ಕಾಗೇರಿ ಮನವಿಗೆ ರೈಲ್ವೆ ಸಚಿವರ ಸ್ಪಂದನೆ

| Published : Jun 26 2024, 12:39 AM IST

ಸಾರಾಂಶ

ಕಾಗೇರಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿ, ರೈಲಿನ ಅಗತ್ಯತೆಯನ್ನು ಮನದಟ್ಟು ಮಾಡಿದರು. ತಮ್ಮ ಮನವಿಗೆ ಸ್ಪಂದಿಸಿದ ಸಚಿವರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ಸಲ್ಲಿಸಿದ್ದಾರೆ.

ಶಿರಸಿ: ವಾರಕರಿ ಸಂಪ್ರದಾಯದವರು ಫಂಡರಾಪುರ ವಾರಿ ಆಚರಣೆ ಹಿನ್ನೆಲೆ ಫಂಡರಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆ ಯಶವಂತಪುರ- ಫಂಡರಾಪುರ ಎಕ್ಸ್‌ಪ್ರೆಸ್ ರೈಲನ್ನು (ಸಂಖ್ಯೆ-೧೬೫೪೧) ವಾರಕ್ಕೊಮ್ಮೆ ಬದಲಾಗಿ ಜೂ. ೨೫ರಿಂದ ಜು. ೩೦ರ ವರೆಗೆ ಪ್ರತಿನಿತ್ಯ ಸಂಚರಿಸುವಂತೆ ಮಾಡಬೇಕು ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ ಮನವಿಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಕ್ಷಣ ಸ್ಪಂದಿಸಿದ್ದಾರೆ.

ನವದೆಹಲಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಚಿವರನ್ನು ಭೇಟಿ ಮಾಡಿ ಈ ಕುರಿತು ಮನವಿ ಸಲ್ಲಿಸಿದರು. ಜೂ. ೨೫ರಿಂದ ಜು. ೩೦ರ ವರೆಗೆ ರೈಲು ಪ್ರತಿದಿನ ಚಲಿಸಿದರೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಆದ್ದರಿಂದ ಈ ಮನವಿಯನ್ನು ಪರಿಗಣಿಸಿ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನಿತ್ಯ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಅವರು ವಿನಂತಿಸಿದರು.

ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್, ಈ ಬಗ್ಗೆ ಕೂಡಲೆ ಅಧಿಕಾರಿಗಳ ಜತೆ ಮಾತನಾಡಿ, ಹುಬ್ಬಳ್ಳಿಯಿಂದ ಫಂಡರಾಪುರಕ್ಕೆ ಜೂ. ೨೮ ಹಾಗೂ ೨೯ರಂದು ವಿಶೇಷ ರೈಲ್ವೆ ಪ್ರಯಾಣಿಸಲಿದೆ ಎಂಬ ಭರವಸೆ ನೀಡಿ, ಅಧಿಕೃತ ಪ್ರಕಟಣೆ ಹೊರಡಿಸಿದರು.

ಈ ಮೊದಲು ನಿಟ್ಟೂರಿನ ರಮೇಶ್ ಎಸ್. ನಾರ್ವೇಕರ್ ಮತ್ತು ಖಾನಾಪುರದ ಶಾಂತಾರಾಮ ಗಂಗಾರಾಮ ಹೆಬ್ಬಾಳ್ಕರ್ ಅವರು, ಹುಬ್ಬಳ್ಳಿಯಿಂದ ಫಂಡರಾಪುರಕ್ಕೆ ರೈಲು ಸೇವೆಯ ಸಮಸ್ಯೆಯ ಕುರಿತು ವಾರಕರಿಯ ಸಂಪ್ರದಾಯದ ಜನರ ಪರವಾಗಿ ಕಾಗೇರಿಗೆ ಮನವಿ ಸಲ್ಲಿಸಿದ್ದರು.

ಕಾಗೇರಿ ಅವರು ಕೇಂದ್ರ ಸಚಿವರನ್ನು ಭೇಟಿಯಾಗಿ ಈ ಕುರಿತು ಮನವಿ ಮಾಡಿ, ರೈಲಿನ ಅಗತ್ಯತೆಯನ್ನು ಮನದಟ್ಟು ಮಾಡಿದರು. ತಮ್ಮ ಮನವಿಗೆ ಸ್ಪಂದಿಸಿದ ಸಚಿವರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ಸಲ್ಲಿಸಿದ್ದಾರೆ.