ಜಗತ್ತಿನಲ್ಲಿ ಇರುವುದು ಒಂದೇ ಧರ್ಮ ಅದುವೇ ಸನಾತನ ಧರ್ಮ. ಅದಕ್ಕೆ ಗಡಿ ಇಲ್ಲ

ಹೊಸಪೇಟೆ: ಇಸ್ಲಾಂ ಧರ್ಮದಲ್ಲಿ ಮೂರ್ನಾಲ್ಕು ಮದುವೆಗಳಿಗೆ ಅವಕಾಶವಿದೆ. ಮರಣದ ಬಳಿಕವೂ ಸ್ವರ್ಗದಲ್ಲಿ 73 ಜನ ಕನ್ಯೆಯರು ಸಿಗುತ್ತಾರೆ ಎಂದು ಹೇಳಲಾಗುತ್ತದೆ. ಜೀವಂತವಿರುವಾಗ ಮೂರ್ನಾಲ್ಕು ಮದುವೆ ಆಸೆ ಹಾಗೂ ಮರಣದ ನಂತರ ಸಿಗುವ ಕನ್ಯೆಯರ ದುರಾಸೆಯಿಂದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಇಸ್ಲಾಂ ಧರ್ಮವನ್ನು ಹೊಗಳಿರಬಹುದು ಎಂದು ವಿಪ ಸದಸ್ಯ ಸಿ.ಟಿ. ರವಿ ಲೇವಡಿ ಮಾಡಿದರು.

ಪಾದಯಾತ್ರೆ ಹಿನ್ನೆಲೆ ಲಿಂಗಸುಗೂರಿಗೆ ತೆರಳುವ ಮುನ್ನ ಮಂಗಳವಾರ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಇರುವುದು ಒಂದೇ ಧರ್ಮ ಅದುವೇ ಸನಾತನ ಧರ್ಮ. ಅದಕ್ಕೆ ಗಡಿ ಇಲ್ಲ. ಅದು ವಿಶ್ವಮಾನ್ಯ. ಉಳಿದೆಲ್ಲವೂ ಮತಗಳು. ಸನಾತನ ಧರ್ಮ ನಾಶ ಮಾಡಲು ಯತ್ನಿಸಿದವರೆಲ್ಲ ನಾಶವಾಗಿದ್ದಾರೆ. ಸನಾತನ ಧರ್ಮಕ್ಕೆ ಅಂತ್ಯವೇ ಇಲ್ಲ. ಇಂತಹ ಧರ್ಮದಲ್ಲಿ ಜನಿಸಿದ್ದಕ್ಕೆ ಹೆಮ್ಮೆಯಿರಬೇಕು. ಹಿಂದೂ ಲಿಂಗಾಯತ ಎಂದು ಹೇಳಿಕೊಂಡು ಶಾಸಕರಾಗಿ ಆಯ್ಕೆಗೊಂಡು ಅದೇ ಕೋಟಾದಲ್ಲಿ ಸಚಿವ ಸ್ಥಾನಗಿಟ್ಟಿಸಿಕೊಂಡಿರುವ ಬಸವರಾಜ ರಾಯರೆಡ್ಡಿ ಈ ರೀತಿ ಹೇಳಿಕೆ ನೀಡಿರುವುದು ಅಕ್ಷಮ್ಯ ಅಪರಾಧ ಎಂದು ಹೇಳಿದರು.

ಬಸವರಾಜ ರಾಯರಡ್ಡಿ ತಿಳಿವಳಿಕೆ ಕೊರತೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಅವರು ಮೊದಲು ಡಾ.ಬಿ.ಆರ್‌.ಅಂಬೇಡ್ಕರ್‌ ಬರೆದ ಥಾಟ್ಸ್‌ ಆಫ್‌ ಪಾಕಿಸ್ತಾನ ಪುಸ್ತಕ ಓದಬೇಕು. ಇಸ್ಲಾಂನಲ್ಲಿ ಮಹಿಳೆಯರ ಶೋಷಣೆ ಹೇಗೆ ನಡೆಯುತ್ತದೆ. ಬುರ್ಖಾ ಗುಲಾಮಗಿರಿಯ ಸಂಕೇತ ಎಂಬ ವಿಚಾರಗಳನ್ನು ಸ್ಪಷ್ಟವಾಗಿ ಬರೆದಿದ್ದಾರೆ ಎಂದರು.

ಜಾಗತಿಕ ಭಯೋತ್ಪಾದನೆಯ ಪಟ್ಟಿಯಲ್ಲಿ ಇಸ್ಲಾಂ ಮೊದಲ ಸ್ಥಾನದಲ್ಲಿದೆ. ಬಹುಶಃ ಬಸವರಾಜ ರಾಯರಡ್ಡಿ ಅವರಿಗೆ ಭಯೋತ್ಪಾದಕರ ಭಯ ಇದ್ದಂತಿದೆ. ತಮಗೆ ಭಯೋತ್ಪಾದಕರು ಏನು ಮಾಡಬಾರದು ಎಂಬ ಕಾರಣಕ್ಕೆಮತ್ತು ತಮ್ಮ ಜೀವದ ಮೇಲಿನ ಪ್ರೀತಿಯಿಂದ ಇಸ್ಲಾಂ ಶ್ರೇಷ್ಠ ಎಂದು ಹೊಗಳಿರಬಹುದು ಎಂದರು.

ಬಿಜೆಪಿ ರಾಜ್ಯ ಒಪ್ಪಿಸಿ ಮೋರ್ಚಾದ ಉಪಾಧ್ಯಕ್ಷ ಅಯ್ಯಾಳಿ ತಿಮ್ಮಪ್ಪ, ವಿಭಾಗದ ಸಹಪ್ರಭಾರಿ ಚನ್ನಬಸವನಗೌಡ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್. ರಾಘವೇಂದ್ರ, ಮಧುಸೂದನ್ ಜಿಂಕಾಡೆ, ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.