ಅರಸೀಕೆರೆ : ಶ್ರೀರಾಮನವಮಿ ಹಬ್ಬದ ಅಂಗವಾಗಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಭಕ್ತಿಭಾವ, ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಸಂಭ್ರಮ ಮೆರೆಯಿತು.

ನಗರದ ವಿವಿಧ ದೇವಾಲಯಗಳಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ, ಅಲಂಕಾರ, ಮಹಾಮಂಗಳಾರತಿ ಹಾಗೂ ಪಾನಕ–ಪ್ರಸಾದ ವಿತರಣೆಯ ಮೂಲಕ ರಾಮನವಮಿಯನ್ನು ಭಕ್ತರು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಿದರು.ನಗರದ ವಾಚನಾಲಯ ರಸ್ತೆಯ ಶ್ರೀ ಪ್ರಾಚೀನ ಆಂಜನೇಯ ದೇವಸ್ಥಾನ, ಶ್ರೀ ಸೀತಾರಾಮ ಮಂದಿರ, ರಂಗೇಗೌಡರ ಬೀದಿಯ ಒಕ್ಕಲಿಗರ ಶ್ರೀರಾಮ ಮಂದಿರ, ಹೆಂಜಗೊಂಡನಹಳ್ಳಿಯ ಶ್ರೀ ಆಂಜನೇಯ ದೇವಸ್ಥಾನ, ಮಾರುತಿ ನಗರದ ಶ್ರೀ ಹನುಮಂತ ದೇವಾಲಯ, ವಿದ್ಯಾನಗರದ ಪಂಚಮುಖಿ ಆಂಜನೇಯ ದೇವಾಲಯ, ಮೊದಲಿಯಾರ್ ಬೀದಿಯ ಶ್ರೀರಾಮ ಮಂದಿರ, ಹಾಸನ ರಸ್ತೆ ಬಲಭಾಗದ ವರಸಿದ್ದಿ ಆಂಜನೇಯ ದೇವಸ್ಥಾನ ಸೇರಿದಂತೆ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಹಿಂದೂ ಜಾಗರಣ ವೇದಿಕೆ ವತಿಯಿಂದ ಪಿ.ಪಿ. ವೃತ್ತದಲ್ಲಿ, ಮಾರುತಿ ನಗರದ ಅರಳಿಕಟ್ಟೆ ಬಳಿ, ಶ್ರೀ ಕನ್ನಿಕಾ ದೇವಾಲಯದ ಆವರಣದಲ್ಲಿ ಇರುವ ಶ್ರೀ ಆಂಜನೇಯ ದೇವಸ್ಥಾನ, ಅಂಚೆಕೊಪ್ಪಲಿನ ಹನುಮಂತ ದೇವಸ್ಥಾನ, ಹಾಗೂ ಶ್ಯಾನುಭೋಗರ ಬೀದಿ ಗೆಳೆಯರ ಬಳಗದ ವತಿಯಿಂದ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಕೆಲವೆಡೆ ರಾಮನಾಮ ಸಂಕೀರ್ತನೆ, ಭಜನೆ ಮತ್ತು ಧಾರ್ಮಿಕ ಪ್ರವಚನಗಳೂ ನಡೆಯಿತು.ಮಹಾಮಂಗಳಾರತಿ ನಂತರ ಭಕ್ತಾಧಿಗಳಿಗೆ ಪಾನಕ, ಮಜ್ಜಿಗೆ, ಕೊಸಂಬರಿ, ಹಣ್ಣುಹಂಪಲುಗಳ ಮಿಶ್ರಿತ ರಸಾಯನ ಸೇರಿದಂತೆ ವಿವಿಧ ಪ್ರಸಾದಗಳನ್ನು ವಿತರಿಸಲಾಯಿತು. ಬೇಸಿಗೆಯ ತಾಪಮಾನ ನಡುವೆಯೂ ಭಕ್ತರಿಗೆ ತಂಪು ನೀಡುವ ಈ ಪ್ರಸಾದ ವ್ಯವಸ್ಥೆ ಎಲ್ಲೆಡೆ ಗಮನ ಸೆಳೆಯಿತು.