಹಸ್ತಾಂತರ ಮಾಡಲಾಯಿತು.
ಪುತ್ತೂರು: ಯುವ ಮುಖಂಡ ಸಹಜ್ ರೈ ಬಳಜ್ಜ ಅವರ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ವತಿಯಿಂದ ಪುತ್ತೂರು ನಗರದ ಹೊರವಲಯದ ಬಪ್ಪಳಿಗೆ ಸಮೀಪದ ಬಡ ಕುಟುಂಬಕ್ಕೆ ನೂತನವಾಗಿ ಮನೆಯನ್ನು ನಿರ್ಮಿಸಿ ಭಾನುವಾರ ಹಸ್ತಾಂತರ ಮಾಡಲಾಯಿತು. ವಿಜಯ ಸಾಮ್ರಾಟ್ನ 4ನೇ ಯೋಜನೆಯಾಗಿ ಬಪ್ಪಳಿಗೆ ಅಶೋಕ್ ಅವರ ಕುಟುಂಬಕ್ಕೆ ಒಂದು ತಿಂಗಳ ಒಳಗಾಗಿ ಸುಸಜ್ಜಿತವಾದ ಮನೆ ನಿರ್ಮಿಸಿ ಹಸ್ತಾಂತರ ಮಾಡಲಾಗಿದೆ. ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ ಅಶೋಕ್ ಅವರ ಮನೆ ಶಿಥಿಲಾವಸ್ಥೆ ಗಮನಿಸಿದ ಸ್ಥಳೀಯ ನಿವಾಸಿಗಳಾದ ರವಿ ಗೌಡ ಕರ್ಕುಂಜ ಹಾಗೂ ಜನಾರ್ದನ ಗೌಡ ನೀಡಿದ ಮಾಹಿತಿಯಂತೆ ವಿಜಯ ಸಾಮ್ರಾಟ್ ಬಳಗವು ಏ.23ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನೂತನ ಮನೆ ನಿರ್ಮಿಸಿ ಕೊಡುವ ವಾಗ್ದಾನ ನೀಡಿದ್ದರು. ಕೊಟ್ಟ ಮಾತಿನಂತೆ ಜೂ.1 ರಿಂದ ಮನೆ ನಿರ್ಮಾಣ ಕಾರ್ಯವನ್ನು ಕೈಗೆತ್ತಿಗೊಂಡು ಕೇವಲ ಒಂದೇ ತಿಂಗಳಲ್ಲಿ ಪೂರ್ಣಗೊಳಿಸಿ ಇದೀಗ ಅಶೋಕ್ ಅವರಿಗೆ ಹಸ್ತಾಂತರಿಸಲಾಗಿದೆ.
ಗೃಹಪ್ರವೇಶ ಕಾರ್ಯಕ್ರಮದಲ್ಲಿ ಆರ್.ಎಸ್.ಎಸ್ ಮಂಗಳೂರು ವಿಭಾಗದ ಸಹಕಾರ್ಯವಾಹ ಸುಭಾಶ್ಚಂದ್ರ ಕಳಂಜ ಅಶೋಕ್ ಅವರಿಗೆ ಭಾರತ ಮಾತೆಯ ಭಾವಚಿತ್ರ ಹಾಗೂ ಮನೆಯ ಕೀಲಿ ಹಸ್ತಾಂತರಿಸಿದರು. ಆರ್.ಎಸ್.ಎಸ್ ಪುತ್ತೂರು ವಿಭಾಗದ ಜಿಲ್ಲಾ ಕಾರ್ಯನಿರ್ವಾಹಕ ನವೀನ್ ರೈ ಕೈಕಾರ ಮಾತನಾಡಿ ಬಡ ಹಾಗೂ ನಿರ್ಗತಿಕರಿಗೆ ಮನೆ ನಿರ್ಮಿಸಿಕೊಡುವ ಮೂಲಕ ವಿಜಯ್ ಸಾಮ್ರಾಟ್ ಸಂಸ್ಥೆಯು ಅರ್ಥಪೂರ್ಣ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ ಎಂದರು.ವಿಜಯ್ ಸಾಮ್ರಾಟ್ ಪುತ್ತೂರು ಸ್ಥಾಪಕ ಯುವ ಉದ್ಯಮಿ ಸಹಜ್ ರೈ ಬಳಜ್ಜ ಮಾತನಾಡಿ ಬಡವರಿಗೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಸ್ಥಾಪಿಸಲಾಗಿದೆ. ಮನೆ ಇಲ್ಲದವರಿಗೆ ವರ್ಷಕ್ಕೊಂದರಂತೆ ಮನೆ ನಿರ್ಮಿಸುವ ಉದ್ದೇಶ ಹಾಕಲಾಗಿದೆ. ಯಾವುದೇ ಬಾಹ್ಯ ದಾನಿಗಳ ಸಹಕಾರವನ್ನು ಕೋರದೆ ಕೇವಲ ನಮ್ಮ ಸಂಸ್ಥೆಯ ಸದಸ್ಯರ ಸಹಕಾರದೊಂದಿಗೆ ಈ ಮನೆ ನಿರ್ಮಾಣ ಮಾಡಲಾಗಿದೆ. ವಿಜಯ್ ಸಾಮ್ರಾಟ್ ಸಂಸ್ಥೆಯು ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದೆ ಎಂದರು.ಸಂಸ್ಥೆಯ ಸದಸ್ಯರಾದ ನೂತನ ಮನೆಯ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದ್ದ ಈಶಾನ್ಯ ಬಿಲ್ಡರ್ಸ್ನ ಶಂಕರ್ ಭಟ್ ಹಾಗೂ ಬಿಸಿಬಿಯ ಜಗನ್ನಾಥ್ ಅವರನ್ನು ಸನ್ಮಾನಿಸಲಾಯಿತು.
ವಿಜಯ ಸಾಮ್ರಾಟ್ನ ಗೌರವ ಸಲಹೆಗಾರ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ರತನ್ ರೈ ಕುಂಬ್ರ, ರತ್ನಶ್ರೀ ಪವನ್ ಕುಮಾರ್ ಶೆಟ್ಟಿ, ಆದರ್ಶ ಉಪ್ಪಿನಂಗಡಿ, ವಿಜಯ್ ಸಾಮ್ರಾಟ್ ಸಂಸ್ಥೆಯ ಸದಸ್ಯರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.