ಕೊಡಗಿನ ವಿವಿಧೆಡೆ ಮಳೆಯ ಸಿಂಚನ

| Published : Mar 13 2025, 12:46 AM IST

ಸಾರಾಂಶ

ಬಿಸಿಲಿನಿಂದ ಕಾವೇರಿದ್ದ ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಮಳೆಯ ಸಿಂಚನವಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಿಸಿಲಿನಿಂದ ಕಾವೇರಿದ್ದ ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಬುಧವಾರ ಮಳೆಯ ಸಿಂಚನವಾಗಿದೆ.

ಮಳೆಯ ಆಗಮನದಿಂದಾಗಿ ಬೆಳೆಗಾರರು ಸಂತಸ ವ್ಯಕ್ತಪಡಿಸಿದ್ದಾರೆ. ಮಾರ್ಚ್ ಆರಂಭದಲ್ಲಿ ಮಳೆಯಾಗಬೇಕಿತ್ತು. ಈಗ ತಡವಾಗಿಯಾದರೂ ಕೆಲವು ಕಡೆಗಳಲ್ಲಿ ಮಳೆಯಾಗಿದೆ. ಜಿಲ್ಲೆಯ ಹಲವು ಕಡೆಗಳಲ್ಲಿ ರಾತ್ರಿ ಮಳೆಯಾಗಿ ಇಳೆಯನ್ನು ತಂಪು ಮಾಡಿದೆ.

ಜಿಲ್ಲೆಯ ನಾಪೋಕ್ಲು, ಸೋಮವಾರಪೇಟೆ, ಬೀರುಗ, ಕುಮಟೂರು, ಹರಿಹರ, ಶ್ರೀಮಂಗಲ, ಕೋತೂರು, ತಾವಳಗೇರಿ, ನಾಲ್ಕೇರಿ, ಹುದಿಕೇರಿ, ಕುಂದ, ಕಾರಗುಂದ, ನೆಲಜಿ, ಹೈಸೊಡ್ಲೂರು, ಬೆಟ್ಟಗೇರಿ ಬಕ್ಕ, ಕೊಳಕೇರಿ, ವೆಸ್ಟ್ ನೆಮ್ಮೆಲೆ, ತೆರಾಲು ಸೇರಿದಂತೆ ಹಲವು ಕಡೆಯಲ್ಲಿ ಮಳೆಯಾಯಿತು.

------------------

ನಾಪೋಕ್ಲು: ವರ್ಷದ ಪ್ರಥಮ ವರ್ಷಧಾರೆ

ನಾಪೋಕ್ಲು: ಇಲ್ಲಿಯ ಸುತ್ತಮುತ್ತ ಗ್ರಾಮ ವ್ಯಾಪ್ತಿಯಲ್ಲಿ ಬುಧವಾರ ಸಂಜೆ ವರ್ಷದ ಪ್ರಥಮ ವರ್ಷಧಾರೆಯಾಗಿದೆ.

ಕಳೆದ ಕೆಲವು ದಿನಗಳಿಂದ ವಿಪರೀತ ಬಿಸಿಲಿನ ಕಾವು ಹೆಚ್ಚಿದ್ದು ಬುಧವಾರ ಸಂಜೆಯಾಗುತ್ತಿದ್ದಂತೆ ಮಳೆಯ ವಾತಾವರಣ ನಿರ್ಮಾಣವಾಗಿ ಗುಡುಗು ಸಹಿತ 10 ಸೆಂಟಿಮೀಟರ್‌ನಿಂದ ಒಂದು ಇಂಚು ಅಧಿಕ ಮಳೆ ಸುರಿದು ಭೂಮಿ ತಂಪೆರೆದಿದೆ.

ಎಮ್ಮೆಮಾಡು ಗ್ರಾಮದಲ್ಲಿ ಅತಿ ಹೆಚ್ಚು 1.10 ಇಂಚು ಮಳೆಯಾಗಿದೆ. ನೆಲಜಿ ಸುತ್ತಮುತ್ತ ಒಂದು ಇಂಚು, ಚೋನಕೆರೆ 1 ಇಂಚು, ಬಲ್ಲಮಾವಟಿ ಯಲ್ಲಿ 49 ಸೆಂ., ಅಯ್ಯಂಗೇರಿ 8 ಸೆಂ., ಚಿಟ್ಟಿಮಾನಿ 15 ಸೆಂಟಿಮೀಟರ್‌, ಕೊಟ್ಟ ಮುಡಿ 10 ಸೆಂಟಿಮೀಟರ್‌ , ಬೇತು 6 ಸೆಂಟಿಮೀಟರ್‌, ನಾಪೋಕ್ಲು ಪಟ್ಟಣ 10 ಸೆಂಟಿಮೀಟರ್‌. ಮಳೆಯಾಗಿದೆ.

ಇದೀಗಾಗಲೇ ಕಾಫಿ ಬೆಳೆಗಾರರು ತೋಟಗಳಿಗೆ ಮೋಟಾರ್ ಮೂಲಕ ನೀರು ಹಾಯಿಸುತ್ತಿದ್ದು ಈ ದಿನದ ಮಳೆ ಬೆಳೆಗಾರರಿಗೆ ಆಶಾದಾಯಕವಾಗಿದೆ.