ಸಾರಾಂಶ
ಸಂಡೂರು: ರಾಮಪ್ರಸಾದ ಬಿಸ್ಮಿಲ್ಲ ಒಬ್ಬ ಅದಮ್ಯ, ಸಾಹಸಿ ಕ್ರಾಂತಿಕಾರಿಯಾಗಿದ್ದರು. ಭಾರತವನ್ನು ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ಬಿಡಿಸಲು ಶ್ರದ್ಧೆಯಿಂದ ಶ್ರಮಿಸಿದ ಅಮೋಘ ಕ್ರಾಂತಿಕಾರಿ ಎಂದು ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ.ಎಸ್. ನಾನಾವಣೆ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದ ಕ್ರಾಂತಿಕಾರಿಗಳಿಗೆ ನುಡಿನಮನ ಸಲ್ಲಿಸಿದರು.ಪಟ್ಟಣದ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯ ಹಾಗೂ ಭಾರತೀಯ ಸ್ವರಾಜ್ಯ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ನಡೆದ ಕ್ರಾಂತಿಕಾರಿಗಳಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಮಪ್ರಸಾದ ಬಾಲ್ಯದಿಂದಲೂ ಕ್ರಾಂತಿಕಾರಿ ಮನೋಭಾವನೆ ಹೊಂದಿದ್ದರು. ಲೇಖಕರಾದ ಅವರು ಅಮೆರಿಕ ಸ್ವಾತಂತ್ರ್ಯ ಹೋರಾಟವನ್ನು ಹಿಂದಿ ಭಾಷೆಯಲ್ಲಿ ರಚನೆ ಮಾಡಿ ಪ್ರಕಟಿಸಿದರು. ಈ ಪುಸ್ತಕವನ್ನು ಬ್ರಿಟಿಷ್ ಸರ್ಕಾರ ನಿಷೇಧಿಸಿತು. ಧೃತಿಗೆಡದ ರಾಮಪ್ರಸಾದ ಬಿಸ್ಮಿಲ್ಲಾ ಮಾತೃವೇದಿ ಎಂಬ ಕಾಂತಿಕಾರಿ ಸಂಘ ಕಟ್ಟಿ, ಸಂಘದ ಆರ್ಥಿಕ ಅವಶ್ಯಕತೆಗಳಿಗಾಗಿ ಬ್ರಿಟಿಷರನ್ನು ಲೂಟಿ ಮಾಡಲು ನಿಶ್ಚಯಿಸಿ, ಇದನ್ನು ಮೂರು ಹಂತಗಳಲ್ಲಿ ಕಾರ್ಯಗತಗೊಳಿಸಲಾಯಿತು ಎಂದರು.ದೆಹಲಿ ಮತ್ತು ಆಗ್ರಾ ನಡುವೆ ರೈಲಿನಲ್ಲಿ ಸಾಗಿಸುತ್ತಿದ್ದ ಸರ್ಕಾರಿ ಖಜಾನೆಯನ್ನು ಲೂಟಿಗೈದರು. ೧೯೨೫ರಲ್ಲಿ ಕಾಕೋರಿಯಲ್ಲಿ ಸರ್ಕಾರಿ ಖಜಾನೆಯನ್ನು ಲೂಟಿ ಮಾಡಿದರು. ಇವರ ಜೊತೆಗೆ ರೋಷನ್ಸಿಂಗ್ ಹಾಗೂ ಅಶ್ಫಾಕುಲ್ಲಾಖಾನ್ ಕೈಜೋಡಿಸಿದರು. ನ್ಯಾಯಲಯವು ರಾಮಪ್ರಸಾದ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಹಾಗೂ ರೊಷನ್ ಸಿಂಗ್ ಅವರಿಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತು ಎಂದು ವಿವರಿಸಿದರು.
ಪ್ರಾಚಾರ್ಯ ಯು. ದೇವರಾಜ್, ಸಿಬ್ಬಂದಿ, ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ.ಎಸ್. ನಾನಾವಟೆ ಅವರು ಕ್ರಾಂತಿಕಾರಿ ರಾಮಪ್ರಸಾದ ಬಿಸ್ಮಿಲ್ಲಾ ಕುರಿತು ಮಾತನಾಡಿದರು.
ಸಂಡೂರಿನ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ಕ್ರಾಂತಿಕಾರಿಗಳಿಗೆ ನುಡಿ ನಮನ ಕಾರ್ಯಕ್ರಮದಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.