ಧಾರವಾಡ:

ಮಕ್ಕಳ ಸಾಂಸ್ಕೃತಿಕ ಕಲೆ ಗುರುತಿಸಿ ರಂಗಾಯಣವು ಪ್ರೋತ್ಸಾಹ ನೀಡುತ್ತಿದೆ ಎಂದು ಸಾಹಿತಿ ಡಾ. ಬಸು ಬೇವಿನಗಿಡದ ಹೇಳಿದರು.

ರಂಗಾಯಣವು ಇಲ್ಲಿನ ಪಂ. ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ “ಅಭಿನಯ-ಅಭಿವ್ಯಕ್ತಿ” ಧ್ಯೇಯವಾಕ್ಯದಡಿ ಆಯೋಜಿಸಿದ್ದ “ಮಕ್ಕಳ ರಂಗ ತರಬೇತಿ ಶಿಬಿರದ ಸಮಾರೋಪ ಹಾಗೂ ಚಿಣ್ಣರ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಎಂದರೆ ಸಾಹಿತ್ಯದ ಭಂಡಾರ. ಅದರಲ್ಲಿ ಅಭಿನಯ, ಅಕ್ಷರಗಳ ಉಚ್ಛಾರಣೆ, ಪದ ಬಳಸುವ ಬಗೆ, ಭಾವ ವ್ಯಕ್ತಪಡಿಸುವ ವಿಧಾನ ಎಲ್ಲವೂ ಇದೆ. ಇಂತಹ ರಂಗಕಲೆ ರೂಢಿಸಿಕೊಳ್ಳುವ ಮಕ್ಕಳು ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ. ಮಕ್ಕಳಲ್ಲಿರುವ ಪ್ರತಿಭೆಗೆ ಪೂರಕ ವಾತಾವರಣ ನೀಡುವ ಕಾರ್ಯವನ್ನು ಪಾಲಕರು ಮಾಡಬೇಕು. ಅಂದಾಗ ಮಾತ್ರ ಅವರು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಝಕೀರ ನದಾಫ, ರಂಗಭೂಮಿ ಪರಿಣಾಮಕಾರಿಯಾಗಿ ಪ್ರಭಾವ ಬೀರುವ ಮಾಧ್ಯಮವಾಗಿದೆ. ಇಲ್ಲಿ ನೀಡುವ ತರಬೇತಿ, ಚಟುವಟಿಕೆ ಕೇವಲ ಜೀವನ ರೂಪಿಸುವುದಲ್ಲದೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತದೆ. ಆದ್ದರಿಂದ ಮಕ್ಕಳಿಗೆ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಲು ಪಾಲಕರು ಉತ್ತೇಜನ ನೀಡಬೇಕೆಂದು ಹೇಳಿದರು.


ಈ ವೇಳೆ ಚಿಣ್ಣರಮೇಳದ ಕಿರುಹೊತ್ತಿಗೆ ಬಿಡುಗಡೆಗೊಳಿಸಲಾಯಿತು. ರಂಗಾಯಣ ಆಡಳಿತಾಧಿಕಾರಿ ಶಶಿಕಲಾ ಹುಡೇದ ಪ್ರಾಸ್ತಾವಿಕ ಮಾತನಾಡಿದರು. ಚಿಣ್ಣರ ಮೇಳದ ಸಂಚಾಲಕ ಅರುಣಕುಮಾರ ಮೇದಾರ, ತರಬೇತುದಾರ ರಾಜ್ ಕವಡೆನವರ, ಸಂಗೀತಗಾರ ಸುನಂದಾ ನಿಂಬನಗೌಡರ ಉಪಸ್ಥಿತರಿದ್ದರು. ನಂತರ ವಾಚಿಕ ತಂಡ ಕುಣಿಯೋನು ಬಾರ, ಆಹಾರ‍್ಯ ತಂಡ ಹಾರೋಣ ಬಾ ಸಮೂಹ ನೃತ್ಯ ಹಾಗೂ “ಕೆಂಪು ಹೂ” ನಾಟಕವನ್ನು ಆಂಗಿಕ ತಂಡ, “ಸಾಯೋ ಆಟ” ನಾಟಕವನ್ನು ಸಾತ್ವಿಕ ತಂಡ ಪ್ರಸ್ತುತಪಡಿಸಿದರು.

ನಾಟಕಗಳನ್ನು ಪ್ರದರ್ಶಿಸಿದ ಚಿಣ್ಣರರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕೀರ್ತಿ ಸಿಂದೋಗಿ ಹಾಗೂ ಸುನೀಲ ಬೆಳಗಾವಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.