ಯುವ ಜನತೆಯನ್ನು ಡ್ರಗ್ಸ್ ವ್ಯಸನಕ್ಕೆ ಸಿಲುಕಿಸಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆ ಮಾಡುವ ಸಮಾಜಘಾತುಕ ಶಕ್ತಿಗಳಿವೆ ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅಭಿಪ್ರಾಯಪಟ್ಟರು.
ಪುತ್ತೂರು: ಯುವ ಜನತೆಯನ್ನು ಡ್ರಗ್ಸ್ ವ್ಯಸನಕ್ಕೆ ಸಿಲುಕಿಸಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆ ಮಾಡುವ ಸಮಾಜಘಾತುಕ ಶಕ್ತಿಗಳಿವೆ ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅಭಿಪ್ರಾಯಪಟ್ಟರು. ಅವರು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಬಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ಶುಕ್ರವಾರ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಣೆ ವಿರೋಧಿ ದಿನಾಚರಣೆಯ ಜನಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಫಿಟ್ ಇಂಡಿಯಾ ಮಾದಕ ದ್ರವ್ಯ ಮುಕ್ತ ೫ಕೆ ಮ್ಯಾರಥಾನ್ಗೆ ಚಾಲನೆ ನೀಡಿ ಮಾತನಾಡಿದರು.
ದ.ಕ.ಜಿಲ್ಲಾ ಅಡಿಷನಲ್ ಎಸ್ಪಿ ಅನಿಲ್ ಎಸ್ ಬೂಮಾರೆಡ್ಡಿ ಮಾತನಾಡಿ ಮಾದಕ ದ್ರವ್ಯ ಸೇವನೆ, ಅಕ್ರಮ ಸಾಗಣೆ ಪಿಡುಗು ಜಗತ್ತಿನಾದ್ಯಂತ ಹರಡಿದೆ. ಮಾದಕ ವಸ್ತು ಬಳಕೆಯಿಂದ ಉಂಟಾಗುವ ದುಷ್ಪರಿಣಾಮದಿಂದ ಇಡೀ ಜೀವನ ಹಾಳು ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಅವರು ಸಮಾಜಕ್ಕೂ ಕಂಟಕಪ್ರಾಯರಾಗುತ್ತಾರೆ ಎಂದರು.ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇಕ್ಬಾಲ್ ಬಾಳಿಲ ಅವರು ಮಾದಕ ವಸ್ತುವಿನ ದುಷ್ಪರಿಣಾಮದ ಕುರಿತು ಬರೆದ ಕೃತಿಯನ್ನು ಅತಿಥಿಗಳಿಗೆ ವಿತರಿಸಲಾಯಿತು.
ಪುತ್ತೂರು ಉಪವಿಭಾಗದ ಪೊಲೀಸ್ ಇಲಾಖೆಯ ನೇತೃತ್ವದಲ್ಲಿ ಪುತ್ತೂರಿನ ಎಲ್ಲಾ ರೋಟರಿ ಸಂಸ್ಥೆಗಳು, ಲಯನ್ಸ್ ಕ್ಲಬ್ ಪುತ್ತೂರು, ಲಯನ್ಸ್ ಪುತ್ತೂರುದ ಮುತ್ತು, ಇನ್ನರ್ ವೀಲ್ ಕ್ಲಬ್, ರೋಟರಾಕ್ಟ್ ಕ್ಲಬ್, ಜೆಸಿಐ ಸಂಸ್ಥೆ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಇತರ ವಿವಿಧ ಸಾಮಾಜಿಕ ಮತ್ತು ಸೇವಾ ಸಂಘ, ಸಂಸ್ಥೆಗಳ ಸಹಕಾರದೊಂದಿಗೆ ಕಳೆದ ೫ ದಿನಗಳಿಂದ ವಿವಿಧ ಜನಜಾಗೃತಿ ಅಭಿಯಾನ ನಡೆದ ಬಳಿಕ ಸಮಾರೋಪದ ಅಂಗವಾಗಿ ೫ ಕೆ ಮ್ಯಾರಥಾನ್ ನಡೆಯಿತು.ವಿವಿಧ ಠಾಣೆಗಳ ಠಾಣಾಧಿಕಾರಿಗಳು, ಸಂಘ ಸಂಸ್ಥೆಗಳ ಮುಖ್ಯಸ್ಥರು, ವರ್ತಕರು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.
೬೪೨ ಮಂದಿ ಭಾಗವಹಿಸುವಿಕೆ: ಮ್ಯಾರಥಾನ್ನಲ್ಲಿ ಒಟ್ಟು ೬೪೨ ಮಂದಿ ಭಾಗವಹಿಸಿದ್ದರು. ೧೮ ರಿಂದ ಒಳಗಡೆ, ೩೦ ರಿಂದ ಒಳಗಡೆ, ೫೦ ಒಳಗಡೆ ಮತ್ತು ಮೇಲ್ಪಟ್ಟವರಿಗೆ ಪ್ರತ್ಯೇಕ ವಿಭಾಗದಲ್ಲಿ ಮ್ಯಾರಥಾನ್ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರು ರಥಬೀದಿಯಿಂದ ಆರಂಂಭಗೊಂಡ ಮ್ಯಾರಥಾನ್ ಮುಖ್ಯರಸ್ತೆಯಾಗಿ ದರ್ಬೆ, ವಿಶಾಲ್ ಮಾರ್ಟ್ ಬಳಿಯಿಂದ ಯುಟರ್ನ್ ಹೊಡೆದು ಮತ್ತೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಗೆ ಒಟ್ಟು ೫ ಕಿ.ಮೀ ಮ್ಯಾರಥಾನ್ ಯಶಸ್ವಿಯಾಗಿ ನಡೆಯಿತು. ನಾಲ್ಕು ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ೫೦ ವರ್ಷದಿಂದ ಮೇಲ್ಪಟ್ಟ ವಿಭಾಗದಲ್ಲಿ ಲೊಕೇಶ್(ಪ್ರ), ಪ್ರಮೋದ್ ರೈ(ದ್ವಿ), ಮಂಜುನಾಥ್ ವೈ ಕೆ(ತೃ), ಮಹಿಳೆಯ ವಿಭಾಗದಲ್ಲಿ ದಮಯಂತಿ (ಪ್ರ), ಬಿ.ಎಲ್ ಮಂಜುಳಾ(ದ್ವಿ), ಸುಭದ್ರ(ತೃ), ೧೯ರಿಂದ ೩೫ ವಯೋಮಾನದ ಮಹಿಳಾ ವಿಭಾಗದಲ್ಲಿ ಆಕೃತಿ(ಪ್ರ), ರಶ್ಮಿತಾ(ದ್ವಿ), ತೇಜಶ್ವಿ(ತೃ), ಪುರುಷರ ವಿಭಾಗದಲ್ಲಿ ವಿಘ್ನೇಶ್ವರ ಸುರೇಶ್(ಪ್ರ), ವಿಶ್ವ ಎಂ (ದ್ವಿ), ವಿಜಯಶ್ರೀಹರಿ(ತೃ), ೩೬ ರಿಂದ ೫೦ ವರ್ಷದ ವಯೋಮಾನದ ಪುರುಷರ ವಿಭಾಗದಲ್ಲಿ ವಿನಯ ಕುಮಾರ್ (ಪ್ರ), ಜಯರಮ್ ಪಿ.ಪಿ,(ದ್ವಿ), ಬಾಲಕೃಷ್ಣ ಗೌಡ(ತೃ), ಮಹಿಳಾ ವಿಭಾಗದಲ್ಲಿ ಪ್ರಮೀಳಾ ಕೆ(ಪ್ರ), ಪುಷ್ಪಾವತಿ(ದ್ವಿ), ದಿವ್ಯಾ ಎಂ(ತೃ), ೧೮ ವರ್ಷದ ವಯೋಮಾನದ ಹುಡುಗರ ವಿಭಾಗದಲ್ಲಿ ದಯಾನಂದ ಗೌಡ(ಪ್ರ), ಕೃಪಾಲ್ ಕೆ (ದ್ವಿ), ಸಾಯಿ ಕೀರ್ತನ ಕೆ(ತೃ), ಹುಡುಗಿಯರ ವಿಭಾಗದಲ್ಲಿ ಮೋಕ್ಷಾ ಪಿ(ಪ್ರ), ನಿಶಾ ಜಿ ಎಸ್ (ದ್ವಿ), ಪ್ರಮೀಳಾ(ತೃ) ಸ್ಥಾನ ಪಡೆದು ಕೊಂಡು ಪದಕ ಮತ್ತು ಪ್ರಮಾಣ ಪತ್ರ ಸ್ವೀಕರಿಸಿದರು. ಅನಿಲ್ ಮುಂಡೋಡಿ ಮ್ಯಾರಥಾನ್ ಓಟದ ಕಾರ್ಯಕ್ರಮ ನಿರ್ವಹಿಸಿದರು.ವಿ.ಜೆ.ವಿಕ್ಯಾತ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾಗಿರುವ ಎವರೆಸ್ಟ್ ರೋಡ್ರಿಗ್ರಸ್, ನರೇಶ್ ಲೋಬೊ, ದಾಮೋದರ್, ಪ್ರವೀಣ್ ಪಾಪೆಮಜಲು, ರಾಜೆಶ್ ಪಿಡಿ, ಅಶ್ರಫ್, ಪ್ರಕಾಶ್ ಡಿಸೋಜ, ಪ್ರಮೀಳಾ, ಅಜಿತ್ ತೀರ್ಪುಗಾರಾಗಿ ಸಹಕರಿಸಿದರು.
--