ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ನಗರದ ಶಾಸಕರ ಕಚೇರಿಯಲ್ಲಿ ಕೃಷಿ ಇಲಾಖೆಯ ಕೃಷಿ ಭಾಗ್ಯ ಯೋಜನೆ 2023-24ರ ಪೋಸ್ಟರ್ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಅವರು, ಈ ಯೋಜನೆಯಿಂದ ರಾಜ್ಯದಲ್ಲಿ ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸಬಹುದು. ಸಮರ್ಪಕ ಮಳೆ ನೀರನ್ನು ಸಂಗ್ರಹಿಸಿಬಹುದು. ಮಳೆ ನೀರಿನ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆ ಅಧಿಕಗೊಳಿಸಿ ಆದಾಯ ಹೆಚ್ಚಿಸುವುದು. ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಾಕ ನೀರಾವರಿಗೆ ಬಳಸಿಕೊಳ್ಳಬಹುದು ಎಂದರು.
ಕೃಷಿ ಭಾಗ್ಯ ಪ್ಯಾಕೇಜ್ನಲ್ಲಿ ಕೃಷಿ ಕ್ಷೇತ್ರ ಬದು ನಿರ್ಮಾಣ, ತಂತಿಬೇಲಿ, ಕೃಷಿ ಹೊಂಡ, ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆ, ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್, ಸೋಲಾರ್ ಪಂಪ್ಸೆಟ್, ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ ಘಟಕಗಳನ್ನು ಒಳಗೊಂಡಿದೆ. ಸುರಪುರ ಮತಕ್ಷೇತ್ರದ ಫಲಾನುಭವಿ ರೈತರು ಯೋಜನೆ ಸಮಗ್ರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.ಸಹಾಯಕ ಕೃಷಿ ನಿರ್ದೇಶಕ ಭೀಮರಾಯ ಮಾತನಾಡಿ, ಯೋಜನೆಗೆ ಅರ್ಜಿ ಸಲ್ಲಿಸುವವರು ರೈತರ ಮೂಲ ದಾಖಲೆಗಳು, ರೈತರ ಭಾವಚಿತ್ರ, ರೈತರ ಎಫ್ಐಡಿ, ಆಧಾರ್ ಪ್ರತಿ, ಪಹಣಿ ಪ್ರತಿ, ಬ್ಯಾಂಕ್ ಪಾಸ್ಬುಕ್ ಪ್ರತಿ, ಕೃಷಿ ಭಾಗ್ಯ ಅರ್ಜಿ, ರೈತರ ಸ್ವಯಂ ಘೋಷಣೆ, ನಿರಾಕ್ಷೇಪಣಾ ಪತ್ರ, (ಇತರೆ ಇಲಾಖೆಗಳಿಂದ ಕ್ಷೇತ್ರ ಬದು ಕೃಷಿ ಹೊಂಡ, ಡೀಸೆಲ್ ಪಂಪ್ಸೆಟ್, ಸೂಕ್ಷ್ಮ ನೀರಾವರಿ) ಪಂಪ್ ಸೆಟ್ಗೆ ಜ.1ರೊಳಗೆ ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು. ಕಾಂಗ್ರೆಸ್ ಮುಖಂಡ ವಿಠ್ಠಲ್ ಯಾದವ್, ಕೃಷಿ ಅಧಿಕಾರಿ ವಿನಾಯಕ, ಮೆಹಬೂಬ್ ಸೇರಿದಂತೆ ಇತರರಿದ್ದರು.