ಸಾರಾಂಶ
ಆರ್ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ತಾಲೂಕಿನ ಕುರುಟಹಳ್ಳಿಯ ಶ್ರವಣ್ ಮೃತಪಟ್ಟಿದ್ದರಿಂದ ಸರ್ಕಾರ ನೀಡಿರುವ ಪರಿಹಾರ ಮೊತ್ತ ₹೨೫ ಲಕ್ಷ ಚೆಕ್ನ್ನು ಮೃತ ಶ್ರವಣ್ ತಂದೆ ತಿಮ್ಮಪ್ಪಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿತರಿಸಿದರು.
ಕನ್ನಡಪ್ರಭ ವಾರ್ತೆ ಚಿಂತಾಮಣಿ
ಆರ್ಸಿಬಿ ವಿಜಯೋತ್ಸವ ಸಮಾರಂಭದಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನೂಕುನುಗ್ಗಲಿನಿಂದ ಉಂಟಾದ ಕಾಲ್ತುಳಿತದಲ್ಲಿ ತಾಲೂಕಿನ ಕುರುಟಹಳ್ಳಿಯ ಶ್ರವಣ್ ಮೃತಪಟ್ಟಿದ್ದರಿಂದ ಸರ್ಕಾರ ನೀಡಿರುವ ಪರಿಹಾರ ಮೊತ್ತ ₹೨೫ ಲಕ್ಷ ಚೆಕ್ನ್ನು ಮೃತ ಶ್ರವಣ್ ತಂದೆ ತಿಮ್ಮಪ್ಪಗೆ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ವಿತರಿಸಿದರು.ತಾಲೂಕಿನ ಕುರುಟಹಳ್ಳಿ ಮೃತ ಶ್ರವಣ್ರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚೆಗೆ ಆರ್ಸಿಬಿ ಐಪಿಎಲ್ನಲ್ಲಿ ಗೆದ್ದು ಬೀಗಿದ ಹಿನ್ನೆಲೆ ಮರುದಿನ ಸರ್ಕಾರ ಹಮ್ಮಿಕೊಂಡಿದ್ದ ವಿಜಯೋತ್ಸವ ಸಮಾರಂಭದಲ್ಲಿ ೧೧ ಮಂದಿ ಮೃತಪಟ್ಟಿದ್ದರು. ರಾಜ್ಯ ಸರ್ಕಾರ ಮೃತರ ಕುಟುಂಬದವರಿಗೆ ಪರಿಹಾರವಾಗಿ ೨೫ ಲಕ್ಷ ರೂಗಳ ಘೋಷಿಸಿತ್ತು, ಜಿಲ್ಲಾ ಆಡಳಿತದಿಂದ ಮೃತ ಶ್ರವಣ್ ತಂದೆಗೆ ಸರ್ಕಾರ ನೀಡಿರುವ ಪರಿಹಾರದ ₹೨೫ ಲಕ್ಷ ಚೆಕ್ನ್ನು ನೀಡಿರುವುದಾಗಿ ತಿಳಿಸಿದರು.
ಇಂತಹ ಘಟನೆ ನಡೆಯಬಾರದಿತ್ತು, ಆದರೆ ಘಟನೆಯಿಂದ ಇಡೀ ರಾಜ್ಯದ ಜನತೆಗೆ ನೋವುಂಟಾಗಿದ್ದು ಈ ಹಿನ್ನೆಲೆ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡುವ ನಿಟ್ಟಿನಲ್ಲಿ ಸರ್ಕಾರ ಪರಿಹಾರ ಧನ ವಿತರಿಸಿದೆ. ಕೆಲ ಪೋಷಕರು ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡುವಂತೆ ಒತ್ತಾಯಿಸಿದ್ದು ಅದನ್ನು ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು. ಮಗನನ್ನು ಕಳೆದುಕೊಂಡು ಅತೀವ ದುಖ:ದಲ್ಲಿರುವ ಈ ಕುಟುಂಬದ ಸದಸ್ಯರಿಗೆ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದರು.ಈ ಸಂದರ್ಭದಲ್ಲಿ ಎಡಿಸಿ ಭಾಸ್ಕರ್, ತಾ.ಪಂ. ಇಒ ಎಸ್.ಆನಂದ್, ಗ್ರೇಡ್೨ತಹಶೀಲ್ದಾರ್ ರಾಜೇಂದ್ರ, ಪಿಡಿಒ ಮತ್ತು ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.