ಭಾರತದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವುದು ಮಾತ್ರವೇ ನಮ್ಮ ಗುರಿಯಾಗಿರಲಿಲ್ಲ. ರಾಮ ಮಂದಿರ ನಿರ್ಮಾಣವಾಗಿದೆ. ಇನ್ನು ರಾಮ ರಾಜ್ಯದ ಸ್ಥಾಪನೆ ಹಂಬಲವಾಗಿದೆ ಎಂದು ವಿಶ್ವ ಹಿಂದು ಪರಿಷತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್‌ಜೀ ಹೇಳಿದ್ದಾರೆ.

- ನ್ಯಾಮತಿಯಲ್ಲಿ ಅಯೋಧ್ಯೆ ರಾಮಮಂದಿರ ನಿರ್ಮಾಣ ಉಸ್ತುವಾರಿ ಗೋಪಾಲ್‌ಜೀ

- - -

ಕನ್ನಡಪ್ರಭ ವಾರ್ತೆ ನ್ಯಾಮತಿ

ಭಾರತದಲ್ಲಿ ಶ್ರೀ ರಾಮ ಮಂದಿರ ನಿರ್ಮಾಣ ಮಾಡುವುದು ಮಾತ್ರವೇ ನಮ್ಮ ಗುರಿಯಾಗಿರಲಿಲ್ಲ. ರಾಮ ಮಂದಿರ ನಿರ್ಮಾಣವಾಗಿದೆ. ಇನ್ನು ರಾಮ ರಾಜ್ಯದ ಸ್ಥಾಪನೆ ಹಂಬಲವಾಗಿದೆ ಎಂದು ವಿಶ್ವ ಹಿಂದು ಪರಿಷತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್‌ಜೀ ಹೇಳಿದರು.

ಪಟ್ಟಣದಲ್ಲಿ ಹಿಂದು ಸಂಗಮ ಆಯೋಜನಾ ಸಮಿತಿ ಆಯೋಜಿಸಿದ್ದ ಹಿಂದು ಸಂಗಮ ಬೃಹತ್‌ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಮ ರಾಜ್ಯದಲ್ಲಿ ಸ್ತ್ರೀ, ಗೋವು ಮತ್ತು ನದಿಗಳನ್ನು ತಾಯಿಯಂತೆ ಕಾಣಲಾಗುತ್ತಿತ್ತು. ರಾಮ ರಾಜ್ಯ ಸಮೃದ್ಧವಾಗಿ, ಸತ್ಯ, ನ್ಯಾಯ ಪರವಾಗಿತ್ತು, ರಾಮ ಪರಾಕ್ರಮಶಾಲಿಯಾದ ರಾಜನಾಗಿದ್ದು, ಅಂತಹ ದೇಶ ನಮ್ಮದಾಗಬೇಕು. ಆ ನಿಟ್ಟಿನಲ್ಲಿ ಭಾರತ ಸಾಗುತ್ತಿದೆ ಎಂದು ಭಾವಿಸುತ್ತಿದ್ದೇವೆ ಎಂದರು.

ಹಿಂದು ಸಮಾಜ ತಾನಾಗಿಯೇ ಎಂದೂ ಯಾರ ಮೇಲೂ ಎರಗಲಾರದು. ಆದರೂ ಸಮಾಜವನ್ನು ಹೇಡಿಯಂತೆ ಬಿಂಬಿಸಲಾಗಿದೆ. ಹಿಂದುವಿನ ಸಹನೆಯನ್ನು ದೌರ್ಬಲ್ಯವೆಂದು ಭಾವಿಸಿ ಕೆಣಿಕಿದರೆ ಎದುರಿಗೆ ಯಾರೇ ಇದ್ದರೂ ನಿರ್ನಾಮ ಮಾಡುವ ತಾಕತ್ತು ಹಿಂದು ಸಮಾಜಕ್ಕಿದೆ. ಭಾರತ ಆಕ್ರಮಣಶಾಲಿ ರಾಷ್ಟ್ರವಲ್ಲ, ನಮ್ಮ ಮೇಲಿನ ದಾಳಿಗಳಿಗೆ ಪರಾಕ್ರಮದ ಮೂಲಕ ಉತ್ತರ ನೀಡಿದ್ದು ಅಪರೇಷನ್‌ ಸಿಂದೂರ ಇದಕ್ಕೊಂದು ಉದಾಹರಣೆ ಎಂದರು.

ಆಪರೇಷನ್‌ ಸಿಂದೂರದಲ್ಲಿ ಭಾಗಿಯಾಗಿದ್ದ ಬಿಎಸ್‌ಎಫ್‌ ಗಡಿ ಭದ್ರತಾ ಪಡೆಯ ಯೋಧೆ ಅನುಷಾ, ಹಿಂದೂ ಸಂಗಮ ಆಯೋಜನಾ ಸಮಿತಿಯ ತಾಲೂಕು ಅಧ್ಯಕ್ಷ ಲಿಂಗರಾಜು ಹವಳದ ಮಾತನಾಡಿದರು. ವೇದಿಕೆಯಲ್ಲಿ ಭಾರತ ಮಾತಾ, ಬಸವೇಶ್ವರ ಮತ್ತು ಅಂಬೇಡ್ಕರ್‌ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಗಣರಾಜ್ಯೋತ್ಸವ ನಿಮಿತ್ತ ಸಂವಿಧಾನ ಪೀಠಿಕೆಯ ಬೋಧನೆ ಮತ್ತು ಅಂಬೇಡ್ಕರ್‌ ಕುರಿತು ಕಿರು ಪರಿಚಯ ನೀಡಲಾಯಿತು. ಸ್ವಯಂ ಸೇವಕ ರತ್ನಾಕರ್‌ ಗೋವಿಂದ್‌ ರಾಯ್ಕರ್‌, ಶಿಕ್ಷಕಿ ಚೈತ್ರಾ ಇದ್ದರು.

ಕಾರ್ಯಕ್ರಮಕ್ಕೂ ಮುನ್ನ ಹಿಂದು ಸಂಗಮದ ಬೃಹತ್‌ ಶೋಭಾಯಾತ್ರೆಯು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಗಾಂಧಿ ರಸ್ತೆ, ಮಹಾತೇಶ್ವರ ರಸ್ತೆಯಲ್ಲಿ ಸಾಗಿ, ರಾಣಿ ಚನ್ನಮ್ಮ ವೃತ್ತದಿಂದ ನೆಹರೂ ರಸ್ತೆಯ ಬನಶಂಕರಿ ದೇಗುಲ ಆವರಣದಲ್ಲಿ ಹಾಕಲಾಗಿದ್ದ ಬೃಹತ್‌ ವೇದಿಕೆ ಸ್ಥಳ ತಲುಪಿತು.

ನೂರಾರು ಮಹಿಳೆಯರು, ಪುರುಷರು, ಯುವಕರು, ಯುವತಿಯರು ಕೇಸರಿ ಟವಲ್, ರುಮಾಲು, ಪೇಟ ಧರಿಸಿ ಭಾರತ ಮಾತಕಿ ಜೈ, ಬಸವೇಶ್ವರ ಮಹಾರಾಜ್‌ ಕಿ ಜೈ, ಅಂಬೇಡ್ಕರ್‌ಗೆ ಜೈ, ಎನ್ನುವ ಉದ್ಘೋಷದೊಂದಿಗೆ ಶೋಭಾಯಾತ್ರೆಯಲ್ಲಿ ಸಾಗಿದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪೂಜಾರ್‌ ಚಂದ್ರಶೇಖರ್‌, ಎಸ್‌.ಪಿ.ರವಿಕುಮಾರ್‌, ಹುರುಕಡ್ಲೆ ವಿರೂಪಾಕ್ಷಪ್ಪ, ಮೋಹನ್‌ಕುಮಾರ್‌, ವಿಜಯಕುಮಾರ್‌, ಮಹಾಂತೇಶ್‌ ರೆಡ್ಡಿ ಸೇರಿದಂತೆ ಹಲವು ಹಿಂದು ಮುಖಂಡರು ಭಾಗವಹಿಸಿದ್ದರು.

- - -

(ಕೋಟ್‌) ಸರ್ವೆ ಜನಾ ಸುಖಿನೋ ಭವಂತು, ಎಲ್ಲರೂ ಸುಖಿಗಳಾಗಲಿ ಎಂಬುದು ಭಾರತೀಯ ಸಂಸ್ಕೃತಿಯ ಉದಾತ್ತ ಧ್ಯೇಯವಾಗಿದೆ. ವಿಶ್ವದಾದ್ಯಂತ ಶಾಂತಿ, ಆರೋಗ್ಯ ಮತ್ತು ಕಲ್ಯಾಣವನ್ನು ಆಶಿಸುವ ಭಾರತೀಯ ಹಿಂದುಗಳ ಪ್ರಾರ್ಥನೆಯಾಗಿದೆ.

- ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಹಿರೇಕಲ್ಮಠ, ಹೊನ್ನಾಳಿ.

- - -

(ಟಾಪ್‌ ಕೋಟ್‌) ಮುಸ್ಲಿಂ ತುಷ್ಠೀಕರಣ ನೀತಿ ಕಾರಣ ಕಾಂಗ್ರೆಸ್‌ ದೇಶದಲ್ಲಿ ಹಲವು ಅನಾಚಾರಗಳನ್ನು ನಡೆಸಿದೆ. ದೇಶ ವಿಭಜನೆಯಾಗಿದ್ದೂ ಈ ಕಾರಣದಿಂದಾಗಿಯೇ. ಹಿಂದುತ್ವದ ಆಧಾರದಲ್ಲಿ ಭಾರತವನ್ನು ನಿರ್ಮಾಣ ಮಾಡುವುದಕ್ಕಾಗಿ ಸಂಘ ಆರಂಭವಾಗಿ ಹೆಮ್ಮರವಾಗಿ ಈಗ 100 ವರ್ಷ ದಾಟುತ್ತಿದೆ.

- ಗೋಪಾಲ್‌ಜೀ, ರಾಷ್ಟ್ರೀಯ ಮುಖಂಡ, ವಿಹಿಂಪ.

- - -

-ಚಿತ್ರ.ಜೆಪಿಜಿ:

ಹಿಂದು ಸಂಗಮ ಬೃಹತ್‌ ಶೋಭಾಯಾತ್ರೆ ವೇದಿಕೆ ಕಾರ್ಯಕ್ರಮವನ್ನು ವಿಹಿಂಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗೋಪಾಲ್‌ಜೀ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಉದ್ಘಾಟಿಸಿದರು.