ಪ್ರತಿ ಮಹಿಳೆಯರನ್ನು ಗೌರವಿಸಿ ಅವರಿಗೆ ಸಂಕಷ್ಟಗಳು ಎದುರುಗೊಂಡಾಗ ಅವರ ಬೆಂಬಲಕ್ಕೆ ಪುರುಷ ಸಮಾಜ ನಿಂತು ಸಹೋದರಿಯರ ಸಂಕಷ್ಟವನ್ನು ನಿವಾರಿಸಲು ಮುಂದಾದಾಗ ಮಾತ್ರ ರಕ್ಷಾಬಂಧನಕ್ಕೆ ಅರ್ಥ ಬರಲು ಸಾಧ್ಯವೆಂದು ಎಂದು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್ ಹೇಳಿದರು.
ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಪ್ರತಿ ಮಹಿಳೆಯರನ್ನು ಗೌರವಿಸಿ ಅವರಿಗೆ ಸಂಕಷ್ಟಗಳು ಎದುರುಗೊಂಡಾಗ ಅವರ ಬೆಂಬಲಕ್ಕೆ ಪುರುಷ ಸಮಾಜ ನಿಂತು ಸಹೋದರಿಯರ ಸಂಕಷ್ಟವನ್ನು ನಿವಾರಿಸಲು ಮುಂದಾದಾಗ ಮಾತ್ರ ರಕ್ಷಾಬಂಧನಕ್ಕೆ ಅರ್ಥ ಬರಲು ಸಾಧ್ಯವೆಂದು ಎಂದು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್ ಹೇಳಿದರು.ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ, ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಭಾನುವಾರ ರಾತ್ರಿ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಂದು ವಿಚಾರದಲ್ಲೂ ಹಾಗೂ ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಹೋದರಿಯರ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ದರಿರಬೇಕು.ಹಾಗಾದಾಗ ಮಾತ್ರ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯವಿದೆ. ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದು ಅವರು ಬಣ್ಣಿಸಿದರು.ಸುಂಟಿಕೊಪ್ಪ ಹೋಬಳಿ ನಾರಾಯಣ ಗುರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಮಣಿ ಮುಖೇಶ್ ಮಾತನಾಡಿ, ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಜೀವನವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿದ್ದು ಒಂದು ಸಾಧನೆಯ ಪ್ರತೀಕ ಎಂದು ಬಣ್ಣಿಸಿದ್ದರಲ್ಲದೆ, ನಾರಾಯಣ ಗುರು ಸಮುದಾಯದ ಏಳಿಗೆಗೆ ನೀಡಿರುವ ಕೊಡುಗೆ ಮತ್ತು ಆದರ್ಶ ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾಗಿದೆ ಎಂದರು.
ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.ಸಮಿತಿಯ ಸದಸ್ಯರು ಒಬ್ಬರಿಗೊಬ್ಬರು ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿಕೊಂಡು ಸಂತೋಷಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎಂ.ಮಣಿಮುಖೇಶ್ ವಹಿಸಿದ್ದರು.ಬಿಲ್ಲವ ಸಂಘದ ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ,ಕೆ.ಪಿ. ಜಗನ್ನಾಥ್, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಪೂರ್ಣಿಮಾ ರವಿ, ಬಿ.ಎಂ.ಚಂದ್ರ, ಸುರೇಶ್ ಪೂಜಾರಿ ಕೊಡಗರಹಳ್ಳಿ, ಗೀತಾ ವಿಶ್ವನಾಥ್, ಕುಮಾರ ಸೇರಿದಂತೆ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.