ಸಾರಾಂಶ
ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಮರ್ಧೆ ನಡೆಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಜವಹರಲಾಲ್ ನೆಹರು ಅವರ ಜನ್ಮ ದಿನಾಚರಣೆಯ ಸವಿನೆಪಿಗಾಗಿ ಸ್ಫೂರ್ತಿ ಭಿನ್ನ ಸಾಮರ್ಥ್ಯದ ಮಕ್ಕಳ ಶಾಲೆ ಹಾಗೂ ತರಬೇತಿ ಕೇಂದ್ರದಲ್ಲಿ ಮಕ್ಕಳ ದಿನವನ್ನು ಆಚರಿಸಲಾಯಿತು.
ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನವನ್ನು ವೃದ್ಧಿಸಿ ಶಿಕ್ಷಣವನ್ನು ನೀಡಿ. ವಿಶೇಷ ಚೇತನ ಮಕ್ಕಳನ್ನು ಕೂಡ ಸಾಮಾನ್ಯ ಮಕ್ಕಳಂತೆ ಬೆಳೆಸಬೇಕು. ಇಂದಿನ ಮಕ್ಕಳು ಫಾಸ್ಟ್ ಫುಡ್ , ಹೊಟೇಲ್ ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸಿ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಪೋಷಕರು ಗಮನ ಕೊಡಬೇಕು. ಈಗ ಸೇವಿಸುವ ಆಹಾರ, ಹವಮಾನಗಳಿಂದ ಆರೋಗ್ಯದಲ್ಲಿ ಬೇಗನೇ ಏರುಪೇರುಗಳಾಗುತ್ತವೆ. ಈ ಬಗ್ಗೆ ಹೆತ್ತವರು ಗಮನಹರಿಸಬೇಕು ಎಂದರು.ಇದಕ್ಕೂ ಮೊದಲು ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಮರ್ಧೆ ನಡೆಯಿತು. ತೀರ್ಪುಗಾರರಾಗಿ ಪಿಂಗಾರ ಕಲಾವಿದೆರ್ ಬೆದ್ರ ಸ್ಥಾಪಕಾಧ್ಯಕ್ಷ ಮಣಿ ಕೋಟೆಬಾಗಿಲು, ರಂಗಭೂಮಿ ಕಲಾವಿದ ಸತೀಶ್ ಕಲ್ಲಮುಂಡ್ಕೂರು ಭಾಗವಹಿಸಿದರು. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಾದ ಆರಿಸ್, ಶಯನ್ ಅವರನ್ನು ಗೌರವಿಸಲಾಯಿತು.
ಇಸ್ರೇಲ್ ಹೆಲ್ಪಿಂಗ್ ಫ್ರೆಂಡ್ಸ್ನ ಸುನೀಲ್ ಮೆಂಡೋನ್ಸಾ, ತರಕಾರಿ ವ್ಯಾಪಾರಸ್ಥ ಅನ್ವರ್, ಸ್ಫೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆಯ ಸ್ಥಾಪಕಾಧ್ಯಕ್ಷ ಪ್ರಕಾಶ್ ಜೆ. ಶೆಟ್ಟಿಗಾರ್, ಮುಖ್ಯ ಶಿಕ್ಷಕಿ ಶರ್ಮಿಳಾ ವಾಸ್ ಉಪಸ್ಥಿತರಿದ್ದರು. ಶಿಕ್ಷಕಿ ಅನಿತಾ ರೊಡ್ರಿಗಸ್ ಸ್ವಾಗತಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ರಮ್ಯಾ ಕಾರ್ಯಕ್ರಮ ನಿರೂಪಿಸಿದರು. ಸುರೇಖಾ ವಂದಿಸಿದರು.