ನಾಳೆ ಆರ್‌ಸಿಯು 13ನೇ ವಾರ್ಷಿಕ ಘಟಿಕೋತ್ಸವ

| Published : Apr 10 2025, 01:20 AM IST

ಸಾರಾಂಶ

ಹಿರೇಬಾಗೆವಾಡಿಯಲ್ಲಿ 126 ಎಕರೆ ಪ್ರದೇಶದಲ್ಲಿ ಆಡಳಿತ ಕಟ್ಟಡಗಳು ಹಾಗೂ ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಕಾರ್ಯವು ಮುಕ್ತಾಯ ಹಂತದಲ್ಲಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ವಾರ್ಷಿಕ ಘಟಿಕೋತ್ಸವವು ಏ.11ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್ ತಿಳಿಸಿದರು.

ನಗರದ ವಾರ್ತಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯಪಾಲ ಥಾವರ್‌ ಚಂದ ಗೆಹ್ಲೋಟ್ ವಹಿಸುವರು. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ನೂತನ ಪದವೀಧರರನ್ನು ಉದ್ದೇಶಿ ಮಾತನಾಡಲಿದ್ದಾರೆ. ಹಿರಿಯ ಇಂಗ್ಲಿಷ ಪ್ರಾಧ್ಯಾಪಕರು, ಸಾಹಿತ್ಯ ವಿಮರ್ಶಕ ಪದ್ಮಶ್ರೀ ಪುರಸ್ಕೃತ ಪ್ರೊ.ಗಣೇಶ ನಾರಾಯಣದಾಸ ದೇವಿ ಘಟಿಕೋತ್ಸವದ ಭಾಷಣ ಮಾಡುವರು ಎಂದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯವರು ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಜ್ಞಾನಮುಖಿ, ಸಮಾಜಮುಖಿ, ಉದ್ಯೋಗಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಶೈಕ್ಷಣಿಕವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿದೆ. ಹಿರೇಬಾಗೆವಾಡಿಯಲ್ಲಿ 126 ಎಕರೆ ಪ್ರದೇಶದಲ್ಲಿ ಆಡಳಿತ ಕಟ್ಟಡಗಳು ಹಾಗೂ ಶೈಕ್ಷಣಿಕ ಕಟ್ಟಡಗಳ ನಿರ್ಮಾಣ ಕಾರ್ಯವು ಮುಕ್ತಾಯ ಹಂತದಲ್ಲಿದ್ದು, ಮೂಲಭೂತ ಸೌಕರ್ಯಗಳಾದ ರಸ್ತೆ ಹಾಗೂ ನೀರು ಸರಬರಾಜು ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಈ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಹಾಗೂ ವಿಜಯಪುರ ಜಿಲ್ಲೆಗಳ 361 ಮಹಾವಿದ್ಯಾಲಯಗಳು ಸಂಯೋಜನೆಗೊಂಡಿದ್ದು 1.4 ಲಕ್ಷ ಸ್ನಾತಕ, ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿಧ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‌ ಅಧ್ಯಯನ ಪೀಠ, ರಾಣಿ ಚನ್ನಮ್ಮ ಅಧ್ಯಯನ ಪೀಠ, ಸಂಗೋಳ್ಳಿ ರಾಯಣ್ಣ ಅಧ್ಯಯನ ಪೀಠಗಳು ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಸ್ತುತ ನಾಲ್ಕು ವಿಷಯಗಳಲ್ಲಿ ಪಿ.ಜಿ. ಡಿಪ್ಲೊಮಾ ಕೋರ್ಸ್‌ಗಳು ಹಾಗೂ 334ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳ ಕುರಿತು ಪಿಎಚ್‌ಡಿ ಸಂಶೋಧನೆಗಳು ಜರುಗುತ್ತಿವೆ ಎಂದರು.

ಗೌರವ ಡಾಕ್ಟರೇಟ್ ಪ್ರಶಸ್ತಿ:

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದ ಸಂದರ್ಭದಲ್ಲಿ ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ನಿಡಸೋಸಿಯ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪೀಠಾದಿಪತಿ ಪಂಚಮ ಶ್ರೀ ಶಿವಲಿಂಗೇಶ್ವರ ಸ್ವಾಮೀಜಿಗೆ ಗೌರವ ಡಾಕ್ಟರೇಟ್‌ ಪದವಿಯನ್ನು, ಸಂವಿಧಾನ ಜಾಗೃತಿಯಲ್ಲಿ ಕಾರ್ಯತತ್ಪರಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸಗೆ ಡಾಕ್ಟರ್‌ ಆಫ್ ಲಾ ಗೌರವ ಹಾಗೂ ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಸೇವೆಗಾಗಿ ವಿಜಯಪುರದ ಸೀಕ್ಯಾಬ್ ಅಧ್ಯಕ್ಷ ಶಮಸುದ್ಧಿನ್ ಅಬ್ದುಲ್ಲಾ ಪುಣೇಕರ್‌ಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಸಲ್ಲಿಸಲಾಗುವುದೆಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಒಟ್ಟು 46012 ವಿಧ್ಯಾರ್ಥಿಗಳು ಸ್ನಾತಕ ಪದವಿಯನ್ನು ಹಾಗೂ 2866 ವಿಧ್ಯಾರ್ಥಿಗಳು ಸ್ನಾತ್ತಕೋತ್ತರ ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದು, 11 ಸುವರ್ಣ ಪದಕಗಳನ್ನು ಹಾಗೂ ಒಂದು ನಗದು ಬಹುಮಾನವನ್ನು ಸ್ನಾತಕ ಹಾಗೂ ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು 20 ಪಿಎಚ್‌ಡಿ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದರು.

ಸ್ವರ್ಣ ಪದಕ ವಿಜೇತರು:

ಸ್ನಾತಕ ವಾಣಿಜ್ಯ ವಿಭಾಗದಲ್ಲಿ ಗೋಕಾಕನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಬಷೀರಾ ಎಂ. ಮಿಲಾಡಿ, ವಿಜ್ಞಾನ ವಿಭಾಗದಲ್ಲಿ ಜಮಂಡಿಯ ತುಂಗಳ ಸ್ಕೂಲ್‌ ಆಫ್ ಬೇಸಿಕ್ ಮತ್ತು ಅಪ್ಲೆಯಡ್ ಸೈನ್ಸ್ ಕಾಲೇಜಿನ ಅಶ್ವಿನಿ ಎಸ್ ಕುಂಬಾರ, ಇಂಗ್ಲೀಷ ವಿಭಾಗದಲ್ಲಿ ಬಾಗಲಕೋಟೆಯ ಬಸವೇಶ್ವರ ಕಾಲೇಜಿನ ಯಂಕಪ್ಪ ಪುಜಾರಿ, ಕನ್ನಡ ವಿಭಾಗದಲ್ಲಿ ಬೆಳಗಾವಿಯ ಆರ್.ಪಿ.ಡಿ ಕಾಲೇಜಿನ ಮುಸ್ಕಾನ ಹೊಸಳ್ಳಿ, ಸಮಾಜ ಶಾಸ್ತ್ರ ವಿಭಾಗದಲ್ಲಿ ಗೋಕಾಕನ ಜೆ.ಎಸ್.ಎಸ್ ಕಾಲೇಜಿನ ತಿಲಕಸಿಂಗ್ ರಜಪುತ, ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಿವಶಂಕರ ಕಾಂಬಳೆ, ಸಮಾಜಶಾಸ್ತ್ರ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶ್ರೇಯಸ್ಸ ಅಂಗಡಿ, ಎಂಬಿಎ ವಿಭಾಗದಲ್ಲಿ ಹೀನಾಕೌಸರ ತುಬಾಕಿ, ಗಣಿತಶಾಸ್ತರ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶ್ರೀದೇವಿ ಅರಕೇರಿ, ವಾಣಿಜ್ಯ ವಿಭಾಗದಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಸಂತೋಷ ತಳವಾರ ಅವರು ಸ್ವರ್ಣ ಪದಕಗಳನ್ನು ಪಡೆಯಲಿದ್ದಾರೆಂದರು.

ಸುದ್ದಿಗೋಷ್ಠಿಯಲ್ಲಿ ಆರ್‌ಸಿಯು ಕುಲಸಚಿವರಾದ ಸಂತೋಷ ಕಾಮಗೌಡ, ರವೀಂದ್ರನಾಥ ಕದಮ್, ಹಣಕಾಸು ಅಧಿಕಾರಿ ಎಂ.ಎ.ಸಪ್ನ, ಪ್ರೊ.ಕಮಲಾಕ್ಷಿ ತಡಸದ ಹಾಗೂ ಪ್ರೊ.ಅಶೋಕ ಡಿಸೋಜಾ ಉಪಸ್ಥಿತರಿದ್ದರು.