ಸಾರಾಂಶ
ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ನಡೆಯಿತು. ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಪ್ರಭು ಶ್ರೀರಾಮನು ರಾವಣನ ವಿರುದ್ಧ ವಾನರಸೇನೆಯನ್ನು ಸಂಘಟಿಸಿದರು. ಛತ್ರಪತಿ ಶಿವಾಜಿ ಮಹಾರಾಜರು ಇಸ್ಲಾಮೀ ಸುಲ್ತಾನರ ವಿರುದ್ಧ ಸಾಮಾನ್ಯ ಮಾವಳಿಗಳ ಸಂಘಟಿಸಿದರು. ಈ ಸಂಘಟನೆಗಳು ಧರ್ಮಕ್ಕಾಗಿ ತ್ಯಾಗ ಮಾಡುವ ಪ್ರೇರಣಾದಾಯಿ ವಿಚಾರದ ಮೇಲೆ ನಿರ್ಮಾಣವಾಗಿದ್ದವು. ಇಂತಹ ನಿಸ್ವಾರ್ಥ ಸಂಘಟನೆ ನಿರ್ಮಾಣವಾದಾಗಲೇ ನಿಜವಾದ ಅರ್ಥದಲ್ಲಿ ರಾಮರಾಜ್ಯ ಸಾಕಾರಗೊಳ್ಳುತ್ತದೆ. ಪ್ರಸ್ತುತ ಕಾಲದಲ್ಲಿ ಇಂತಹ ಸಂಘಟನೆಯ ಅವಶ್ಯಕತೆ ಇದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಡಾ. ಪ್ರಣವ್ ಮಲ್ಯ ಕರೆ ನೀಡಿದರು.ಅವರು ಗುರುವಾರ ಹಿಂದೂ ಜನಜಾಗೃತಿ ಸಮಿತಿಯಿಂದ ನಗರದಲ್ಲಿ ನಡೆದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕ ಹಿಂದೂಗಳ ಮೇಲೆ ದೌರ್ಜನ್ಯವೆಸಗಿದ, ಮಂಡ್ಯದಲ್ಲಿ ಗೋರಕ್ಷಣೆ ಮಾಡಿದ ಗೋರಕ್ಷಕರನ್ನೇ ಬಂಧಿಸಿದ, ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆ ವಿರೋಧಿಸಿ ಹಿಂದೂಗಳ ಮನೆಗಳು, ಅಂಗಡಿಗಳನ್ನು ಸುಟ್ಟ, ಉತ್ತರಪ್ರದೇಶ, ರಾಜಸ್ಥಾನ ಹಿಂದೂಗಳ ಧಾರ್ಮಿಕ ಮೆರವಣಿಗೆಗಳ ಮೇಲೆ ಕಲ್ಲು ತೂರಿದ, ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನೆ ಘಟನೆಗಳು ಹಿಂದೂ ಧರ್ಮವನ್ನು ನಾಶಪಡಿಸಲು ನಡೆಯುತ್ತಿವೆ. ಇದೆಲ್ಲದರ ವಿರುದ್ಧ ಈಗ ಗುರುಪೂರ್ಣಿಮೆಯ ದಿನ ಧರ್ಮಸಂಸ್ಥಾಪನೆಗಾಗಿ ಸಂಘಟಿತರಾಗಲು ಸಂಕಲ್ಪ ಮಾಡಬೇಕಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನ್ಯಾಯವಾದಿ ನಾಗರಾಜ್, ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಮತ್ತು ಪೂ. ಸಂದೀಪ ಗಜಾನನ ಆಳಸಿ ರಚಿಸಿದ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ ಇ-ಬುಕ್ಗಳನ್ನು ಬಿಡುಗಡೆ ಮಾಡಿದರು. ಕಾಪುವಿನ ಮಾಜಿ ಶಾಸಕ ಲಾಲಾಜಿ ಮೆಂಡನ್, ಮಾಜಿ ಏರ್ವೈಸ್ ಮಾರ್ಷಲ್ ರಮೇಶ ಕಾರ್ಣಿಕ್, ಮಾಜಿ ಇಸ್ರೋ ವಿಜ್ಞಾನಿ ಜನಾರ್ಧನ ಇಡ್ಯಾ, ನ್ಯಾಯವಾದಿ ಸಂತೋಷ್ ಮೂಡುಬೆಳ್ಳೆ, ಸೀತಾರಾಮ ಭಟ್ ಕಾಪು ಸೇರಿದಂತೆ 300ಕ್ಕೂ ಹೆಚ್ಚು ರಾಷ್ಟ್ರನಿಷ್ಠರು ಉಪಸ್ಥಿತರಿದ್ದರು.