ಗಣೇಶನ ಹಬ್ಬದ ಪ್ರಯುಕ್ತ ಶನಿವಾರ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿರುವುದು ಕಂಡು ಬಂದಿತು.
ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿ
ಕನ್ನಡಪ್ರಭ ವಾರ್ತೆ ರಾಣಿಬೆನ್ನೂರುಗಣೇಶನ ಹಬ್ಬದ ಪ್ರಯುಕ್ತ ಶನಿವಾರ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿರುವುದು ಕಂಡು ಬಂದಿತು.
ನಗರದ ಎಂ.ಜಿ. ರಸ್ತೆ, ನೆಹರು ಮಾರುಕಟ್ಟೆ, ಬಸ್ನಿಲ್ದಾಣ ರಸ್ತೆ ಮುಂತಾದ ಕಡೆಗಳಲ್ಲಿ ಜನರು ಹೂವು, ಹಣ್ಣು ಹಾಗೂ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದರು. ಹಬ್ಬದ ವ್ಯಾಪಾರಕ್ಕಾಗಿಯೇ ಕೆಲವರು ಹೊರ ಜಿಲ್ಲೆ ಹಾಗೂ ಬೇರೆ ಬೇರೆ ಗ್ರಾಮಗಳ ಹೂವಿನ ವ್ಯಾಪಾರಿಗಳು ರಸ್ತೆಗಳಲ್ಲಿ ಮಾರಾಟ ಮಾಡುತ್ತಿದ್ದರು. ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಚೆಂಡು ಹೂವು, ಸೇವಂತಿಗೆ, ಕನಕಾಂಬರ, ಮಲ್ಲಿಗೆ, ಕಣಗಲೆ, ಗುಲಾಬಿ, ಕೇದಿಗೆ ಹಾಗೂ ಮಾಲೆಗಳು ಕಂಗೊಳಿಸುತ್ತಿದ್ದವು. ಅಲಂಕಾರಿಕ ವಸ್ತುಗಳು ಮಾರಾಟವಾದವು. ಗಣಪತಿ ಮಂಟಪದ ಅಲಂಕಾರಕ್ಕೆ ನಾನಾ ಬಗೆಯ ವಿದ್ಯುದ್ದೀಪಗಳ ಸಾಲು, ಬಣ್ಣದ ಪೇಪರ್, ಪ್ಲಾಸ್ಟಿಕ್ ಹೂವಿನ ಮಾಲೆ ಸೇರಿ ಇತರ ವಸ್ತುಗಳು ಗ್ರಾಹಕರ ಗಮನ ಸೆಳೆದವು.ಮುಗಿಲು ಮುಟ್ಟಿದ ಹೂವು, ಹಣ್ಣುಗಳ ದರ:
ಗಣೇಶ ಹಬ್ಬದ ಕಾರಣದಿಂದ ಮಾರುಕಟ್ಟೆಯಲ್ಲಿ ಹೂವಿನ ದರ ಎರಡ್ಮೂರು ಪಟ್ಟು ಹೆಚ್ಚಳವಾಗಿರುವುದು ಕಂಡು ಬಂತು. ಕನಕಾಂಬರಿ ಹೂವು 1 ಮಾರಿಗೆ ರು.150 ರು. ಕಾಕಡ 150, ಮಲ್ಲಿಗೆ ರು.120, ಸೇವಂತಿಗೆ ರು. 100, ಬಿಳಿ ಸೇವಂತಿಗೆ ರು.150, ಚೆಂಡು ಹೂವು ರು.100 ನಂತೆ ಮಾರಾಟವಾದವು. ಇದೇ ರೀತಿ ಹಣ್ಣುಗಳ ದರದಲ್ಲಿಯೂ ಏರಿಕೆಯಾಗಿದ್ದು ಚಿಕ್ಕು ಹಣ್ಣು ಕೆಜಿಗೆ ರು.120, ಸೀತಾಫಲ ರು.160, ಮೊಸಂಬಿ ರು.160, ಪೇರಲ ರು.80, ಏಲಕ್ಕಿ ಬಾಳೆಹಣ್ಣು ರು.110, ಕಿತ್ತಳೆ ರು.200, ದಾಳಿಂಬೆ ರು.160 ಹಾಗೂ ಬಾಳೆ ಕಂಬ ಒಂದು ಜೊತೆ ರು.20-30 ದರದಂತೆ ಮಾರಾಟವಾದವು.