ಸಾರಾಂಶ
ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ದೊರಕಿದರೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರು ಮತ್ತು ಪ್ರತಿಭಾ ಸಂಪನ್ನರಾಗಿದ್ದಾರೆ. ಅದನ್ನು ಅನಾವರಣಗೊಳಿಸಲು ಶಿಕ್ಷಕರು ಮತ್ತು ಪೋಷಕರು ಸಹಕರಿಸಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ತಿರುಮಲಸಾಗರ (ಟಿ.ಎಸ್.ಛತ್ರ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮಾಜಿ ಶಾಸಕ ದಿ.ಕೆ.ಎಸ್.ಪುಟ್ಟಣ್ಣಯ್ಯರ ಸ್ಮರಣಾರ್ಥ ನಿರ್ಮಿಸಲಾದ ಕುವೆಂಪು ರಂಗ ಮಂಟಪವನ್ನು ಶಾಸಕ ದರ್ಶನ್ ಪುಟ್ಟಣ್ಣಯ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಶಾಸಕರು, ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ, ಪ್ರೋತ್ಸಾಹ ದೊರಕಿದರೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಗ್ರಾಮೀಣ ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರು ಮತ್ತು ಪ್ರತಿಭಾ ಸಂಪನ್ನರಾಗಿದ್ದಾರೆ. ಅದನ್ನು ಅನಾವರಣಗೊಳಿಸಲು ಶಿಕ್ಷಕರು ಮತ್ತು ಪೋಷಕರು ಸಹಕರಿಸಬೇಕೆಂದು ಅಭಿಪ್ರಾಯಪಟ್ಟರು.
ಪ್ರಸ್ತುತ ಸ್ಪರ್ಧಾಯುಗದಲ್ಲಿ ಶಿಕ್ಷಣವಿದ್ದರೆ ಮಾತ್ರ ಬದುಕಲು ಸಾಧ್ಯ. 1 ರಿಂದ 7ನೇ ತರಗತಿವರೆಗೆ ಇಂಗ್ಲಿಷ್ ಬೋಧಕರನ್ನು ಸರ್ಕಾರಿ ಶಾಲೆಗೆ ಒದಗಿಸಬೇಕು. 6 ರಿಂದ 12ನೇ ತರಗತಿಯವರೆಗೆ ಆನ್ಲೈನ್ ಮೂಲಕ ಸಂವಹನ ಎಂಬ ಆಲೋಚನೆ ನನ್ನದು. ಇದರಿಂದ ಮಕ್ಕಳ ಬೌದ್ಧಿಕ ವಿಕಸನ ಸಾಧ್ಯವಿದೆ. ಕಂಪ್ಯೂಟರ್ ಶಿಕ್ಷಣ ವಿದ್ಯಾರ್ಥಿ ಹಂತದಲ್ಲೇ ಬೆಳೆಯಬೇಕಿದೆ ಎಂದರು.ಪೋಷಕರು ತಮ್ಮ ಮಕ್ಕಳಿಗೆ ಗುರು ಹಿರಿಯರನ್ನು ಗೌರವಿಸುವುದನ್ನು ಕಲಿಸಬೇಕು. ಸಾಧ್ಯವಾದಷ್ಟೂ ಮೊಬೈಲ್, ಟಿವಿಗಳಿಂದ ದೂರವಿರಿಸುವುದು ಉತ್ತಮ. ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ಆದ್ಯತೆ ನೀಡಬೇಕು ಎಂದರು.
ದೈಹಿಕ ಮಾನಸಿಕ ಬೆಳವಣಿಗೆ ವ್ಯಕ್ತಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಆದ್ದರಿಂದ ಗ್ರಾಮಸ್ಥರು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಬೇಕೆಂದು ಸಲಹೆ ನೀಡಿದರು.ಇದೇ ಗ್ರಾಮದ ಪಕ್ಕದ ಇಂಗಲಗುಪ್ಪೆಯ ಇ.ಎಸ್.ವೆಂಕಟರಾಮಯ್ಯ ಅವರು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದವರು. ಅವರು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಂದ ಈ ಶಾಲೆ ಉದ್ಘಾಟಿಸಿದ್ದನ್ನು ಇಲ್ಲಿನ ಶಿಕ್ಷಕರು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಲೋಕೇಶ್, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷರಾದ ರತ್ನ, ಗ್ರಾಪಂ ಮಾಜಿ ಮಾಜಿ ಸದಸ್ಯ ಲೋಕೇಶ್, ನಾಗರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಶಾಲೆಗೆ ಶುದ್ಧ ಕುಡಿಯುವ ನೀರು ಒದಗಿಸಿದ ರವಿಪ್ರಕಾಶ್, ಟಿ.ಇ.ಪ್ರಕಾಶ್, ಸತೀಶ್, ನಂದೀಶ್, ಮುಖ್ಯಶಿಕ್ಷಕ ನಂದೀಶ್, ಸಹ ಶಿಕ್ಷಕರಾದ ಶಾರದ, ಚಂದ್ರಶೇಖರ್, ಗ್ರೇಸಿ, ಪಂಕಜ, ಶೋಭಾ ಮತ್ತಿತರರಿದ್ದರು.