ಸಾರಾಂಶ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿ ಕೆಲ ತಿಂಗಳು ಸರಿದಿದ್ದು, ಈ ನಡುವೆ ತಾಂತ್ರಿಕ ಸಮಸ್ಯೆಯಿಂದ ವಿಮಾನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅವರು ಗುರುವಾರ ನಾಗರಿಕ ವಿಮಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರನ್ನು ಭೇಟಿ ಮಾಡಿ ಒತ್ತಾಯಿಸಿದರು.ಈ ವಿಮಾನ ನಿಲ್ದಾಣವನ್ನು ಫೆಬ್ರವರಿಯಲ್ಲಿ ಪ್ರಧಾನಿ ಉದ್ಘಾಟಿಸಿದ್ದಾರೆ. ಸಧ್ಯಕ್ಕೆ ಬೆಂಗಳೂರು- ಶಿವಮೊಗ್ಗ- ಬೆಂಗಳೂರು ನಡುವೆ ಇಂಡಿಗೋ ವಿಮಾನವು ಸಂಚರಿಸುತ್ತಿದೆ. ಹಾಗೆಯೇ, ಹೈದರಾಬಾದ್- ಶಿವಮೊಗ್ಗ, ತಿರುಪತಿ- ಶಿವಮೊಗ್ಗ, ಗೋವಾ- ಶಿವಮೊಗ್ಗ ಈ ಮಾರ್ಗಗಳಲ್ಲಿ ಸ್ಟಾರ್ ಏರ್ ಲೈನ್ಸ್ ಕಂಪನಿ ವಿಮಾನಗಳು ಸಹ ವಾರಕ್ಕೆ ನಾಲ್ಕು ದಿನ ಸಂಚರಿಸುತ್ತವೆ. ವಿಮಾನ ನಿಲ್ದಾಣದಲ್ಲಿ ಸಂಚಾರ ಸಮಯದಲ್ಲಿ ಗೋಚರತೆ (Visibility) ಸಮಸ್ಯೆಯಿಂದಾಗಿ ಕೆಲವೊಮ್ಮೆ ವಿಮಾನಗಳು ಹಾರಲು ಹಾಗೂ ಇಳಿಯಲು ತೊಂದರೆಯಾಗಿ ವಿಳಂಬವಾಗುತ್ತಿದೆ. ಕೆಲವೊಮ್ಮೆ ವಿಮಾನ ಸಂಚಾರ ರದ್ದಾಗುವ ಸಮಸ್ಯೆಗಳೂ ಎದುರಾಗುತ್ತಿದೆ. ಈ ಸಮಸ್ಯೆ ಬಗೆಹರಿಸಲು ಅಗತ್ಯವಿರುವ ಉಪಕರಣಗಳನ್ನು ಕೂಡಲೇ ಒದಗಿಸುವಂತೆ ಮನವಿ ಮಾಡಿದರು.
ಅಲ್ಲದೇ, ವಿಮಾನ ನಿಲ್ದಾಣದಲ್ಲಿ ಉಪಾಹಾರ ಗೃಹಗಳನ್ನು ಕೂಡಲೇ ತೆರೆದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ಮಕ್ಕಳಿಗೆ ಆಹಾರದ ಕೊರತೆ ನೀಗಿಸಿದಂತಾಗುತ್ತದೆ ಎಂದು ಸಂಸದರು ವಿವರಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವರು, ತಕ್ಷಣವೇ ಕ್ರಮ ಕೆಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧ್ಯಕ್ಷರು ಹಾಗೂ ನಾಗರಿಕ ವಿಮಾನಯಾನ ಮಂತ್ರಾಲಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.
- - - -ಫೋಟೋ:ಬಿ.ವೈ.ರಾಘವೇಂದ್ರ, ಸಂಸದ