ಸಾರಾಂಶ
ಶಿರಾ : ಪ್ಲಾಸ್ಟಿಕ್ ಬ್ಯಾಗ್ ಶೇಖರಿಸಿದ್ದ ಗೋಡಾನ್ ಮೇಲೆ ಪೌರಾಯುಕ್ತ ರುದ್ರೇಶ್ ದಾಳಿ ನಡೆಸಿ ಸುಮಾರು 2 ಲಕ್ಷ ರು. ಮೌಲ್ಯದ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಾರೆ.
ಪೌರಾಯುಕ್ತ ರುದ್ರೇಶ್ ಮಾತನಾಡಿ, ಸುಮಾರು 5 ಕ್ವಿಂಟಾಲ್ ಗಿಂತ ಹೆಚ್ಚು ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಎಲ್ಲಾ ಪ್ಲಾಸ್ಟಿಕ್ ವಸ್ತುಗಳನ್ನು ನಾಶಪಡಿಸಲಾಗುವುದು. ಪ್ಲಾಸ್ಟಿಕ್ ವೇಸ್ಟ್ ಮ್ಯಾನೇಜ್ಮೆಂಟ್ ರೂಲ್ಸ್ 2016ರ ಪ್ರಕಾರ ಪ್ಲಾಸ್ಟಿಕ್ ಉತ್ಪಾದಿಸುವುದು ಹಾಗೂ ಮಾರಾಟ ಮಾಡುವುದು ಅಪರಾಧವಾಗಿದೆ. ಅಂಗಡಿಗಳ ಮಾಲೀಕರು ಯಾವುದೇ ಪ್ಲಾಸ್ಟಿಕ್ ಕೈಚೀಲಗಳನ್ನು ಮಾರಾಟ ಮಾಡಬಾರದು ಎಂದರು.
ಮಾರಾಟ ಮಾಡಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಂಡು ದಂಡ ವಿಧಿಸುತ್ತೇವೆ. ಪ್ಲಾಸ್ಟಿಕ್ ಕೈಚೀಲಗಳಿಗೆ ಪರ್ಯಾಯವಾಗಿ ಬೇರೆ ವಸ್ತುಗಳನ್ನು ತಯಾರು ಮಾಡುವವರು, ಸಂಘ ಸಂಸ್ಥೆಗಳು ಮುಂದೆ ಬಂದರೆ ಅವರಿಗೆ ನಗರಸಭೆ ವತಿಯಿಂದ ತರಬೇತಿ ನೀಡಿ ಬ್ಯಾಂಕ್ನಿಂದ ಸಾಲ ಕೊಡಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಪರಿಸರ ಅಭಿಯಂತರೆ ಪಲ್ಲವಿ, ಆರೋಗ್ಯ ನಿರೀಕ್ಷಕ ಮಾರೇಗೌಡ, ಜಗನ್ನಾಥ್ ಹಾಜರಿದ್ದರು.