ಕನ್ನಡಪ್ರಭ ವಾರ್ತೆ ಸಾಗರ
ಬೇಸೂರಿನಲ್ಲಿ ಪ್ರಸ್ತಾಪಿತ ಅಣುವಿದ್ಯುತ್ ಸ್ಥಾವರ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು. ಸ್ಥಳೀಯರ ಹಿತರಕ್ಷಣೆಗಾಗಿ ನಾನು ಎಂತಹ ಹೋರಾಟಕ್ಕೂ ಸಿದ್ದನಿದ್ದೇನೆ. ಒಂದೊಮ್ಮೆ ಯೋಜನೆ ಅನುಷ್ಠಾನಕ್ಕೆ ಮುಂದಾದರೆ ನಾನು ರಾಜ್ಯ ಸರ್ಕಾರದ ವಿರುದ್ದ ನಿಲ್ಲಲು ಸಿದ್ದನಿದ್ದೇನೆ ಎಂದು ಶಾಸಕ, ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಕರೆಯಲಾಗಿದ್ದ ವಿಶೇಷ ಗ್ರಾಮ ಸಭೆಯಲ್ಲಿ ಪಾಲ್ಗೊಂಡು, ಗ್ರಾಮಸ್ಥರು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ನಾಡಿಗೆ ವಿದ್ಯುತ್ ನೀಡಲು ಈ ಭಾಗದ ಜನರು ಎರಡು ಬಾರಿ ಸರ್ವಸ್ವವನ್ನು ಕಳೆದುಕೊಂಡು ಈಗ ಹೊಸ ಬದುಕು ಕಟ್ಟಿಕೊಳುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅವರ ಮೇಲೆ ಮತ್ತೊಂದು ಮಾರಕ ಯೋಜನೆ ಹೊರೆ ಹಾಕುತ್ತಿರುವುದನ್ನು ಸಹಿಸುವುದಿಲ್ಲ ಎಂದರು.
ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರ ಬೇಡವೆಂದು ಮುಖ್ಯಮಂತ್ರಿ, ಕಂದಾಯ ಸಚಿವರು, ರಾಜ್ಯದ ಪ್ರಧಾನ ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದ್ದೇನೆ. ಇದಕ್ಕೆ ಎಲ್ಲರೂ ಪೂರಕವಾಗಿ ಸ್ಪಂದಿಸಿದ್ದಾರೆ. ಯೋಜನೆ ಕೈಬಿಡುವಂತೆ ಸಂಸದ ಬಿ.ವೈ.ರಾಘವೇಂದ್ರ ಸಹ ಕೇಂದ್ರದ ಮೇಲೆ ಒತ್ತಡ ತರಬೇಕು. ಮಂಗಳವಾರ ಖುದ್ದಾಗಿ ಮುಖ್ಯಮಂತ್ರಿ, ರಾಜ್ಯದ ಪ್ರಧಾನ ಕಾರ್ಯದರ್ಶಿಯವನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.ರಾಜ್ಯದಲ್ಲಿ ಸಂಪುಟ ಪುನರ್ ರಚನೆ ಖಚಿತ. ಮುಖ್ಯಮಂತ್ರಿ ಬದಲಾವಣೆ ಆಗುತ್ತದೆಯೋ, ಬಿಡುತ್ತದೆಯೋ ಎಂದು ಹೇಳಲು ಆಗುವುದಿಲ್ಲ. ಆದರೆ ಹೈಕಮಾಂಡ್ ಗೊಂದಲ ಆಗದಂತೆ ಸಮಸ್ಯೆ ಬಗೆಹರಿಸಬೇಕು. ಅನಗತ್ಯ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಉಂಟಾಗುತ್ತದೆ. ಸಂಪುಟ ಪುನರ್ ರಚನೆ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆ ಇದೆ. ಈಗಾಗಲೆ ಹೈಕಮಾಂಡ್ಗೆ ನಮ್ಮ ಬೇಡಿಕೆಯನ್ನು ತಿಳಿಸಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ತಹಸೀಲ್ದಾರ್ ಪ್ರದೀಪ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಣಾಧಿಕಾರಿ ಶಿವಪ್ರಕಾಶ್, ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಇಂದೂಧರ ಬೇಸೂರು ಇತರರು ಹಾಜರಿದ್ದರು.
ಸಚಿವ ಸ್ಥಾನಕ್ಕಾಗಿ ಇಂದು ದೆಹಲಿಗೆ
ಸಚಿವ ಸ್ಥಾನದ ಬೇಡಿಕೆ ಈಡೇರಿಸಲು ಒತ್ತಾಯಿಸಿ ಮಂಗಳವಾರ ೪೦ ಶಾಸಕರು ದೆಹಲಿಗೆ ಹೋಗುತ್ತಿದ್ದೇವೆ. ಒಂದೋ ಸಚಿವ ಸ್ಥಾನ ಕೊಡಬೇಕು. ಇಲ್ಲ ಹೈಕಮಾಂಡ್ ತನ್ನ ನಿರ್ಧಾರ ಏನೆಂದು ಪ್ರಕಟಿಸಬೇಕು. ಇನ್ನು ಚುನಾವಣೆಗೆ ಎರಡು ವರ್ಷವಿದೆ. ಈಗಲೇ ನಮಗೆ ಸಚಿವ ಸ್ಥಾನ ನೀಡಿದರೆ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂದು ಶಾಸಕ ಬೇಳೂರು ತಿಳಿಸಿದರು.ಈಚೆಗೆ ನಾವು ದೆಹಲಿಗೆ ಹೋಗಿ ನಮ್ಮ ಹಕ್ಕನ್ನು ಪಕ್ಷದ ಪ್ರಮುಖರ ಎದುರು ವ್ಯಕ್ತಪಡಿಸಿ ಬಂದಿದ್ದೇವೆ. ಐದು ರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಬನ್ನಿ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಗಳವಾರ ದೆಹಲಿಗೆ ಹೋಗುತ್ತಿದ್ದೇವೆ ಎಂದರು.