ಸಾರಾಂಶ
ನೇತ್ರ ಶಸ್ತ್ರಚಿಕಿತ್ಸೆ ಜನಪ್ರಿಯವಾದ ಸೇವೆಯಾಗಿದ್ದು, ಕೋಟ್ಯಂತರ ಜನ ಇದರ ಪ್ರಯೋಜನವನ್ನು ಹೊಂದಿದ್ದಾರೆ. ದೇಶದಲ್ಲಿ ಯಾವುದೇ ಸಮಸ್ಯೆ ತಲೆದೋರಿದಾಗ ತತ್ಕ್ಷಣ ನೆರವಿಗೆ ಧಾವಿಸುವುದು ಲಯನ್ಸ್ ಸಂಸ್ಥೆಯಾಗಿದೆ.
ಸಿದ್ದಾಪುರ: ಜೀವನದಲ್ಲಿ ಅವಕಾಶ ವಂಚಿತರಿಗೆ ಸಹಕರಿಸುವುದು ಒಳ್ಳೆಯ ಕೆಲಸ. ಇಂಥ ಮಹಾನ್ ಕಾರ್ಯವನ್ನು ಲಯನ್ಸ್ ಸಂಸ್ಥೆ ಮಾಡುತ್ತಿದೆ. ಜತ್ತಿನಾದ್ಯಂತ ವಿವಿಧ ದೇಶಗಳಲ್ಲಿ ತನ್ನ ಶಾಖೆಗಳ ಮೂಲಕ ಕಾರ್ಯನಿರ್ವಹಿಸುತ್ತಿದೆ ಎಂದು ಲಯನ್ಸ್ ೩೧೭ ಜಿಲ್ಲೆಯ ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಲಯನ್ ಕೃಷ್ಣೇಗೌಡ ತಿಳಿಸಿದರು.
ಲಯನ್ಸ್ ಬಾಲಭವನದಲ್ಲಿ ಲಯನ್ ಎ.ಜಿ. ನಾಯ್ಕ ಅಧ್ಯಕ್ಷ ಹುದ್ದೆ ಹಾಗೂ ಉಳಿದ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಹುದ್ದೆಯ ಜವಾಬ್ದಾರಿಯನ್ನು ಬೋಧಿಸಿ ಮಾತನಾಡಿದರು.ನೇತ್ರ ಶಸ್ತ್ರಚಿಕಿತ್ಸೆ ಜನಪ್ರಿಯವಾದ ಸೇವೆಯಾಗಿದ್ದು, ಕೋಟ್ಯಂತರ ಜನ ಇದರ ಪ್ರಯೋಜನವನ್ನು ಹೊಂದಿದ್ದಾರೆ. ದೇಶದಲ್ಲಿ ಯಾವುದೇ ಸಮಸ್ಯೆ ತಲೆದೋರಿದಾಗ ತತ್ಕ್ಷಣ ನೆರವಿಗೆ ಧಾವಿಸುವುದು ಲಯನ್ಸ್ ಸಂಸ್ಥೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ಕುಮಾರ್ ಗೌಡರ್ ಹೊಸೂರು, ನೂತನ ಕೋಶಾಧ್ಯಕ್ಷರಾಗಿ ಅಶೋಕ ಹೆಗಡೆ ಗುಂಜಗೋಡು, ನಿಕಟಪೂರ್ವ ಅಧ್ಯಕ್ಷರಾಗಿ ರವಿ ಎಂ. ಪಾಟೀಲ್, ಉಪಾಧ್ಯಕ್ಷರಾಗಿ ಆರ್.ಎಂ. ಪಾಟೀಲ್ ಅವರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.ಮಾಜಿ ಜಿಲ್ಲಾ ಗವರ್ನರ್ ಗಿರೀಶ್ ಕುಚ್ಚಿನಾಡು ಸೇವಾ ಚಟುವಟಿಕೆಗಳನ್ನು ನೆರವೇರಿಸಿ ಆಶಾ ಕಾರ್ಯಕರ್ತೆಯರಿಗೆ ಛತ್ರಿಯನ್ನು ವಿತರಿಸಿದರು.
ಮುಖ್ಯ ಅತಿಥಿ ಡಾ. ರವಿ ಹೆಗಡೆ ಹೂವಿನಮನೆ, ಪ್ರಾದೇಶಿಕ ಅಧ್ಯಕ್ಷ ಆರ್.ಎಚ್. ನಾಯ್ಕ ಗೋಕರ್ಣ, ವಲಯ ಅಧ್ಯಕ್ಷರಾದ ಶ್ಯಾಮಲಾ ಹೆಗಡೆ ಹೂವಿನಮನೆ ಮತ್ತು ಅಶೋಕ ಹೆಗಡೆ ಶಿರಸಿ ಮಾತನಾಡಿದರು.ಜಗತ್ತಿನಲ್ಲಿಯೇ ಸದಸ್ಯತ್ವದ ಬೆಳವಣಿಗೆಗಾಗಿ ೩ನೇ ಸ್ಥಾನ ಪಡೆದ ಹಾಗೂ ಭಾರತದಲ್ಲಿ ಮೊದಲ ಸ್ಥಾನ ಪಡೆದ ಕೃಷ್ಣೇಗೌಡ ಅವರನ್ನು ಸನ್ಮಾನಿಸಲಾಯಿತು.
ನೂತನ ಅಧ್ಯಕ್ಷ ಎ.ಜಿ. ನಾಯ್ಕ ಮಾತನಾಡಿದರು. ಅವರ ಪತ್ನಿ ಸವಿತಾ ನಾಯ್ಕ ಉಪಸ್ಥಿತರಿದ್ದರು. ನಿರ್ಗಮಿತ ಅಧ್ಯಕ್ಷ ಆರ್.ಎಂ. ಪಾಟೀಲ್ ಹೊಸೂರು ಸ್ವಾಗತಿಸಿದರು. ಅರ್ಚನಾ ಹೆಗಡೆ ದೇವರಸ್ತುತಿಯನ್ನು ಪ್ರಸ್ತುತ ಪಡಿಸಿದರು. ಎಂ.ಆರ್. ಪಾಟೀಲ್ ಅತಿಥಿಗಳನ್ನು ಪರಿಚಯಿಸಿದರು. ವೀಣಾ ಶೇಟ್ ಅವರು ನೂತನ ಪದಾಧಿಕಾರಿಗಳ ಪರಿಚಯಿಸಿದರು. ಕಾರ್ಯದರ್ಶಿ ಕುಮಾರ್ ಗೌಡರ್ ವಂದಿಸಿದರು. ಜಿ.ಜಿ. ಹೆಗಡೆ ಬಾಳಗೋಡ ನಿರೂಪಿಸಿದರು.