ಆರ್.ಎಸ್.ಎಸ್. ಹಿರಿಯ ಸ್ವಯಂ ಸೇವಕ ರಂಗಪ್ಪ ಶೇಬಿನಕಟ್ಟಿ ಅವರ ಸಮಾಜಮುಖಿ ಕಾರ್ಯ, ಫಲಾಪೇಕ್ಷೆ ಇಲ್ಲದ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ. ಅವರು ಸದಾ ಕ್ರಿಯಾಶೀಲ ಚಟುವಟಿಕೆ ಮೂಲಕ ನಮಗೆಲ್ಲ ಆದರ್ಶರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಆರ್.ಎಸ್.ಎಸ್. ಹಿರಿಯ ಸ್ವಯಂ ಸೇವಕ ರಂಗಪ್ಪ ಶೇಬಿನಕಟ್ಟಿ ಅವರ ಸಮಾಜಮುಖಿ ಕಾರ್ಯ, ಫಲಾಪೇಕ್ಷೆ ಇಲ್ಲದ ಸೇವೆಗಳು ಸಮಾಜಕ್ಕೆ ಮಾದರಿಯಾಗಿವೆ. ಅವರು ಸದಾ ಕ್ರಿಯಾಶೀಲ ಚಟುವಟಿಕೆ ಮೂಲಕ ನಮಗೆಲ್ಲ ಆದರ್ಶರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಪಟ್ಟಣದಲ್ಲಿ ರಂಗಪ್ಪ ಶೇಬಿನಕಟ್ಟಿ ಅಭಿನಂದನಾ ಸಮಿತಿ ಆಯೋಜಿಸಿದ್ದ ರಂಗಪ್ಪ ಶೇಬಿನಕಟ್ಟಿ ಅವರ ಸಹಸ್ರ ಚಂದ್ರದರ್ಶನ ಹಾಗೂ ಗ್ರಂಥಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಸರಳ, ಸಜ್ಜನಿಕೆ ಮೈಗೂಡಿಸಿಕೊಂಡು ನಿಷ್ಠೆಯಿಂದ ಕಾರ್ಯ ಮಾಡುತ್ತಿದ್ದ ರಂಗಪ್ಪನವರ ಬಹುಮುಖ ವ್ಯಕ್ತಿತ್ವ ಸಮಾಜಕ್ಕೆ, ನಾಡಿಗೆ ಪ್ರೇರಣೆಯಾಗಿವೆ ಎಂದರು.

ನೇಕಾರಿಕೆ ವೃತ್ತಿಯೊಂದಿಗೆ ಸಮಾಜದಲ್ಲಿ ಯುವಕರೇ ನಾಚುವ ರೀತಿಯಲ್ಲಿ ಕ್ರೀಯಾಶೀಲರಾಗಿ ಕಾರ್ಯ ಮಾಡುತ್ತಿದ್ದಾರೆ. ರಾಜಕೀಯ, ಸಾಮಾಜಿಕ, ಧಾರ್ಮಿಕವಾಗಿಯೂ ಸಮಾಜದಲ್ಲಿ ರಂಗಪ್ಪನವರದು ಬಹುಮುಖ ವ್ಯಕ್ತಿತ್ವ ಉಳ್ಳವರು ಎಂದ ಬಣ್ಣಿಸಿದ ಅವರು, ಅವಕಾಶ ಸಿಕ್ಕಾಗ ಸಮಾಜ ಒಪ್ಪುವ ಕೆಲಸ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಕಾರ್ಮಿಕರನ್ನು ಕಾಯಂಗೊಳಿಸಿದ್ದು ನನಗೆ ತೃಪ್ತಿ ತಂದಿದೆ ಎಂದು ಹೇಳಿದರು.

ಭಾರತೀಯ ಶಿಕ್ಷಣ ಮಂಡಳಿ ಅಖಿಲ ಭಾರತೀಯ ಸಂಘಟನಾಮಂತ್ರಿ ಶಂಕರಾನಂದಜೀ ಮುಖ್ಯ ವಕ್ತಾರರಾಗಿ ಮಾತನಾಡಿ, ಹಿರಿಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ. ಮಾನವ ಮಹಾದೇವನಾಗಿ ಮಾಧವನಾಗಬೇಕಾದರೆ ಅವರಲ್ಲಿ ಫಲಾಪೇಕ್ಷೆ ಇಲ್ಲದ, ಉತ್ತಮ ನಡವಳಿಕೆ ಅವಶ್ಯವಾಗಿವೆ. ಆ ಆದರ್ಶ ಗುಣಸ್ವಭಾವ, ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿರುವ ರಂಗಪ್ಪ ಶೇಬಿನಕಟ್ಟಿ ಸಮಾಜಕ್ಕೆ ಆದರ್ಶಪ್ರಾಯರು ಎಂದು ಹೇಳಿದರು.

ರಂಗಪ್ಪ ಶೇಬಿನಕಟ್ಟಿ ಅವರ ನೋವುಂಡು ನಲಿದವರು ಅಭಿನಂದನಾ ಗ್ರಂಥ, ಡಾ.ವಿ.ಎ. ಬೆನಕನಾಳ ಅವರ ರಾಷ್ಟ್ರ ನೇತಾರ ಅಟಲ್‌ ಬಿಹಾರ ವಾಜಪೇಯಿ ಕುರಿತ ಪುಸ್ತಕ, ಎಸ್.ವಿ. ಚವಡಾಪೂರ ಅವರ ದೇವರ ದಾಸಿಮಯ್ಯನವರ ಆಯ್ದ 50 ವಚನಗಳು ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.

ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಂಪಿಹೇಮಕೂಟದ ಶ್ರೀಜಗದ್ಗುರು ದಯಾನಂದಪುರಿ ಸ್ವಾಮೀಜಿ, ಶ್ರೀಜಗದ್ಗುರು ಗುರುಸಿದ್ದ ಪಟ್ಟದಾರ್ಯ ಸ್ವಾಮೀಜಿ, ಮಳೆರಾಜೇಂದ್ರಮಠದ ಶ್ರೀಭಾಸ್ಕರ ಸ್ವಾಮೀಜಿ, ರಾಘವೇಂದ್ರಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ಆರ್.ಎಸ್.ಎಸ್.ಸಂಘ ಚಾಲಕ ಬಸವರಾಜ ಡಂಬಳ, ದೇವಾಂಗ ರಾಜ್ಯ ಸಂಘದ ಅಧ್ಯಕ್ಷ ರವೀಂದ್ರ ಕಲಬುರ್ಗಿ, ಸಮಿತಿ ಅಧ್ಯಕ್ಷ, ಮಾಜಿ ಶಾಸಕ ರಾಜಶೇಖರ ಶೀಲವಂತ, ಡಾ.ವಿ.ಎಬನಕನಾಳ, ಎಸ್.ವಿ.ಚೌಡಾಪೂರ, ಪ್ರಕಾಶ ಶೇಬಿನಕಟ್ಟಿ, ರವಿ ಶೇಬಿನಕಟ್ಟಿ ಇತರರು ಇದ್ದರು. ವಿವೇಕಾನಂದ ದೇವಾಂಗಮಠ, ಐಶ್ವರ್ಯ ಕಂಠಗೌಡ್ರ, ಜ್ಞಾನೇಶ್ವರ ಬೊಂಬಲೇಕರ ನಿರೂಪಿಸಿದರು.