ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಹಾಲುಮತ ಸಮಾಜ ನಾಯಕ ಕೆ.ಎಸ್.ಈಶ್ವರಪ್ಪನವರನ್ನು ಹಿಂದುಳಿದವರು ಎಂಬ ಕಾರಣಕ್ಕೆ ಬಿಜೆಪಿ ಸಂಪೂರ್ಣ ಕಡೆಗಣಿಸಿದ್ದಲ್ಲದೇ ಪಕ್ಷದಿಂದ ಉಚ್ಚಾಟಿಸುವ ಮೂಲಕ ಕುರುಬ ಸಮಾಜಕ್ಕೆ ಅನ್ಯಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಸ್ವಾಭಿಮಾನಿ ಹಾಲುಮತ ಸಮಾಜದವರು ಬಿಜೆಪಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವ ಮೂಲಕ ಸಿದ್ದರಾಮಯ್ಯನವರ ಕೈಬಲಪಡಿಸಬೇಕು ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಕರೆ ನೀಡಿದರು.ಪಟ್ಟಣದ ಆಲಮಟ್ಟಿ ರಸ್ತೆ ಮಾರ್ಗದಲ್ಲಿರುವ ಮದರಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ತಾಲೂಕಿನ ಹಾಲುಮತ ಸಮಾಜ ಬಾಂಧವರ ಮುಖಂಡರ ಹಾಗೂ ಕಾರ್ಯಕರ್ತರ ಬೃಹತ್ ಸಭೆಯಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಶ್ರೀಮಂತರ, ಬಂಡವಾಳ ಶಾಹಿಗಳ ಸರ್ಕಾರವಾಗಿದೆ. ಬಡವರ, ಹಿಂದುಳಿದವರ, ರೈತರ, ಮಹಿಳೆಯರ ಪರವಾದ ಸರ್ಕಾರವಲ್ಲ. ಬಡವರ ರೈತರ ಜನಪರ ಯೋಜನೆಗಳನ್ನು ಇವರು ಅನುಷ್ಠಾನಗೊಳಿಸಿಲ್ಲ. ಇದೇಲ್ಲ ಜನರಿಗೆ ಗೊತ್ತಾಗಿ ಜನ ಬಿಜೆಪಿ ಎಲ್ಲಿ ತಿರಸ್ಕರಿಸುತ್ತಾರೋ ಎಂಬ ಭಯದಿಂದ ದೇಶದಲ್ಲಿ ಹಿಂದೂ-ಮುಸ್ಲಿಂ ಎನ್ನುವ ಬೇಧ ಭಾವ ಮೂಡಿಸಿ ಗಲಾಟೆಗಳನ್ನು ಮಾಡಿಸಿ ಎಲ್ಲೆಡೆ ಅಶಾಂತಿ ವಾತಾವರಣ ನಿರ್ಮಿಸುವ ಮೂಲಕ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದರು.ಆದರೆ, ಹಾಲುಮತ ಸಮಾಜದ ಒಬ್ಬ ಹಿಂದುಳಿದ ನಾಯಕ, ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆ ಪೂರ್ವದಲ್ಲಿ ನೀಡಿದ ಪಂಚ ಗ್ಯಾರಂಟಿಗಳನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಈಡೇರಿಸಿದೆ. ಈಮೂಲಕ ನುಡಿದಂತೆ ನಡೆದಿದೆ. ಸಿದ್ದರಾಮಯ್ಯನವರು ರಾಜಕೀಯವಾಗಿ ಬೆಳೆಯಬಾರದು, ಇವರನ್ನು ಹೇಗಾದರೂ ಮಾಡಿ ರಾಜಕೀಯವಾಗಿ ಮುಗಿಸಬೇಕು ಎಂಬ ಉದ್ದೇಶ ಬಿಜೆಪಿ ಅವರು ಅವರ ಮೇಲೆ ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.ಈ ವೇಳೆ ಹಾಲುಮತ ಸಮಾಜದ ನಿವೃತ್ತ ಡಿವೈಎಸ್ಪಿ ಎಸ್.ಎಸ್.ಹುಲ್ಲೂರ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಹಾಲುಮತ ಸಮಾಜದ ಹಿರಿಯ ಮುಖಂಡ ಬಿ.ಕೆ.ಬಿರಾದಾರ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮದರಿ, ಸೋಮನಾಥ ಕಳ್ಳಿಮನಿ, ಮಾತನಾಡಿ, ಬಿಜೆಪಿಯವರು ಸಂವಿಧಾನವನ್ನೇ ಸರಿಯಾಗಿ ಓದಿಲ್ಲ. ಹಾಗಾಗಿ ಸಂವಿಧಾನದ ಮಹತ್ವ ಅವರಿಗೆ ಗೊತ್ತಿಲ್ಲದ ಕಾರಣ ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿ ಸಂವಿಧಾನ ಬದಲಾಯಿಸಬೇಕು ಎಂದು ಬಿಜೆಪಿಯ ಅವರು ಹೇಳುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ, ಬಿಜೆಪಿ ಅವರು ದೇಶಕ್ಕಾಗಿ ಹೋರಾಡಿದವರೂ ಒಬ್ಬರೂ ಇಲ್ಲ. ಮಾತೆತ್ತಿದರೆ ದೇಶಾಭಿಮಾನದ ಮಾತುಗಳನ್ನಾಡಿ ಜಾತಿ, ಧರ್ಮ, ಸಂಘರ್ಷದಿಂದ ಸಮಾಜದ ಸ್ವಾಸ್ತ್ಯ ಹಾಳುಗೆಡವುತ್ತಿದೆ. ಜೊತೆಗೆ ಮೋದಿ ಅವರ ಸಾಧನೆ ಶೂನ್ಯವಾಗಿದೆ. ಈ ದಿಸೆಯಲ್ಲಿ ಈ ಬಾರಿ ಎಲ್ಲ ಹಾಲುಮತ ಸಮಾಜ ಬಾಂಧವರು ಜಾಗೃತರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿ.ಕೆ.ಬಿರಾದಾರ, ಶಿವಶಂಕರಗೌಡ ಹಿರೇಗೌಡರ, ಶಾಂತಗೌಡ ಪಾಟೀಲ(ನಡಹಳ್ಳಿ), ಮಲ್ಲಿಕಾರ್ಜುನ ಮದರಿ, ಸಿ.ಬಿ. ಅಸ್ಕಿ, ಗುರು ತಾರನಾಳ, ರಾಯನಗೌಡ ತಾತಾರಡ್ಡಿ, ಹಣಮಂತ ಕುರಿ, ಅಪ್ಪು ನಾಡಗೌಡ, ವೈ.ಎಚ್.ವಿಜಯಕರ, ಮಲ್ಲಾಣ್ಣ ಅಪರಾಧಿ, ಎಸ್.ಎಸ್.ಹುಲ್ಲೂರ, ಸೋಮನಾಥ ಕಳ್ಳಿಮನಿ, ಸಂಗೀತಾ ಕಳ್ಳಿಮನಿ, ರಾಜೇಂದ್ರ ರಾಯಗೊಂಡ, ಬಾಪುರಾಯ ದೇಸಾಯಿ(ಹಡಗಲಿ) ಸುರೇಶ ನಾಡಗೌಡ, ಬಿ.ಎಚ್.ಚಪ್ಪರಬಂದ, ತಾಲೂಕು ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಲಕ್ಷ್ಮಣ ಲಮಾಣಿ ಸೇರಿದಂತೆ ಅನೇಕರು ಇದ್ದರು.