ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ನೇತ್ರಗಳು ಮಾನವ ಶರೀರದ ಪ್ರಮುಖ ಅಂಗವಾಗಿದ್ದು, ಆರೋಗ್ಯಪೂರ್ಣ ನೇತ್ರಗಳನ್ನು ಹೊಂದಲು ಪೌಷ್ಟಿಕ ಆಹಾರ ಸೇವಿಸಬೇಕು. ನೇತ್ರ ಸುರಕ್ಷತೆಗೆ ಸಕಾಲಿಕ ತಪಾಸಣೆ ಮತ್ತು ಚಿಕಿತ್ಸೆ ಪಡೆದು ಎಲ್ಲರೂ ತಮ್ಮ ಚಿತ್ತ ಜಾಗೃತಿಗೊಳಿಸಬೇಕೆಂದು ಎಸ್‌ಟಿಸಿ ಮಹಾವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಮಂಜುನಾಥ ಬೆನ್ನೂರ ಹೇಳಿದರು.

ಜಮಖಂಡಿಯ ಲಯನ್ಸ್ ಸಂಸ್ಥೆಯವರು ಎಂ.ಎಂ. ಜೋಶಿ ನೇತ್ರಾಲಯದಡಿ ಹಮ್ಮಿಕೊಂಡಿದ್ದ ಕಲಾ, ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳ ನೇತ್ರ ಉಚಿತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದಲ್ಲಿ ಮಾತನಾಡಿ, ನಮ್ಮ ಆಹಾರ ಕ್ರಮಗಳಲ್ಲಿನ ವ್ಯತ್ಯಾಸ, ಕಾಂಕ್ರೀಟ್‌ ನಗರೀಕರಣ, ಗಣಕಯಂತ್ರ ಮತ್ತು ಮೊಬೈಲ್ ಬಳಕೆ ಮಿತಿಮೀರಿದೆ. ನೇತ್ರ ಸಂಬಂಧಿತ ಸಮಸ್ಯೆಗಳು ಹೆಚ್ಚುತ್ತಿವೆ ಎಂದರು. ಜನತಾ ಶಿಕ್ಷಣ ಸಂಘದ ನಿರ್ದೇಶಕ ಪಂಡಿತ ಹನಗಂಡಿ ಮಾತನಾಡಿ, ಮಕ್ಕಳು ಸೇರಿದಂತೆ ವಯಸ್ಕರು ಕಂಪ್ಯೂಟರ್ ಹಾಗೂ ಮೊಬೈಲ್ ತಂತ್ರಜ್ಞಾನ ಬಳಕೆ ವಿಪರೀತವಾಗಿದೆ. ಕಣ್ಣಿನ ಆರೋಗ್ಯಕ್ಕೆ ಪೂರಕ ಆಹಾರಕ್ರಮ ಮತ್ತು ನಿಯಮಿತ ತಪಾಸಣೆ ಮೂಲಕ ಆರೋಗ್ಯ ಉಳಿಸಿಕೊಳ್ಳಬೇಕು. ಅಗತ್ಯಕ್ಕಿಂತ ಹೆಚ್ಚು ಮೊಬೈಲ್ ಹಾಗೂ ಕಂಪ್ಯೂಟರ್ ಬಳಕೆಗೆ ಕಡಿವಾಣ ಹಾಕಬೇಕು. ಮಕ್ಕಳಲ್ಲಿ ಮೊಬೈಲ್ ಗೇಮಿಂಗ್ ಹಾವಳಿ ಹೆಚ್ಚಿದ್ದು, ಮಕ್ಕಳ ನೇತ್ರ ಸಂರಕ್ಷಣೆಯತ್ತ ಪಾಲಕರು ಜಾಗೃತರಾಗಬೇಕೆಂದರು.

ಲಯನ್ಸ್ ಸಂಸ್ಥೆ ಅಧ್ಯಕ್ಷ ಡಾ.ಎಂ.ಪಿ. ತಾನಪ್ಪಗೋಳ ಮಾತನಾಡಿ, ವಿಶ್ವಾದ್ಯಂತ ೪೮ ಸಾವಿರ ಶಾಖೆಗಳಿರುವ ಸೇವಾ ಮನೋಭಾವನೆಯೇ ಮೂಲ ಉದ್ದೇಶ ಹೊಂದಿರುವ ಎಂ.ಎಂ. ಜೋಶಿ ನೇತ್ರಾಲಯ ಕರ್ನಾಟಕ, ಗೋವಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಸೇವೆ ಮಾಡುತ್ತಿದೆಯೆಂದರು. ಪ್ರಾಚಾರ್ಯ ಡಾ.ಜಿ.ಆರ್. ಜುನ್ನಾಯ್ಕರ್, ಶಂಭು ಉಕ್ಕಲಿ, ಸುರೇಶ ನಿಡೋಣಿ ಕಣ್ಣಿನ ರಕ್ಷಣೆಯ ಅಗತ್ಯ ಕ್ರಮಗಳ ಬಗ್ಗೆ ಮಾತನಾಡಿದರು.

ಡಾ.ಮಹಾದೇವ ಶಿರಹಟ್ಟಿ, ಜಿ.ಎಸ್.ಪಾಟೀಲ, ರಶ್ಮಿ ಕೊಕಟನೂರ, ಸುನಂದಾ ಭಜಂತ್ರಿ ಸೇರಿದಂತೆ ಅನೇಕರಿದ್ದರು. ತಜ್ಞರಿಂದ ಉಪನ್ಯಾಸಕರ, ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರ ನೇತ್ರ ತಪಾಸಣೆ ಜರುಗಿತು.