ಕನ್ನಡಪ್ರಭವಾರ್ತೆ, ಹಾಸನ
''''ಮಹಿಳೆಯರ ಆರೋಗ್ಯವೇ ಕುಟುಂಬದ ಸೌಭಾಗ್ಯ'''' ಎಂಬ ಧ್ಯೇಯದೊಂದಿಗೆ ಹೇಮಂತ್ ಕುಮಾರ್ ಅವರು ತಮ್ಮ ತಾಯಿ ರಾಧಮ್ಮ ಅವರ ಸ್ಮರಣಾರ್ಥ ಆಲೂರು ತಾಲೂಕಿನ ರಾಯರಕೊಪ್ಪಲಿನಲ್ಲಿ ಇತ್ತೀಚೆಗೆ ''''ಆರೋಗ್ಯ ರಕ್ಷಾ ಸದಸ್ಯತ್ವ'''' ಗುರುತಿನ ಕಾರ್ಡ್ ವಿತರಿಸುವ ಮೂಲಕ ಮಾದರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಲೆನಾಡು ನರ್ಸಿಂಗ್ ಹೋಮ್ನ ಸ್ತ್ರೀರೋಗ ತಜ್ಞರಾದ ಡಾ. ಸಾವಿತ್ರಿ, ಗ್ರಾಮೀಣ ಭಾಗದ ಮಹಿಳೆಯರಲ್ಲಿ ಕ್ಯಾನ್ಸರ್ ಮತ್ತು ಹಾರ್ಮೋನ್ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುತ್ತಿರುವ ರಾಧಮ್ಮ ಜನಸ್ಪಂದನ ಸಮಿತಿಯ ಕಾರ್ಯ ಶ್ಲಾಘನೀಯ. ಇಂತಹ ಸಮಾಜಮುಖಿ ಕಾರ್ಯಗಳು ಮಹಿಳೆಯರ ಜೀವ ಉಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಅಭಿಯಾನಕ್ಕೆ ತುಂಬು ಹೃದಯದ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಲ್ತ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಗರ್ಭಕಂಠದ ಕ್ಯಾನ್ಸರ್ ಪತ್ತೆಗೆ ಉಚಿತ ಎಚ್ಪಿವಿ ಡಿಎನ್ಎ (HPV DNA) ಪರೀಕ್ಷೆ ಹಾಗೂ ಸ್ತನ ಕ್ಯಾನ್ಸರ್ ಸ್ಕ್ಯಾನಿಂಗ್. ಹಾರ್ಮೋನ್ ವ್ಯತ್ಯಾಸ ಮತ್ತು ರಕ್ತಹೀನತೆ ಪತ್ತೆಗಾಗಿ ಉಚಿತ ಥೈರಾಯ್ಡ್ ಮತ್ತು ಹಿಮೋಗ್ಲೋಬಿನ್ ಪರೀಕ್ಷೆ ಮಾಡಲಾಗುವುದು ಎಂದರು. ರಾಧಮ್ಮ ಜನಸ್ಪಂದನ ಸಂಸ್ಥೆಯ ಸಂಸ್ಥಾಪಕ ಹೇಮಂತ್ ಕುಮಾರ್ ಮಾತನಾಡಿ, ನನ್ನ ತಾಯಿ ಕಲಿಸಿದ ಸಂಸ್ಕಾರವೇ ಈ ಸೇವೆಗೆ ಮೂಲ ಪ್ರೇರಣೆ. ಮಹಿಳೆ ಆರೋಗ್ಯವಾಗಿದ್ದರೆ ಇಡೀ ಕುಟುಂಬವೇ ಆರೋಗ್ಯವಾಗಿರುತ್ತದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ಮಹಿಳೆಯರು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣಾ ರಾಜ್ಯ ಸಂಯೋಜಕರಾದ ಜಯರಾಮ ಬೊಳ್ಳಾಜೆ, ಕಾರ್ಗೋಡು ಗ್ರಾ.ಪಂ. ಪಿಡಿಓ ಸಣ್ಣಪ್ಪ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನಿಲ್, ಬಿಜೆಪಿ ಮುಖಂಡ ಪೂವಯ್ಯ, ಗ್ರಾ.ಪಂ. ಸದಸ್ಯ ರವಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.