23ರಂದು ಶಿರಸಿಯಲ್ಲಿ ಗುಣಮಟ್ಟದ ಅಡಕೆ ಕಾರ್ಯಾಗಾರ

| Published : Nov 13 2024, 12:51 AM IST

ಸಾರಾಂಶ

ಸಭಾ ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಎಚ್.ಎಸ್. ಮಂಜಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಅಡಿಕೆ ಮತ್ತು ಸಾಂಬಾರ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ವಿ. ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಲಿದ್ದಾರೆ.

ಶಿರಸಿ: ಉತ್ಪಾದನೆಯಿಂದ ಬಳಕೆಯವರೆಗೆ ಗುಣಮಟ್ಟದ ಅಡಕೆ ಕಾರ್ಯಾಗಾರವನ್ನು ನಗರದ ಕಡವೆ ಶ್ರೀಪಾದ ಹೆಗಡೆ ಕಲ್ಯಾಣ ಮಂಟಪದಲ್ಲಿ ನ. ೨೩ರಿಂದ ಬೆಳಗ್ಗೆ ೧೦ ಗಂಟೆಯಿಂದ ಆಯೋಜಿಸಲಾಗಿದೆ ಎಂದು ಉತ್ತರಕನ್ನಡ ಜಿಲ್ಲಾ ಅಡಿಕೆ ಮತ್ತು ಸಾಂಬಾರ ಬೆಳೆಗಾರರ ಸಂಘದ ಕಾರ್ಯದರ್ಶಿ ಗಣೇಶ ಭಟ್ಟ ಉಪ್ಪೋಣಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಮಾತನಾಡಿ, ಜಿಲ್ಲೆಯ ಬೆಳೆಗಾರರು, ಸಹಕಾರಿ ಧುರೀಣರು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಾಗಾರವನ್ನು ಉತ್ತರಕನ್ನಡ ಅಡಿಕೆ ಮತ್ತು ಸಾಂಬಾರ ಬೆಳೆಗಾರರ ಸಂಘ, ಶಿರಸಿ ತಾಲೂಕು ಅಡಿಕೆ ಬೇಸಾಯಗಾರರ ಸಂಘ ಹಾಗೂ ಶಿರಸಿ ತೋಟಗಾರಿಕಾ ಸಂಘದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೯.೩೦ರಿಂದ ನೋಂದಣಿ ಪ್ರಾರಂಭಗೊಳ್ಳಲಿದ್ದು, ೧೦ ಗಂಟೆಗೆ ಸಭಾ ಕಾರ್ಯಕ್ರಮವನ್ನು ಹಿರಿಯ ಸಹಕಾರಿ ಎಚ್.ಎಸ್. ಮಂಜಪ್ಪ ಉದ್ಘಾಟಿಸಲಿದ್ದು, ಜಿಲ್ಲಾ ಅಡಿಕೆ ಮತ್ತು ಸಾಂಬಾರ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ವಿ. ಹೆಗಡೆ ಹುಳಗೋಳ ಅಧ್ಯಕ್ಷತೆ ವಹಿಸಲಿದ್ದಾರೆ.

ಅತಿಥಿಗಳಾಗಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾಸರಗೋಡನ ಸಿಪಿಸಿಆರ್‌ಐ ನಿರ್ದೇಶಕ ಡಾ. ಬಾಲಚಂದ್ರ ಹೆಬ್ಬಾರ್, ಶಿವಮೊಗ್ಗದ ಕೃಷಿ, ತೋಟಗಾರಿಕಾ ಅರಣ್ಯ ಮಹಾವಿದ್ಯಾಲಯದ ಉಪಕುಲಪತಿ ಡಾ. ಆರ್.ಸಿ. ಜಗದೀಶ, ಮಂಗಳೂರು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ ಕೊಡ್ಗಿ, ಶಿವಮೊಗ್ಗದ ಕರ್ನಾಟಕ ರಾಜ್ಯ ಅಡಿಕೆ ಮಹಾಮಂಡಳದ ಅಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ ೧೧.೩೦ರಿಂದ ಬೆಳೆಗಾರರ ಹಂತದಲ್ಲಿ ಆರೋಗ್ಯಕರ ಅಡಕೆ ಸಂಸ್ಕರಣೆ ವಿಷಯದ ಕುರಿತು ಗೋಷ್ಠಿ ನಡೆಯಲಿದ್ದು, ಉಪಕುಲಪತಿ ಡಾ. ಆರ್.ಸಿ. ಜಗದೀಶ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಗತಿಪರ ಕೃಷಿಕ ಭಾರ್ಗವ ಹೆಗಡೆ ಶೀಗೆಹಳ್ಳಿ ವಿಷಯ ಮಂಡನೆ ಮಾಡಲಿದ್ದಾರೆ. ಮಧ್ಯಾಹ್ನ ೧೨ ಗಂಟೆಯಿಂದ ನಡೆಯುವ ಮಾರುಕಟ್ಟೆ ಹಂತದಲ್ಲಿ ಅಡಿಕೆ ಗುಣಮಟ್ಟ ವಿಷಯದ ಗೋಷ್ಠಿಯಲ್ಲಿ ಬಾಗಲಕೋಟೆ ತೋಗಾರಿಕಾ ವಿಶ್ವವಿದ್ಯಾಲಯದ ಡೀನ್ ಡಾ. ಲಕ್ಷ್ಮೀನಾರಾಯಣ ಹೆಗಡೆ ಅಧ್ಯಕ್ಷತೆ ವಹಿಸುವರು ಎಂದರು.

ಕಾರ್ಯಾಗಾರದ ನಂತರ ಸಮಾಲೋಚನೆ ನಡೆಯಲಿದ್ದು, ಇದರಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ವಿ.ಎನ್.ಭಟ್ಟ ಅಳ್ಳಂಕಿ, ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟೀಸರ, ಮ್ಯಾಮ್ಕೋಸ್ ಅಧ್ಯಕ್ಷ ಮಹೇಶ ಹುಲಕುಳಿ, ಯಲ್ಲಾಪುರ ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಸಿದ್ದಾಪುರ ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಡಗೋಡ, ಹೊನ್ನಾವರ ಟಿಎಂಎಸ್ ಅಧ್ಯಕ್ಷ ಶಂಭು ಬೈಲಾರ, ಸಾಗರ ಆಪ್ಸಕೋಸ ನಿರ್ದೇಶಕ ಸೂರ್ಯನಾರಾಯಣ ಖಂಡಿಕಾ ಪಾಲ್ಗೊಳ್ಳಲಿದ್ದಾರೆ.

ಸಂಜೆ ೪.೩೦ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕರಾದ ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ ಉಪಸ್ಥಿತರಿರಲಿದ್ದಾರೆ. ಜಿಲ್ಲಾ ಸಾವಯವ ಕೃಷಿಕರ ಒಕ್ಕೂಟದ ಅಧ್ಯಕ್ಷ ವಿಶ್ವೇಶ್ವರ ಭಟ್ಟ ಕೋಟೆಮನೆ ನಿರ್ಣಯಗಳನ್ನು ಮಂಡಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಅಡಿಕೆ ಮತ್ತು ಸಂಬಾರ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ವಿ. ಹೆಗಡೆ, ಶಿರಸಿ ತೋಟಗಾರಿಕಾ ಸಂಘದ ಅಧ್ಯಕ್ಷ ನಾರಾಯಣ ಹೆಗಡೆ ಗಡಿಕೈ, ಆರ್. ಹೆಗಡೆ ಬೆಳ್ಳೆಕೇರಿ, ಈಶಣ್ಣ, ಜಿ.ಡಿ. ಹೆಗಡೆ ಒಣಿಕೇರಿ, ವಿಶ್ವೇಶ್ವರ ಭಟ್ಟ,ಗಣೇಶ ಭಟ್ಟ, ಮಾಬ್ಲೇಶ್ವರ ಹೆಗಡೆ, ಲೋಕೇಶ ಹೆಗಡೆ ಹುಲೇಮಳಗಿ, ಭಾರ್ಗವ ಹೆಗಡೆ, ಎಂ.ಎಸ್. ಭಟ್ಟ, ಪ್ರಸಾದ ಶರ್ಮಾ ಸಾಲ್ಕಣಿ ಮತ್ತಿತರರು ಇದ್ದರು.