ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ರಾಷ್ಟ್ರಕವಿ ಕುವೆಂಪು ಆಡಂಬರವನ್ನು ಹೋಗಲಾಡಿಸಲು ಸರಳ ವಿವಾಹವನ್ನು ಮಾಡಿಕೊಳ್ಳುವ ಮೂಲಕ ತಮ್ಮ ಜೀವನದಲ್ಲಿ ಸರಳತೆ ರೂಢಿಸಿಕೊಂಡ ಮಹಾನ್ ವ್ಯಕ್ತಿ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತಿನ ಗೌರವ ಮಾರ್ಗದರ್ಶಕ ಪ್ರೊ. ಹನುಮಂತರಾಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಶುಕ್ರವಾರ ರಾಜ್ಯ ವೈಜ್ಞಾನಿಕ ಪರಿಷತ್ತು ಹಾಗೂ ಮಹಿಳಾ ಸರ್ಕಾರಿ ಕಾಲೇಜು ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ, ನಮ್ಮ ನಡಿಗೆ ವಿಜ್ಞಾನದ ಕಡೆಗೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಮೂಢನಂಬಿಕೆಗಳ ವಿರುದ್ಧ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು.
ಕುವೆಂಪು ಅವರು ಆಡಂಬರದ ಮದುವೆಗಳು ಹಾಗೂ ಮೌಢ್ಯಗಳು, ಮೂಢ ನಂಬಿಕೆಗಳನ್ನು ನಿರಂತರವಾಗಿ ವಿರೋಧಿಸುತ್ತಾ ಬಂದವರು. ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ರಾಜ್ಯ ವೈಜ್ಞಾನಿಕ ಪರಿಷತ್ತಿನ ಗೌರವ ಅಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿ, ಪರಿಷತ್ತು ಮೌಢ್ಯ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ಅರಿವು ಮತ್ತು ಜಾಗೃತಿ ಮೂಡಿಸುತ್ತಿದೆ. ಜನರು ಇದರಿಂದ ಹೊರ ಬಂದು ವೈಜ್ಞಾನಿಕವಾಗಿ ಚಿಂತಿಸಬೇಕು ಎಂದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ ಮಾತನಾಡಿದರು.ನಿವೃತ್ತ ವಿಜ್ಞಾನ ವಿಷಯ ಪರಿವೀಕ್ಷಕ ನಂಜರಾಜು, ಸಂಪನ್ಮೂಲ ವ್ಯಕ್ತಿ ಲೋಕೇಶ್ ಅವರು ನಡೆಸಿಕೊಟ್ಟ ಸಂವಾದ ಹಾಗೂ ಪವಾಡ ರಹಸ್ಯ ಬಯಲು ವಿದ್ಯಾರ್ಥಿಗಳ ಗಮನ ಸೆಳೆಯಿತು.
ಪ್ರಾಂಶುಪಾಲ ಕೆ.ಬಿ.ನಾರಾಯಣ, ಕಾರ್ಯನಿರತ ಪ್ರತಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ.ಆರ್.ಚಕ್ರಪಾಣಿ, ಗೌರವಾಧ್ಯಕ್ಷಸಿ.ಎಸ್.ಶಂಕರಯ್ಯ, ಗೌರವಾಧ್ಯಕ್ಷೆ ವಸಂತಮ್ಮ, ಉಪಾಧ್ಯಕ್ಷೆ ಪುಷ್ಪಲತಾ, ಸಹಕಾರ್ಯದರ್ಶಿ ಎಸ್.ಮಹದೇವಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ತಾಲೂಕು ಉಪಾಧ್ಯಕ್ಷ ಎಂ.ಸಿ.ಶಿವರಾಜ್, ಜಿಲ್ಲಾ ಸಂಚಾಲಕ ಅಂಬರಹಳ್ಳಿ ಸ್ವಾಮಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಸಂತೋಷ್, ಹಿರಿಯ ವಕೀಲ ಬಾಲರಾಜ್, ಮುಖಂಡರಾದ ಚಲುವರಾಜು, ಮಹೇಶ್, ಪುಟ್ಟಸ್ವಾಮಿ, ಗಂಗಾಧರ್, ಚಿಕ್ಕಣ್ಣ ಇದ್ದರು.