ಕನ್ನಡಪ್ರಭ ವಾರ್ತೆ ಮೈಸೂರುಸರ್ಕಾರವು ಎಸ್‌.ಸಿ.ಪಿ - ಟಿ.ಎಸ್‌.ಪಿ ಯೋಜನೆಯಡಿ ಭರವಸೆ ನೀಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ನಾಗವಾಲ ಗ್ರಾಪಂ ಮಾಜಿ ಸದಸ್ಯ ಹುಯಿಲಾಳು ರಾಮಸ್ವಾಮಿ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರದ ಭರವಸೆಗಳನ್ನು ನಂಬಿ ಅನುದಾನಕ್ಕಾಗಿ ಕಚೇರಿಗಳಿಗೆ ಅಲೆದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ವಿಷಯವಾಗಿ ಕ್ಷೇತ್ರದ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.2023ರಿಂದಲೇ ಮನವಿ ಸಲ್ಲಿಸುತ್ತಾ ಬಂದಿದ್ದರೂ, ಪ.ಜಾತಿ ಮತ್ತು ಪ. ಪಂಗಡದ ಬಡ ಕಲಾವಿದರಿಗೆ ಈವರೆಗೂ ಗೌರವ ಧನ ಬಿಡುಗಡೆಗೊಳಿಸಿಲ್ಲ. ಅರಣ್ಯದ ಅಂಚಿನಲ್ಲಿರುವ ಪ.ಜಾತಿ ಅವರ ಜಮೀನುಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಬೆಳೆದ ಫಸಲನ್ನು ರಕ್ಷಿಸಿಕೊಳ್ಳಲು ಸೋಲಾರ್ ತಂತಿ ಬೇಲಿ ಅಳವಡಿಸಲು ಎಸ್ಸಿಪಿ - ಟಿ.ಎಸ್‌.ಪಿ ಅಡಿ ಅನುದಾನ ನೀಡಬೇಕೆಂದು ಹಲವು ಬಾರಿ ಕೋರಿದ್ದರೂ ಸರ್ಕಾರ ಮೌನ ವಹಿಸಿದೆ. ಯೋಜನೆಯ ಹಣವು ಬೇರೆಡೆ ದುರ್ಬಳಕೆಯಾಗದಂತೆ ಎಚ್ಚರ ವಹಿಸಿ, ಕೂಡಲೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಬೇಕು. ಪ.ಜಾತಿ ಮತ್ತು ಪ.ಪಂಗಡದವರು ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಮೊದಲಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಆದ್ದರಿಂದ ಸರ್ಕಾರವು ತನ್ನ ಆಶ್ವಾಸನೆಯನ್ನು ಈಡೇರಿಸುವ ಮೂಲಕ ಈ ಸಮುದಾಯಗಳ ಹಿತ ಕಾಯಬೇಕು ಎಂದು ಅವರು ಮನವಿ ಮಾಡಿದ್ದಾರೆ.