ಜಾಮೀನು ಅರ್ಜಿ ಸಲ್ಲಿಸಿದ್ದ ರಾಜೀವ್ ಗೌಡಗೆ ಹಿನ್ನೆಡೆಯಾಗಿದೆ. ಮಂಗಳವಾರ ರಾಜೀವ್ ಗೌಡ ಪರ ರೆಗ್ಯುಲರ್, ಮಧ್ಯಂತರ ಜಾಮೀನಿನ ಎರಡು ಅರ್ಜಿ ಗಳನ್ನು ವಕೀಲ ವಿವೇಕ್ ಸುಬ್ಬಾರೆಡ್ಡಿ ಸಲ್ಲಿಸಿದ್ದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರನ್ನು ವಿಚಾರಣೆಗಾಗಿ ಗುರುವಾರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.ಪ್ರಕರಣ ಸಂಬಂಧ ರಾಜೀವ್ ಗೌಡ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗಾಗಿ ಕೋರ್ಟ್ ಮೊರೆ ಹೋಗಿದ್ದಾರೆ. ಇದರ ನಡುವೆಯೇ ಕೋರ್ಟ್ ಆದೇಶದಂತೆ ಪೊಲೀಸರು ರಾಜೀವ್ ಗೌಡ ಅವರನ್ನು ವಿಚಾರಣೆಗಾಗಿ ಗುರುವಾರ ಎರಡು ದಿನ ಪೊಲೀಸ್ ವಶಕ್ಕೆ ಪಡೆದಿದ್ದಾರೆ.
ಜಾಮೀನು ಅರ್ಜಿ ಸಲ್ಲಿಸಿದ್ದ ರಾಜೀವ್ ಗೌಡಗೆ ಹಿನ್ನೆಡೆಯಾಗಿದೆ. ಮಂಗಳವಾರ ರಾಜೀವ್ ಗೌಡ ಪರ ರೆಗ್ಯುಲರ್, ಮಧ್ಯಂತರ ಜಾಮೀನಿನ ಎರಡು ಅರ್ಜಿ ಗಳನ್ನು ವಕೀಲ ವಿವೇಕ್ ಸುಬ್ಬಾರೆಡ್ಡಿ ಸಲ್ಲಿಸಿದ್ದರು. ಮಂಗಳವಾರ ಮಧ್ಯಂತರ ಜಾಮೀನಿನ ಅರ್ಜಿ ತಿರಸ್ಕೃತಗೊಂಡು, ಬುಧವಾರ ರೆಗ್ಯುಲರ್ ಜಾಮೀನಿನ ಅರ್ಜಿ ವಿಚಾರಣೆ ನಡೆಸಿದ ಶಿಡ್ಲಘಟ್ಟ ಜೆಎಮ್ಎಫ್ಸಿ ನ್ಯಾಯಾಲಯ, ಜನವರಿ 30ಕ್ಕೆ ತೀರ್ಪು ಕಾಯ್ದಿರಿಸಿದೆ. ಇದರ ಜೊತೆಗೆ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿತ್ತು.ಚಿಂತಾಮಣಿ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ರಾಜೀವ್ ಗೌಡ ಅವರನ್ನು ಗುರುವಾರ ಬೆಳಗ್ಗೆ 6-45 ಗಂಟೆಗೆ ಶಿಡ್ಲಘಟ್ಟ ಸರ್ಕಲ್ ಇನ್ಸ್ಪೆಕ್ಟರ್ ಆನಂದ್ ಕುಮಾರ್ ಅವರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸಲಿದ್ದಾರೆ. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ರಾಜೀವ್ ಗೌಡ ಅವರ ಸಂಚಾರ ಮಾಹಿತಿ, ಮೊಬೈಲ್ ಟ್ರ್ಯಾಕ್ ಆಧರಿಸಿ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಮತ್ತು ಕೃತ್ಯಕ್ಕೆ ಬಳಸಿದ ಮೊಬೈಲ್ ಸಹ ವಶಕ್ಕೆ ಕೇಳಲಿದ್ದಾರೆ. ಪ್ರಕರಣ ಸಂಬಂಧ ಮಂಗಳೂರು ಸೇರಿ ಹಲವು ಕಡೆ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
