ಶಿವಮೊಗ್ಗ: ಪರೀಕ್ಷೆ ಸಮಯದಲ್ಲಿ ಪತ್ರಿಕೆ ಸೋರಿಕೆ ಅನ್ನೋದು ಬಹಳ ವರ್ಷಗಳ ಶಾಪ. ಅದನ್ನು ಶಾಶ್ವತವಾಗಿ ತಡೆಯೋದು ಪ್ರಧಾನಿ ಮೋದಿಯವರಿಂದ ಮಾತ್ರ ಸಾಧ್ಯವಿದೆ. ಈ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದು ಸಂಸದ ಬಿ.ವೈ‌. ರಾಘವೇಂದ್ರ ಹೇಳಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಕದ ಮನೆಯಲ್ಲಿ ಗಂಡು ಮಗು ಹುಟ್ಟಿತು ಅಂತ ಮೈಸೂರು ಪಾಕ್, ಜಿಲೇಬಿ ತಿನ್ನೋ ಜನರನ್ನು ನಾವು ನೋಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದ್ರೂ ಪಟಾಕಿ ಹೊಡೆಯಲಿ. ಯಾರು ಬೇಕಾದ್ರೂ ಘೋಷಣೆ ಕೂಗಲಿ. ಗೌರವಾನ್ವಿತ ಪ್ರಧಾನಿ ಮೋದಿ ಅವರ ಉದ್ದೇಶವನ್ನು ಪ್ರಶ್ನೆ ಮಾಡಲು ಸಾಧ್ಯವಿಲ್ಲ. ಅವರು ಉದ್ದೇಶ ಬಹಳ ಸ್ಪಷ್ಟವಾಗಿ ಇದೆ. ಯುವಕರಿಗೆ ಮನ್ನಣೆ ಕೊಡೋ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆ ಇಡುತ್ತದೆ ಎಂದು ತಿರುಗೇಟು ನೀಡಿದರು. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. ನೀಟ್ ವಿಚಾರಕ್ಕೆ ಸಿಜೆಪಿ ನೇತೃತ್ವದಲ್ಲಿ ಹೋರಾಟ ನಡೆಯಿತು. ಬೇರೆ ಶಕ್ತಿಗಳು ಕೈ ಜೋಡಿಸುವ ಕೆಲಸವೂ ಆಯ್ತು. ಯುವಕರು, ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕು. ಮಕ್ಕಳನ್ನು ಬಳಸಿ ರಾಜಕೀಯ ಮಾಡುವ ತಂಡ ದೇಶದಲ್ಲಿದೆ.‌ ಅವರಿಗೆ ಮಕ್ಕಳು ಆಹಾರ ಆಗಬಾರದು ಎಂದು ರಾಜೀನಾಮೆ ನೀಡಿದ್ದೇನೆ ಎಂದು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವ ವೇಳೆ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.

ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಮೇ ನಲ್ಲಿ ಲೀಕ್ ಔಟ್ ಆಗಿತ್ತು. ಆನಂತರ ಸಾಕಷ್ಟು ಕ್ರಮ ಕೇಂದ್ರದಿಂದ ಆಗಿದೆ. ಶಾಶ್ವತ ಪರಿಹಾರ ಸಿಗಬೇಕು ಅನ್ನೋದು ಯುವಕರ ಅಪೇಕ್ಷೆ. ಸ್ವತಃ ಜೆ.ಪಿ‌.ನಡ್ಡಾ ಹಾಗೂ ಸಿಂಗ್ ಅವರು ಆಶ್ವಾಸನೆ ನೀಡಿದ್ದಾರೆ. ಪ್ರಹ್ಲಾದ್ ಜೋಶಿಯವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿದ್ದಾರೆ. 5 ನೇ ಬಾರಿ ಸಂಸದರಾಗಿ‌ ಎಲ್ಲಾ ಕೆಲಸ ಯಶಸ್ವಿಯಾಗಿ ಮಾಡಿದ್ದಾರೆ. ಓರ್ವ ಸಚಿವರಾಗಿ ಹೆಚ್ಚಿವರಿ ಹೊಣೆ ಸಿಕ್ಕಿದೆ. ಕರ್ನಾಟಕಕ್ಕೆ ಸಿಕ್ಕ ಗೌರವ ಎಂದರು.

-------------------

ಬಾಕ್ಸ್‌...ನೂರಾರು ಮಂದಿ ಮನ್ ಕಿ ಬಾತ್ ವೀಕ್ಷಣೆ


ಪ್ರಧಾನ ಮೋದಿಯವರ 136ನೇ ಮನ್ ಕಿ ಬಾತ್ ಕಾರ್ಯಕ್ರಮ ಹಿನ್ನೆಲೆ. ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ನೂರಾರು ಮಂದಿ ಮನ್ ಕಿ ಬಾತ್ ವೀಕ್ಷಿಸಿದರು. ಆಟೋ ಚಾಲಕರು, ಮಹಿಳೆಯರು, ಕಾರ್ಮಿಕರು ಹಾಗೂ ಬಿಜೆಪಿ ಕಾರ್ಯಕರ್ತರಿಂದ ಮನ್ ಕಿ ಬಾತ್ ವೀಕ್ಷಣೆ ಮಾಡಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.

ಈ ಸಂದರ್ಭ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, 136ನೇ ಮನ್ ಕಿ ಬಾತ್ ಇಂದು ಪ್ರಸಾರ ಆಗ್ತಿದೆ. ಅದರಲ್ಲಿ ಶಿವಮೊಗ್ಗವನ್ನು ಕೂಡ ಲೈವ್ ಆಗಿ ತಗೋತ್ತಿದ್ದಾರೆ. ಅದು ನಮ್ಮ ಹೆಮ್ಮೆ. ಮನ್‌ ಕಿ ಬಾತ್‌ ಮೂಲಕ ಅಂತರಿಕ್ಷ, ಕೃಷಿ, ಕಲೆ, ಸಾಹಿತ್ಯ ಎಲ್ಲವನ್ನ ಪ್ರಧಾನಿ ಹಂಚಿಕೊಳ್ಳುತ್ತಿದ್ದಾರೆ. ದೇಶದಲ್ಲಿನ ಬದಲಾವಣೆ ತಂದ ವಿಷಯಗಳನ್ನು ಪ್ರಸ್ತಾಪ ಮಾಡುತ್ತಿದ್ದಾರೆ. ಯುದ್ಧ, ಕೋವಿಡ್ ಎಂತಾ ಸವಾಲು ಬಂದರೂ ಮನ್ ಕಿ ಬಾತ್ ನಿಂತಿಲ್ಲ. ಇದು ವಿಶ್ವದಲ್ಲೇ ದಾಖಲೆ. ಶಿವಮೊಗ್ಗ ಜನರ ಪರವಾಗಿ ನಾನು ಪ್ರಧಾನಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

-------------------

ಪೊಟೋ: 26ಎಸ್‌ಎಂಜಿಕೆಪಿ02

ಶಿವಮೊಗ್ಗ ನಗರದ ದೈವಜ್ಞ ಕಲ್ಯಾಣ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಧಾನ ಮೋದಿಯವರ 136ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ , ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಧನಂಜಯ ಸರ್ಜಿ, ಡಿ.ಎಸ್.ಅರುಣ್ ಸೇರಿದಂತೆ ಬಿಜೆಪಿ ಮುಖಂಡರು ಭಾಗಿಯಾಗಿದ್ದರು.