ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಸ್ವಚ್ಚಗೊಳಿಸಿದ ಮನುವಾದಿಗಳನ್ನು ಬಂಧಿಸಬೇಕು.
ಕನ್ನಡಪ್ರಭ ವಾರ್ತೆ ತುಮಕೂರುಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿದ ವೇದಿಕೆಯನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಸ್ವಚ್ಚಗೊಳಿಸಿದ ಮನುವಾದಿಗಳನ್ನು ಬಂಧಿಸಬೇಕು. ಇದನ್ನು ಪ್ರಶ್ನಿಸಿದ ಸಂಸದ ರಾಹುಲ್ಗಾಂಧಿ ಅವರ ಮೇಲೆ ಹಾಕಿರುವ ಪ್ರಕರಣ ರದ್ದಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಟೌನ್ಹಾಲ್ ಮುಂಭಾಗದಲ್ಲಿ ಬಾಯಿಗೆ ಕಪ್ಪು ಬಟ್ಟೆಕಟ್ಟಿಕೊಂಡು ವಿನೂತನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್, ದೇಶದಲ್ಲಿ ಅಸ್ಪೃಷ್ಯತೆ ಆಚರಣೆಯನ್ನು ರದ್ದುಗೊಳಿಸಿದ್ದರೂ ಉತ್ತರಾಖಂಡದಲ್ಲಿ ನಡೆದಿರುವ ಈ ಕೃತ್ಯ ಸಂವಿಧಾನ ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದೆ. ದೇಶದಲ್ಲಿತುಂಬಿ ತುಳುಕುತ್ತಿರುವ ದ್ವೇಷದ ರಾಜಕಾರಣ, ಒಡೆದು ಆಳುವ ನೀತಿಯನ್ನು ವಿರೋಧಿಸಿದ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ವಿರುದ್ಧ ಎಫ್.ಐ.ಆರ್.ದಾಖಲಿಸುವ ಮೂಲಕ ವಿರೋಧ ಪಕ್ಷಗಳ ಧ್ವನಿಯನ್ನು ಅಡಗಿಸುವ ಕೃತ್ಯಕ್ಕೆ ಬಿಜೆಪಿ ಕೈ ಹಾಕಿದೆ. ಇದು ಖಂಡನೀಯ. ಉತ್ತರಖಂಡ ಸರಕಾರ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಮೇಲೆ ಹಾಕಿರುವ ಎಫ್.ಐ.ಆರ್.ರದ್ದುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಿದೆ ಎಂದು ಇಕ್ಬಾಲ್ ಅಹಮದ್ ಎಚ್ಚರಿಸಿದರು.ರಾಜ್ಯದ ಮಂತ್ರಿಯಾಗಿ ಘನತೆಯ ಜೀವನ ನಡೆಸುತ್ತಿರುವ ಲೋಕೋಪಯೋಗಿ ಸಚಿವರ ಸರ್ಕಾರಿ ನಿವಾಸದ ಮೇಲೆ ದಾಳಿ ಮಾಡಿ, ಅವರ ಬಗ್ಗೆ ಜನಸಾಮಾನ್ಯರಲ್ಲಿ ಕೀಳು ಭಾವನೆ ಬರುವಂತೆ ಕೇಂದ್ರ ಸರಕಾರ ನಡೆದುಕೊಂಡಿದೆ. ಯಾವುದೇ ನೊಟೀಸ್ ನೀಡದೆ ಸರ್ಕಾರಿ ಕಚೇರಿ ತಪಾಸಣೆ ಮಾಡುವ ಮೂಲಕ ಇಡಿ ಕೇಂದ್ರ ಸರಕಾರದ ಕೈಗೊಂಬೆಯಂತೆ ನಡೆದುಕೊಂಡಿದೆ. ಇಡಿ, ಸಿಬಿಐ, ಐಟಿ ಯಂತಹ ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿ ಪಕ್ಷದ ವಿಭಾಗಗಳಂತೆ ಮಾಡಿ, ವಿರೋಧಿಗಳ ವಿರುದ್ದ ಸೇಡಿನ ರಾಜಕಾರಣ ಮಾಡುತ್ತಿದೆ. ಇದೇ ರೀತಿಯ ವರ್ತನೆ ಮುಂದುವರೆದರೆಉಗ್ರ ಹೋರಾಟ ನಡೆಸಲಾಗುವುದು ಎಂದರು. ಗ್ರಾಮಾಂತರ ಮುಖಂಡರಾದ ಷಣ್ಮುಗಪ್ಪ ಮಾತನಾಡಿ, ಕೇಂದ್ರ ಸರಕಾರ ಚುನಾವಣೆ ವೇಳೆ ಮಾತ್ರ ರಾಜಕಾರಣ ಮಾಡುತ್ತಿಲ್ಲ. ಚುನಾವಣೆ ಮುಗಿದ ಮೇಲೂ ತನ್ನ ದ್ವೇಷದ ರಾಜ ಕಾರಣ ಮುಂದುವರಿಸಿದೆ. ವಿರೋಧ ಪಕ್ಷದ ನಾಯಕರ ಮೇಲೆ ಐ.ಟಿ, ಇಡಿ ದಾಳಿಯ ಮೂಲಕ ಅವರ ಧ್ವನಿ ಅಡಗಿಸುವ ಕೆಲಸ ಮಾಡುತ್ತಿದೆ.ಅಲ್ಲದೆ ಅಸ್ಪೃಷ್ಯತೆ ಆಚರಣೆ ಕಾನೂನು ಬಾಹಿರವೆಂದು ತಿಳಿಸಿದ್ದರೂ, ಅದನ್ನು ಆಚರಿಸಿದ ಮನುವಾದಿಗಳ ವಿರುದ್ದಕ್ರಮ ಕೈಗೊಳ್ಳದೆ, ಅದನ್ನು ಪ್ರಶ್ನಿಸಿದ ರಾಹುಲ್ಗಾಂಧಿ ವಿರುದ್ಧ ಎಫ್.ಐ.ಆರ್.ದಾಖಲಿಸುವ ಮೂಲಕ ಅಸ್ಪೃಷ್ಯತೆ ಅಧಿಕೃತ ಎಂಬ ಸಂದೇಶವನ್ನು ನೀಡಲು ಹೊರಟಿದೆ. ಬಿಜೆಪಿಯ ಈ ವರ್ತನೆ ಅವರಿಗೆ ಮುಳುವಾಗಲಿದೆ. ಮುಂದಿನ ಚುನಾವಣೆಗಳಲ್ಲಿ ಜನರೇ ಬುದ್ದಿ ಕಲಿಸಲಿದ್ದಾರೆ ಎಂದರು. ಮುಖಂಡರಾದ ರೇವಣ್ಣ ಸಿದ್ದಯ್ಯ,ಗುರುಪ್ರಸಾದ್, ಎಚ್.ಸಿ.ಹನುಮಂತಯ್ಯ, ಶೆಟ್ಟಿಹಳ್ಳಿ ಭಾಗ್ಯಮ್ಮ, ಸೌಭಾಗ್ಯಮ್ಮ ಅವರುಗಳು ಪ್ರತಿಭಟನೆಯಲ್ಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ನಯಾಜ್, ಫೈಯಾಜ್, ಇನಾಯತ್, ಜಿಯಾವುಲ್ಲಾ, ಇರ್ಫಾನ್, ಗುರುಪ್ರಸಾದ್,ಸುರೇಶ್, ವಿಜಯಗೌಡ,ಜೆಪ್ರುಲ್ಲಾ, ಅದೀಲ್, ಸೇವಾದಳದ ಅಧ್ಯಕ್ಷ ಬೈಲಸ್ವಾಮಿ, ಅಮ್ಜಾದ್ವುಲ್ಲಾ, ಅಂಬರೀಷ್, ಕಾರ್ಮಿಕ್ಘಟಕದ ಸೈಯದ್ ದಾದಾಪೀರ್,ಭಾನುಪ್ರಕಾಶ್,ಗುರುಪ್ರಸಾದ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.