ಇಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್

| Published : May 21 2025, 12:00 AM IST

ಸಾರಾಂಶ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದಲೂ ಸಾಧಾರಣ ಮಳೆಯಾಗಿದೆ. ಬುಧವಾರ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗಿನಿಂದಲೂ ಸಾಧಾರಣ ಮಳೆಯಾಗಿದೆ. ಬುಧವಾರ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಹಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಯಿತು.

ಜಿಲ್ಲೆಯ ಕುಂದಚೇರಿ, ಕಾಕೋಟುಪರಂಬು, ಮೂರ್ನಾಡು, ಮಗ್ಗುಲ, ದೊಡ್ಡಪುಲಿಕೋಟು, ಕುಶಾಲನಗರ, ಸುಂಟಿಕೊಪ್ಪ, ಚೆಟ್ಟಳ್ಳಿ, ಬೇಂಗೂರು ಚೇರಂಬಾಣೆ, ಅಮ್ಮತ್ತಿ, ಶ್ರೀಮಂಗಲ, ಬಾಳೆಲೆ, ತಾವಳಗೇರಿ, ನಾಂಗಾಲ, ತಲಕಾವೇರಿ, ವಿರಾಜಪೇಟೆ, ಗೋಣಿಕೊಪ್ಪ, ಭಾಗಮಂಡಲ, ಅರಪಟ್ಟು, ಕುಟ್ಟಂದಿ ಸೇರಿದಂತೆ ವಿವಿಧೆಡೆ ಬೆಳಗ್ಗಿನಿಂದಲೂ ಸಾಧಾರಣ ಮಳೆ ಸುರಿಯಿತು.

--------------------

ಸಿದ್ದಾಪುರ ಭಾಗದಲ್ಲಿ ಸಾಧಾರಣ ಮಳೆಸಿದ್ದಾಪುರ: ಕೊಡಗಿನ ಸಿದ್ದಾಪುರದಲ್ಲಿ ಬೆಳಗ್ಗೆಯಿಂದಲೇ ಸಾಧಾರಣ ಮಳೆ ಸುರಿದಿದ್ದು ಮಳೆ ಕೆಲವು ಸಮಯ ಮಾತ್ರ ಬಿಡುವು ನೀಡಿದೆ. ಬೆಳಗ್ಗೆಯಿಂದಲೇ ಸಾಧಾರಣ ಮಳೆ ಸುರಿದ ಹಿನ್ನೆಲೆಯಲ್ಲಿ ಬಹುತೇಕ ಕಾರ್ಮಿಕರು ಬಾರಿ ಮಳೆಯಾಗುತ್ತದೆಂದು ಭಾವಿಸಿ ಕೆಲಸಕ್ಕೆ ತೆರಳದೆ ಮನೆಯಲ್ಲಿಯೆ ಉಳಿದರು. ದ್ವಿಚಕ್ರ ಸವಾರರು ಮಾತ್ರ ಸುರಿದ ಮಳೆಯಿಂದಾಗಿ ಪರದಾಡುವಂತಾಯಿತು.

-------------------------------

ಕುಶಾಲನಗರದಲ್ಲಿ ಮೋಡ ಕವಿದ ವಾತಾವರಣ

ಕುಶಾಲನಗರ: ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣದೊಂದಿಗೆ ಅಲ್ಲಲ್ಲಿ ಅಲ್ಪ ಪ್ರಮಾಣದ ಮಳೆ ಸುರಿದಿದೆ. ಮಂಗಳವಾರ ಬೆಳಗ್ಗಿನಿಂದ ಸಂಜೆ ತನಕ ಮೋಡ ಮುಸುಕಿದ ವಾತಾವರಣ ಕಂಡುಬಂದಿತ್ತು.