ಎರಡನೆಯ ದಿನವೂ ಮುಂದುವರಿದ ಮಳೆಯಾರ್ಭಟ

| Published : Oct 25 2025, 01:00 AM IST

ಸಾರಾಂಶ

ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಮಾರುಕಟ್ಟೆಯೊಳಗೆ ನೀರು ನುಗ್ಗಿ ಕೆಲಕಾಲ ವ್ಯಾಪಾರಿಗಳು ಪರದಾಡಿದರು. ಬಳಿಕ ವ್ಯಾಪಾರಸ್ಥರು ಸೇರಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ದಾರಿ ಮಾಡಿಕೊಟ್ಟ ಬಳಿಕ ಸಮಸ್ಯೆಗೆ ತಾತ್ಕಾಲಿಕವಾಗಿ ಮುಕ್ತಿ ದೊರೆಯಿತು.

ಹುಬ್ಬಳ್ಳಿ:

ಕಳೆದ ಕೆಲವು ದಿನಗಳಿಂದ ಬಿಡುವು ನೀಡಿದ್ದ ವರುಣ ಗುರುವಾರದಿಂದ ಮತ್ತೆ ಪ್ರತ್ಯಕ್ಷವಾಗಿದ್ದು, ಶುಕ್ರವಾರ ಆಗಾಗ ಮಳೆ ಜಿನುಗುತ್ತಲೇ ಇತ್ತು.

ಇಲ್ಲಿನ ಜನತಾ ಬಜಾರ್‌, ದುರ್ಗದಬೈಲ್, ದಾಜೀಬಾನ್ ಪೇಟೆ, ಬಟರ್‌ ಮಾರ್ಕೆಟ್, ಉಣಕಲ್ಲ, ಲ್ಯಾಮಿಂಗ್ಟನ್ ರಸ್ತೆ, ರೈಲು ನಿಲ್ದಾಣದ ಮುಂಭಾಗದಲ್ಲಿರುವ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿ ಕೆಲಕಾಲ ಮಳೆನೀರು ನಿಂತು ಪ್ರಯಾಣಿಕರು ಪರದಾಡುವಂತಾಯಿತು.

ಬೆಳಗ್ಗೆಯಿಂದ ಸಂಜೆಯ ವರೆಗೂ ಆಗಾಗ ತುಂತುರು ಮಳೆ ಮುಂದುವರಿಯಿತು. ಕೆಲವು ವೇಳೆ ರಭಸದ ಮಳೆ ಸುರಿದು ಆತಂಕ ಸೃಷ್ಟಿಸಿತು. ಇಲ್ಲಿನ ಲೋಕಪ್ಪನ ಹಕ್ಕಲ ಸೇರಿದಂತೆ ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಜನರನ್ನು ಹೈರಾಣಾಗಿಸಿತು.

ಇಲ್ಲಿನ ದುರ್ಗದ ಬೈಲ್, ದಾಜಿಬಾನ್‌ ಪೇಟೆ, ಶಾಹ ಬಜಾರ್‌, ಜನತಾ ಬಜಾರ್‌ನಲ್ಲಿ ಶುಕ್ರವಾರ ಬೆಳಗ್ಗೆ ಸುರಿದ ಮಳೆಯಿಂದಾಗಿ ಮಾರುಕಟ್ಟೆಯೊಳಗೆ ನೀರು ನುಗ್ಗಿ ಕೆಲಕಾಲ ವ್ಯಾಪಾರಿಗಳು ಪರದಾಡಿದರು. ಬಳಿಕ ವ್ಯಾಪಾರಸ್ಥರು ಸೇರಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ದಾರಿ ಮಾಡಿಕೊಟ್ಟ ಬಳಿಕ ಸಮಸ್ಯೆಗೆ ತಾತ್ಕಾಲಿಕವಾಗಿ ಮುಕ್ತಿ ದೊರೆಯಿತು.

ಕೆಲಕಾಲ ರಭಸ, ತುಂತುರು ಮಳೆಯಿಂದಾಗಿ ರಸ್ತೆ ಬದಿ ಇರಿಸಲಾಗಿದ್ದ ವ್ಯಾಪಾರಸ್ಥರು ಹಾಗೂ ಮಾರುಕಟ್ಟೆಗೆ ಆಗಮಿಸಿದ ಜನರು ಮಳೆಯಿಂದ ರಕ್ಷಣೆ ಪಡೆಯಲು ಅಕ್ಕಪಕ್ಕದ ಅಂಗಡಿಗಳ ಮೊರೆ ಹೋದರೆ, ವ್ಯಾಪಾರಸ್ಥರು ತಮ್ಮ ವಸ್ತುಗಳನ್ನು ಸುರಕ್ಷಿತವಾಗಿಡಲು ಹರಸಾಹಸ ಪಟ್ಟರು.